ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಹೊಳಲು ಗ್ರಾಮದಲ್ಲಿ ಶುಕ್ರವಾರ ಸಂಜೆ ಬೀಸಿದ ಭಾರೀ ಬಿರುಗಾಳಿಗೆ ಗ್ರಾಮದ ವಿವಿಧೆಡೆ ತೆಂಗಿನ ಮರಗಳು ನೆಲಕಚ್ಚಿದ್ದು, ವಿದ್ಯುತ್‌ಕಂಬಗಳು ಧರೆಶಾಹಿಯಾಗಿವೆ. ವೃತ್ತದಲ್ಲಿ ಹಾಕಲಾಗಿದ್ದ ಬೃಹತ್ ಕಟೌಟ್‌ವೊಂದು ಬಿರುಗಾಳಿಗೆ ಮುರಿದುಬಿದ್ದಿದೆ.

ಎಚ್.ಡಿ.ಚೌಡಯ್ಯ ಆಲೆಮನೆ ರಸ್ತೆ ಹಾಗೂ ಪುಣ್ಯಶ್ರೀ ಇಂಡಸ್ಟ್ರೀಸ್ ರಸ್ತೆಯಲ್ಲಿ ಹಾಡ್ಯಕೃಷ್ಣರವರ ತೆಂಗಿನ ಮರ ವಿದ್ಯುತ್ ಲೈನ್ ಮೇಲೆ ಬಿದ್ದು ಸುಮಾರು ೧೦ ರಿಂದ ೧೫ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿಯಾಗಿಲ್ಲ. ಬಿರುಗಾಳಿಯಿಂದ ಹೊಳಲು ವೃತ್ತದಲ್ಲಿ ನಿಲ್ಲಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಎಸ್.ಪುಟ್ಟರಾಜುರವರ ಬೃಹತ್ ಕಟೌಟ್ ಮಕಾಡೆ ಮಲಗಿದೆ. ಬಿರುಗಾಳಿ ಬೀಸಿದ ಪರಿಣಾಮ ಹೊಳಲು ಗ್ರಾಮಕ್ಕೆ ಶುಕ್ರವಾರ ಸಂಜೆ ೭ ಗಂಟೆಯಿಂದ ಶನಿವಾರ ರಾತ್ರಿ ೭ ಗಂಟೆಯವರೆಗೆ ವಿದ್ಯುತ್ ಕಡಿತಗೊಂಡಿತ್ತು. ವಿಷಯ ತಿಳಿದ ಚೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಗ್ಗೆಯಿಂದಲೇ ವಿದ್ಯುತ್ ಕಂಬಗಳನ್ನು ಸರಿಪಡಿಸಲು ಕಾರ್ಯ ಪ್ರವೃತ್ತರಾಗಿದ್ದಾರೆ.