ಸಾರಾಂಶ
ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಗಾಳಿ ಮಳೆ ಸುರಿಯುತ್ತಿದ್ದು, ಗಾಳಿಗೆ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದಿವೆ. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಿದೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಗಾಳಿ ಮಳೆ ಸುರಿಯುತ್ತಿದ್ದು, ಗಾಳಿಗೆ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದಿವೆ.ಕಾರ್ಕಳ ತಾಲೂಕಿನ ಅಜೆಕಾರು, ಶಿರ್ಲಾಲು, ಕೆರುವಾಶೆಯಲ್ಲಿ ಮರ ಬಿದ್ದು, ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಹೆಬ್ರಿ ತಾಲೂಕಿನ ಕಬ್ಬಿನಾಲೆ, ದುರ್ಗ, ಶಿವಪುರ, ನಾಡ್ಪಾಲು, ಕಾರ್ಕಳ ತಾಲೂಕಿನ ಮರ್ಣೆ, ಬೈಲೂರು, ನೂರಾಲ್ಬೆಟ್ಟು, ಮಾಳ ಚೌಕಿ ಸೇರಿದಂತೆ ಅನೇಕ ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸ್ಥಗಿತವಾಗಿದೆ.
ಗಾಳಿಗೆ ಕಾರ್ಕಳ ತಾಲೂಕಿನ ಎಣ್ಣೆಹೊಳೆಯ ಪಡ್ಡೇಲುಮಾರ್ ಎಂಬಲ್ಲಿ ಬೃಹತ್ ಗಾತ್ರದ ಕಟೌಟ್ ಗದ್ದೆಗೆ ಬಿದ್ದಿದೆ. ಎಣ್ಣೆಣ್ಣೆಹೊಳೆ- ಹೆರ್ಮುಂಡೆ ಸಂಪರ್ಕಿಸುವ ಹಂಚಿಕಟ್ಟೆ ರಸ್ತೆಯಲ್ಲಿ ಮಹಮ್ಮಾಯಿ ದೇವಾಲಯದ ಬಳಿ ಬೃಹತ್ ಮರ ಬಿದ್ದು ರಸ್ತೆ ಸಂಚಾರಕ್ಕೆ ತೊಡಕುಂಟಾಗಿತ್ತು.ಬದಲಿ ಮಾರ್ಗದಲ್ಲಿ ಚಲಿಸಿದ ಬಸ್: ಶಿರ್ಲಾಲು ಹಾಗೂ ಹಾಡಿಯಂಗಡಿ ಬಳಿ ಬಿದ್ದಿದ್ದ ಮರಗಳನ್ನು ಮೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳಿಯರ ಸಹಕಾರದಿಂದ ತೆರವುಗೊಳಿಸಲಾಯಿತು. ಆದರೆ ಕೆರುವಾಶೆ ಹೆದ್ದಾರಿ ಮಧ್ಯೆ ಬಿದ್ದಿದ್ದ ಹಲಸಿನ ಮರವನ್ನು ತೆರವುಗೊಳಿಸಲು ಹೆಚ್ಚು ಸಮಯ ಬೇಕಾಯಿತು. ಇದರಿಂದಾಗಿ ಕೆರುವಾಶೆ ಸಂಪರ್ಕಿಸುವ ಬಸ್ಗಳು ಅಂಡಾರು, ಶಿರ್ಲಾಲು, ಬಂಗ್ಲೆಗುಡ್ಡೆ ಮೂಲಕ ಶೆಟ್ಟಿ ಬೆಟ್ಟು ರಸ್ತೆಯ ಮೂಲಕ ಕೆರುವಾಶೆ ತಲುಪಿದವು.