ಕುಂದಾಪುರ: ಕುಂದಾಪುರ ಭಾಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಸತತ 4ನೇ ವರ್ಷವೂ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದೆ. ಇಲ್ಲಿನ 15 ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳಿಸಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ರಶ್ಮಿ ಪೈ (598), ಶ್ರಾವ್ಯ ದೇವಾಡಿಗ (597), ಅಕ್ಷತಾ ವೀರಣ್ಣ (596), ಪ್ರಜ್ಞಾ ಎಸ್. ಪೂಜಾರಿ (594), ಇಂಚರಾ ಅಶೋಕ್ (594), ಮಾನ್ಯ (592), ಪ್ರಸಾದ್ ಪೂಜಾರಿ (591), ಸ್ಮೃತಿಕಾ (590), ವಾಣಿಜ್ಯ ವಿಭಾಗದಲ್ಲಿ ಶಮ್ಯ ಶೆಟ್ಟಿ (597), ಪ್ರಥಮ ಕಾಂಚನ್ (596), ಸುಚಿತ್ರ (595), ಅನ್ವಿತಾ (594), ಸಾನಿಕಾ (593), ರನ್ಮಯ್ (592), ಪ್ರೀತನ್ (591), ಕಲ್ಪಿತಾ (592) ಅಂಕ ಗಳಿಸಿ ರಾಜ್ಯ ಮಟ್ಟದಲ್ಲೇ ವಿಶೇಷ ಸಾಧನೆ ಮಾಡಿದ್ದಾರೆ.

ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರರ ಸಾರಥ್ಯದ ಈ ಕಾಲೇಜಿನಲ್ಲಿ ಗ್ರಾಮೀಣ ಭಾಗದ, 10ನೇ ತರಗತಿಯಲ್ಲಿ ಕೇವಲ ಶೇ. 40 ಅಂಕ ಪಡೆದ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಶೇ 85.90 ಕ್ಕೂ ಹೆಚ್ಚು ಅಂಕಗಳಿಸಿರುವುದು ಜನತಾ ಕಾಲೇಜಿನ ಸಾಧನೆ. ರಶ್ಮಿ ಪೈ ರಾಜ್ಯಕ್ಕೆ 3ನೇ ರ್‍ಯಾಂಕ್‌: ಎಸ್.ಎಸ್.ಎಲ್.ಸಿ. ತನಕ ಸರ್ಕಾರಿ ಶಾಲೆಯಲ್ಲಿ ಓದಿದ್ದ ರಶ್ಮಿ ಪಿಯುಸಿಯನ್ನು ಹೆಮ್ಮಾಡಿಯ ಜನತಾ ಕಾಲೇಜಿನಲ್ಲಿ ಮುಂದುವರಿಸಿದ್ದರು. ಇದೀಗ ಜಿಲ್ಲೆಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇವರು ರಾಜೇಶ ಪೈ ಮತ್ತು ಪೂಜಾ ಪೈ ದಂಪತಿಯ ಪುತ್ರಿ. ಕಾಲೇಜಿನ ಪ್ರಾಂಶುಪಾಲರ ಮಾರ್ಗದರ್ಶನ ಮತ್ತು ಅನುಭವಿ ಉಪನ್ಯಾಸಕರ ಅರ್ಥಪೂರ್ಣ ಪಾಠ ಪ್ರವಚನ ಜೊತೆಗೆ ಹೆತ್ತವರ ಪ್ರೋತ್ಸಾಹ ನನ್ನ ಸಾಧನೆಗೆ ದಾರಿದೀಪವಾಗಿದೆ ಎನ್ನುತ್ತಾಳೆ ರಶ್ಮಿ ಪೈ.