ಹೊಂಬುಜ ಸಾನ್ತರ ಮನೆತನದ ವೀರಗಲ್ಲು ಶಾಸನ ಪತ್ತೆ

| Published : Dec 09 2024, 12:50 AM IST

ಸಾರಾಂಶ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ರಾಮನಸರ ಎಂಬ ಗ್ರಾಮದ ಕಾಡಿನಲ್ಲಿ ಪತ್ತೆಯಾಗಿರುವ ಹೊಂಬುಜದ ಸಾನ್ತರ ರಾಜಮನೆತನಕ್ಕೆ ಸಂಬಂಧಿಸಿದ ಒಂದು ವೀರಗಲ್ಲು ಶಾಸನ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ರಾಮನಸರ ಎಂಬ ಗ್ರಾಮದ ಕಾಡಿನಲ್ಲಿ ಹೊಂಬುಜದ ಸಾನ್ತರ ರಾಜಮನೆತನಕ್ಕೆ ಸಂಬಂಧಿಸಿದ ಒಂದು ವೀರಗಲ್ಲು ಶಾಸನ ಪತ್ತೆಯಾಗಿದೆ.

ಹವ್ಯಾಸಿ ಸಂಶೋಧಕ ಕೆ.ಎನ್‌.ಗಣೇಶ್‌ ಎಂಬುವರು ಕಳೆದ ವಾರ ಕ್ಷೇತ್ರಕಾರ್ಯಕ್ಕೆ ಹೋದಾಗ ಈ ಶಾಸನ ದೊರೆತಿದೆ. ಈ ಪ್ರಸ್ತುತ ವೀರಗಲ್ಲು 2 ಅಡಿ ಅಗಲ 4 ಆಡಿ ಉದ್ದ ಇದ್ದು, ಪೂರ್ವಾಭಿಮುಖವಾಗಿ ನೆಡಲಾಗಿದೆ. ವೀರಗಲ್ಲು ಕರಿಕಲ್ಲಿನಲ್ಲಿ ಕೆತ್ತನೆಯಾಗಿ 13 ಸಾಲಿನ ಶಾಸನವನ್ನು ಹೊಂದಿದೆ, ಶಾಸನವು ಶಕವರ್ಷ 1054 ವಿರೋಧಿಕೃತ ಸಂವತ್ಸರದಲ್ಲಿ ರಚನೆಯಾಗಿದ್ದು, ಈ ದಿನಾಂಕವು ಸಾಮಾನ್ಯ ಶಕೆ 1139 ಮಾರ್ಚ್ ಗೆ ಸರಿ ಹೊಂದುತ್ತದೆ.

*ಶಾಸನ ಸಾರ: ಶಾಸನವು ಹೊಂಬುಜದ ಸಾನ್ತರ ಮನೆತನದ ಹೆಮ್ಮಾಡಿ ಸಾನ್ತರ ಆಡಳಿತವನ್ನು ಉಲ್ಲೇಖಿಸುತ್ತಿದ್ದು, ಅವನ ಪ್ರಶಸ್ತಿಗಳನ್ನು ಗುಣಗಾನಿಸಿದೆ. ಉತ್ತರ ಮಧುರೆ ಎಂಬ ಪಟ್ಟಕೊಂಬುರ್ಚ್ಚವನ್ನು ಹೆಮ್ಮಾಡಿ ಸಾಸ್ತರನು ಪಂಚಮಹಾವಾಧ್ಯಗಳಿಂದ ಸಮ್ಮಾನಿತನಾಗಿ ಮಹಾಂಡಳೇಶ್ವ ವೃತ್ತಿಯಿಂದ ಆಳುತ್ತಿದ್ದ, ಹೊಂಬುಜವ ಪದ್ಮಾವತಿ ದೇವಿಯ ವರಪ್ರಸಾದದಿಂದ ಜನಿಸಿದ ಹೆಮ್ಮಾಡಿ ಸಾನ್ತರನು ಬಹುಪರಾಕ್ರಯಾಗಿದ್ದ ಎಂದು ಶಾಸನದಲ್ಲಿ ಕೊಂಡಾಡಲಾಗಿದೆ.

ಶತ್ರುಗಳಿಗೆ ಸಿಂಹಸ್ವಪ್ನನೂ, ಸಾಂತರ ಕುಲಕ್ಕೆ ಮೇರು ಪರ್ವತನೂ ಬಿರುದಭೇರುಂಡ, ಚಂಡಾಟದಲ್ಲಿ ಆಚಾರ್ಯನೂ (ಪೋಲೋ), ಪರ್ವತವಂತಹ ಧೈರ್ಯವಂತನೂ, ಕೀರ್ತಿಗೆ ನಾರಾಯಣಗೂ ಶೌರ್ಯಕ್ಕೆ ಪಾರಾಯಣನೂ, ವೆನರ ಪಾದಗಳನ್ನು ಪೂಜಿಸುವವನೂ, ಶತ್ರು ಸೈನ್ಯವನ್ನು ಗೆದ್ದವನೂ, ಸಾನ್ತರ ಬಲಕ್ಕೆ ಸೂರ್ಯನೂ, ಬಹುಜನರಿಂದ ಹೊಗಳಿಸಿಕೊಂಡದನೂ ರಾಜನೀತಿ ಶಾಸ್ತ್ರದಲ್ಲಿ ಪರಿಣಿತನೂ ಎಂಬ ಬಿರುದುಗಳನ್ನು ಹೆಮ್ಮಾಡಿ ಸಾನ್ತರನಿಗೆ ಇದ್ದುದ್ದಾಗಿ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ನಾನಾ ಬಿರುದುಗಳನ್ನು ಅಲಂಕರಿಸಿದ ಹೆಮ್ಮಾಡಿ ಸಾನ್ತರನು ಸುಖದಿಂದ ರಾಜ್ಯಭಾರ ಮಾಡುತ್ತಿರುವಾಗ ಶಕವರ್ಷ 1054ರಲ್ಲಿ ಸಾಲಿಯೂರು ಎಂಬಲ್ಲಿ ಶತ್ರುಗಳ ವಿರುದ್ಧ ಯುದ್ಧಮಾಡುತ್ತಾನೆ. ಈ ಸಾಲಿಯೂರಿನ ಕಾಳಗದಲ್ಲಿ ಹೆಮ್ಮಾಡಿ ಸಾನ್ತರನ ನೆಚ್ಚಿನ ಸೇನಾನಿಯಾದ ಸಿರಿಯಣ್ಣ ಎಂಬುವನು ವೀರ ಮರಣ ಅಪ್ಪುತ್ತಾನೆ. ಈ ವೀರನಿಗೆ ಮರಣೋತ್ತರವಾಗಿ ಅವನ ಕುಟುಂಬಕ್ಕೆ ಒಂದು ಕೆಯ್ಯಿ(ಅಳತೆಯ ಒಂದು ಪ್ರಮಾಣ) ಕಾವಲಿನ ಸುಂಕವನ್ನು ದಾನ ಬಿಡುಲಾಗುತ್ತದೆ. ಶಾಸನದಲ್ಲಿ ಕೊನೆಯಲ್ಲಿ ದಾನವನ್ನು ಅಪಹರಣ ಮಾಡಿದವರು ತಾಯಿಯ ಹತ್ತು ಹಾಗೂ ತಂದೆಯ ಹನ್ನೊಂದು ಜನ್ಮವನ್ನು ನರಕ ಕಾಣುವಂತೆ ಮಾಡಿದ ಪಾಪ ಬರುತ್ತದೆ. ಅಲ್ಲದೇ ಸಾವಿರ ಆಕಳುಗಳನ್ನು ಮತ್ತು ಸಾವಿರ ಬ್ರಾಹ್ಮಣರನ್ನೂ ಗಂಗೆಯಲ್ಲಿ ಕೊಂದ ಪಾತಕ ಬರುತ್ತವೆ ಎಂಬ ಶಾಪವಿದೆ.

*ಶಾಸನ ಶಿಲ್ಪ: ನವಶೋಧಿತ ವೀರಗಲ್ಲಿನಲ್ಲಿ ನಾಲ್ಕು ಹಂತದ ಶಿಲ್ಪಪಟ್ಟಿಕೆಗಳಿದ್ದು ಕೆಳಗೆ ಕರುವಿಗೆ ಹಾಲು ಕುಡಿಸುತ್ತಿರುವ ಆಕಳನ್ನು ಚಿತ್ರಿಸಲಾಗಿದೆ. ಇದರ ಅರ್ಥ ಹಸುವಿನ ಸಂತತಿಯ ಹಾಗೆ ಕೊಟ್ಟದಾನ ನಿರಂತರವಾಗಿ ಉಪಭೂಗವಾಗಲಿ ಎಂಬುದಾಗಿದೆ. ಎರಡನೆಯ ಹಂತದಲ್ಲಿ ವೀರ ರಣರಂಗದಲ್ಲಿ ಹೋರಾಡುತ್ತಿರುವುದು ಮತ್ತು ಹೋರಾಡುತ್ತಲೆ ಮಡಿದ ಅವನನ್ನು ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯತ್ತಿರುವುದು. ವೀರಮರಣಕ್ಕೆ ಅಪ್ಸರೆಯರಿಂದ ಸಮ್ಮಾನ ದೊರೆಯುತ್ತದೆ ಎಂಬ ಭಾವವನ್ನು ಇಲ್ಲಿ ಕಾಣಬಹುದು.

ಇನ್ನು ಮೂರನೆಯ ಹಂತ ದೈವ ಸನ್ನಿಧಿಯದ್ದಾಗಿದ್ದು ಮಧ್ಯದಲ್ಲಿ ಶಿವಲಿಂಗ, ಶಿವಲಿಂಗವನ್ನು ಪೂಜಿಸುತ್ತಿರುವ ಯತಿ, ವೀರ ಹಾಗೂ ಸೇವಕನನ್ನು ಚಿತ್ರಿಸಲಾಗಿದೆ. ವೀರಮರಣ ಶ್ರೇಷ್ಠವಾದುದು ಎಂಬುದನ್ನು ವೀರನಿಗೆ ಎತ್ತರವಾದ ಆಸನ ಹಾಕುವುದರ ಮೂಲಕ ಅವನನ್ನು ಕೀರ್ತಿಸಲಾಗಿದೆ. ನಾಲ್ಕನೆಯ ಶಿಲ್ಪಪಟ್ಟಿಕೆ ಶಿಥಿಲವಾಗಿದ್ದು ಹೆಮ್ಮಾಡಿ ಸಾನ್ತರ ಕುದುರೆ ಮೇಲೆ ಕುಳಿತ ಶಿಲ್ಪವನ್ನು ಕಾಣಬಹುದು. ಮಧ್ಯ ಶಿವಲಿಂಗ ಆಕೃತಿಯ ತರಹದ ಒಂದು ಶಿಲ್ಪವನ್ನು ನೋಡಬಹುದಾಗಿದೆ.

ಹೆಮ್ಮಾಡಿ ಸಾನ್ತರ.

ನನ್ನ ಅಧ್ಯಯನದ ಮಿತಿಯಲ್ಲಿ ಕಂಡಂತೆ ಪ್ರಸ್ತುತ ಶಾಸನದಲ್ಲಿ ಬರುವ ಹೆಮ್ಮಾಡಿ ಸಾನ್ತರ ಹೊಸದಾಗಿ ಇಲ್ಲಿ ಪರಿಚಿತವಾಗುತ್ತಿದ್ದಾನೆ. ನಾಡೋಜ ಹಂಪ ನಾಗರಾಜಯ್ಯ ಅವರು ಹೊಂಬುಜದ ಸಾಸ್ತರರ ರಾಜಮನೆತನದ ಬಗ್ಗೆ ವಿಸ್ತೃತವಾಗಿ ಅಧ್ಯಯನ ಮಾಡಿ ಮೌಲ್ಯಯುತವಾದ ಗ್ರಂಥಗಳನ್ನು ಬರೆದಿದ್ದಾರೆ. ಸಾಸ್ತರ ಬಗೆಗೆ ಬರೆದ ಅವರ ಯಾವ ಗ್ರಂಥದಲ್ಲಿಯೂ ಕ್ರಿ.ಶ. 1132 ಬರುವ ಈ ಹೆಮ್ಮಾಡಿ ಸಾನ್ತರನ ಉಲ್ಲೇಖವಿಲ್ಲ ಹಾಗಾಗಿ ಹೊಂಬುಜದ ಸಾನ್ತರರ ಆಜ್ಞಾತವಾಗಿದ್ದ ಒಬ್ಬ ಅರಸನನ್ನು ರಾಮನಸರದ ವೀರಗಲ್ಲು ಪರಿಚಯಿಸಿದೆ.

ಸಾನ್ತರ ಬಹಳಷ್ಟು ಅರಸರಿಗೆ ಇರುವ ಪ್ರಶಸ್ತಿಗಳನ್ನು ಹೆಮ್ಮಾಡಿ ಸಾನ್ತರನಿಗೂ ಅನ್ವಯಿಸಲಾಗಿದೆ. ಹೆಮ್ಮಾಡಿ ಸಾಸ್ತರ ಕರನ್ನುಕ(ಪೋಲೋ) ಕ್ರೀಡೆಯಲ್ಲಿ ಆಚಾರ್ಯನಾಗಿದ್ದ ಎಂದು ಶಾಸನದಲ್ಲಿ ಹಾಗೂ ಶಿಲ್ಪದಲ್ಲಿ ತೋರಿಸಲಾಗಿದೆ. ವೀರಗಲ್ಲಿನ ತುದಿಯಲ್ಲಿ ಈ ಭಗ್ನಶಿಲ್ಪವನ್ನು ಕಾಣಬಹುದು. ಸಧ್ಯದ ವೀರಗಲ್ಲು ಸಾನ್ತರರ ಶಾಸನಗಳಿಗೆ ಒಂದು ಹೊಸ ಸೇರ್ಪಡೆಯಾಗಿದೆ. ವೀರಗಲ್ಲಿನ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಲಾಗುತ್ತಿದೆ.

ಶಾಸನ ಶೋಧನೆಯಲ್ಲಿ ಸುರೇಶ್ ಮಂಗಳ ಹಾಗೂ ರಾಮನಸರ ಗ್ರಾಮಸ್ಥರಿಗೆ ಸಹಾಯ ಮಾಡಿದ್ದು, ರಾಮನಸರ ಗ್ರಾಮಸ್ಥರಿಗೆ ಹಾಗೂ ಡಾ.ಪಿ.ಇ.ರವಿಕುಮಾರ ನವಲಗುಂದ ಶಾಸನವನ್ನು ಓದಿ ಮತ್ತು ಅರ್ಥೈಯಿಸಿದ್ದಾರೆ.