ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಬಿ.ವಿ.ವಿ.ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ರತ್ನಾಕರ ಬ್ಯಾಂಕ್ ಲಿ.ವತಿಯಿಂದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯಡಿ (ಸಿ.ಎಸ್.ಆರ್) ₹ 42 ಲಕ್ಷ ಮೌಲ್ಯದ ಅತ್ಯಾಧುನಿಕ ಆ್ಯಂಬುಲೆನ್ಸ್ನ್ನು ಕೊಡುಗೆಯಾಗಿ ನೀಡಲಾಯಿತು.ಬಿ.ವಿ.ವಿ. ಸಂಘದ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಆವರಣದಲ್ಲಿ ಆರ್.ಬಿ.ಎಲ್. ಬ್ಯಾಂಕ್ ಬೆಳಗಾಂವಿ ವಿಭಾಗೀಯ ಮುಖ್ಯಸ್ಥ ನಂಜುಂಡಸ್ವಾಮಿ ಹಿರೇಮಠ ಅವರು ಅಂಬುಲೆನ್ಸ್ ಕೀ ಅನ್ನು ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠಗೆ ಹಸ್ತಾಂತರಿಸಿದರು.
ಫೋರ್ಸ್ ಟ್ರಾವೆಲ್ಲರ್ ಅಂಬುಲೆನ್ಸ್ ಎಂದು ಕರೆಯಲಾಗುವ ಈ ಅತ್ಯಾಧುನಿಕ ಅಂಬುಲೆನ್ಸ್ ಫೋರ್ಸ್ಡಬ್ಲ್ಯು -3350 ಮಾದರಿಯದ್ದಾಗಿದ್ದು, ರೋಗಿಯ ಚಿಕಿತ್ಸೆಗೆ ಅಗತ್ಯವಾದ ಎಲ್ಲ ಸೌಲಭ್ಯ ಒಳಗೊಂಡಿದೆ.ಅತ್ಯಾಧುನಿಕವಾದ ಅಂಬುಲೆನ್ಸ್:ಪ್ರಸ್ತುತ ಭಾರತದಲ್ಲಿ ಉಪಯೋಗಿಸಲ್ಪಡುತ್ತಿರುವ ಆ್ಯಂಬುಲೆನ್ಸ್ ವಾಹನಗಳಲ್ಲೇ ಈ ಅಂಬುಲೆನ್ಸ್ ದೊಡ್ಡ ಗಾತ್ರದ ಮತ್ತು ಅತ್ಯಾಧುನಿಕವಾದ ಅಂಬುಲೆನ್ಸ್ ಎಂದು ಪರಿಗಣಿಸಲ್ಪಟ್ಟಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿರುವ ಈ ಅಂಬುಲೆನ್ಸ್ ವಾಹನದಲ್ಲಿ ಅಮೆರಿಕ ದೇಶದಲ್ಲಿ ತಯಾರಿಸಲ್ಪಟ್ಟ ವೆಂಟಿಲೇಟರ್ ಅಳವಡಿಸಲಾಗಿದೆ. ಸೇಂಟ್ರಲ್ ಆಕ್ಸಿಜನ್ ವ್ಯವಸ್ಥೆ ಇದ್ದು, ಇದರಲ್ಲಿ ಸಿಲಿಂಡಗರ್ ಗಳನ್ನು ಅಳವಡಿಸಲಾಗಿದೆ. ಚಿಕಿತ್ಸೆಗೆ ಅಗತ್ಯವಾದ ಹೃದಯಕ್ಕೆ ಶಾಖ ಕೊಡುವ ಯಂತ್ರ, ಕೃತಕ ಉಸಿರಾಟ ಯಂತ್ರ, ಇನ್ಫ್ಯೂಜನ್ ಪಂಪ್, ಕಾರ್ವಿಯಾಕ್ ಮಾನಿಟರ್, ಸಿ.ಪಿ.ಆರ್ ಕಿಟ್, ಇ.ಸಿ.ಜಿ ಯಂತ್ರ, ಸ್ಪ್ಲಿಂಟ್ ಕಿಟ್, ಸ್ಪೈನ್ ಬೋರ್ಡ್ ಇತ್ಯಾದಿ ಉಪಕರಣ ಒಳಗೊಂಡಿದೆ. ಸ್ವಯಂಚಾಲಿತ ಸ್ಟ್ರೆಚರ್, ಔಷಧ ಸಂಗ್ರಹಣೆಗಾಗಿ ರೆಫ್ರಿಜಿರೇಟರ್ ಮತ್ತು ಸ್ಪಾಟ್ಲೈಟ್ ವ್ಯವಸ್ಥೆಯು ಈ ಅಂಬುಲೆನ್ಸ್ ನ ವಿಶೇಷತೆಗಳಾಗಿವೆ. ನಿರಂತರ ವಿದ್ಯುತ್ ಪೂರೈಕೆಗಾಗಿ ಯು.ಪಿ.ಎಸ್. ಅಳವಡಿಸಲಾಗಿದೆ. ವೈದ್ಯರಿಗೆ ಪ್ರತ್ಯೇಕ ಕ್ಯಾಬಿನ್ ರಚಿಸಲಾಗಿದೆ. ಈ ಅಂಬುಲೆನ್ಸ್ ವಾಹನದಲ್ಲಿ ತೀವ್ರನಿಗಾ ಘಟಕ ಮತ್ತು ಸಣ್ಣ ಆಪರೇಷನ್ ಥಿಯೇಟರ್ ವ್ಯವಸ್ಥೆಗೊಳಿಸಲಾಗಿದ್ದು, ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗಳಿಗೆ ಅನುಕೂಲವಿದೆ.
ಅಂಬುಲೆನ್ಸ್ ಕೀ ಸ್ವೀಕರಿಸಿ ಸಾರ್ವಜನಿಕರ ಸೇವೆಗಾಗಿ ಲೋಕಾರ್ಪಣೆಗೊಳಿಸಿದ ಡಾ.ವೀರಣ್ಣ ಚರಂತಿಮಠ, ಆರ್.ಬಿ.ಎಲ್ ಬ್ಯಾಂಕ್ ನ ಈ ಜನಪರ ನಡೆ ಹೆಮ್ಮೆಯ ಸಂಗತಿ. ಕುಮಾರೇಶ್ವರ ಆಸ್ಪತ್ರೆಗೆ ಅಂಬುಲೆನ್ಸ್ ನೀಡುವ ಮೂಲಕ ಆರ್.ಬಿ.ಎಲ್ ಬ್ಯಾಂಕ್ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಅತ್ಯಂತ ಅರ್ಥಪೂರ್ಣವಾಗಿ ನಿರ್ವಹಿಸಿದೆ ಎಂದು ಹೇಳಿದರು.ಬಿ.ವಿ.ವಿ.ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ.ಎಂ. ಸಜ್ಜನ (ಬೇವೂರ), ಹಾಸ್ಟೆಲ್ ಕಮಿಟಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ವಾಹನ ವಿಭಾಗದ ಸಂಯೋಜಕ ಅಶೋಕ ರೇಣುಕಪ್ಪ, ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಮಹೇಶ ಕಕರಡ್ಡಿ, ಆರ್.ಬಿ.ಎಲ್ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಪ್ರಸಾದ ಬಾಸುತಕರ್, ಬಾಗಲಕೋಟೆ ಶಾಖಾ ಮ್ಯಾನೇಜರ್ ಪಂಢರಿ ದೇಶಪಾಂಡೆ, ಕೃಷಿ ಅಧಿಕಾರಿ ತೀರ್ಥರಾಜ ಕುಚನೂರೆ, ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಆರ್ಬಿಎಲ್ ಬ್ಯಾಂಕಿನ ಸಾರ್ವಜನಿಕರ ಆರೋಗ್ಯದ ಕಾಳಜಿ ಶ್ಲಾಘನೀಯ. ಕುಮಾರೇಶ್ವರ ಆಸ್ಪತ್ರೆ ಈ ಆ್ಯಂಬುಲೆನ್ಸ್ ಅನ್ನು ಸಾರ್ವಜನಿಕರ ಆರೋಗ್ಯ ಸುಧಾರಣೆಗಾಗಿ ಸದ್ಬಳಕೆ ಮಾಡಿಕೊಳ್ಳಲಿದೆ. ಉತ್ತರ ಕರ್ನಾಟಕದಲ್ಲಿ ಪ್ರಥಮ ಈ ಮಾದರಿಯ ಹೈಟೆಕ್ ಅಂಬುಲೆನ್ಸ್ ಕುಮಾರೇಶ್ವರ ಆಸ್ಪತ್ರೆಯಲ್ಲಿ ಬಳಕೆಯಾಗುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ.
- ಡಾ.ವೀರಣ್ಣ ಚರಂತಿಮಠ, ಬಿವಿವಿ ಸಂಘದ ಕಾರ್ಯಾಧ್ಯಕ್ಷ