ಮಂತ್ರಿಮಾಲ್‌ ಮುಂಭಾಗದ ಜಂಕ್ಷನ್‌ನಲ್ಲಿದ್ದ ಕಂಬವನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಸಂಚಾರಕ್ಕೆ ಸುಗಮ ಮಾಡಿಕೊಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಲ್ಲೇಶ್ವರದ ಮಂತ್ರಿ ಮಾಲ್‌ ಮುಂಭಾಗದ ರಾಜೀವ್‌ ಗಾಂಧಿ ಜಂಕ್ಷನ್‌ ಅಭಿವೃದ್ಧಿ ಸಂದರ್ಭದಲ್ಲಿ ಹೈ ಮಾಸ್ಕ್‌ ವಿದ್ಯುತ್‌ ದೀಪದ ಕಂಬ ತೆರವುಗೊಳಿಸಿ ಪಾದಚಾರಿ ಮಾರ್ಗದಲ್ಲಿ ಇಡಲಾಗಿದೆ. ಇದರಿಂದ ಜನರು ವಾಹನಗಳ ಮಧ್ಯೆ ರಸ್ತೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ರಾಜೀವ್‌ ಗಾಂಧಿ ಜಂಕ್ಷನ್‌ ನಲ್ಲಿ ಸುಮಾರು ₹2.63 ಕೋಟಿ ವೆಚ್ಚದಲ್ಲಿ ರಾಜೀವ್‌ ಗಾಂಧಿ ಕಂಚಿನ ಪ್ರತಿಮೆ ಪ್ರತಿಸ್ಥಾಪನೆ ಸೇರಿದಂತೆ ಇಡೀ ಜಂಕ್ಷನನ್ನು ಬಿಬಿಎಂಪಿ ಯೋಜನಾ ವಿಭಾಗದಿಂದ ಅಭಿವೃದ್ಧಿ ಪಡಿಸಲಾಗಿದೆ. ಕಾಮಗಾರಿ ಮುಕ್ತಾಯಗೊಂಡು ಎರಡು ತಿಂಗಳು ಕಳೆದಿದೆ.

ಪ್ರತಿ ದಿನ ಲಕ್ಷಾಂತರ ಮಂದಿ ಓಡಾಡುವ ಈ ಜಂಕ್ಷನ್‌ ದಿನದ 24 ಗಂಟೆಯೂ ವಾಹನ ದಟ್ಟಣೆಯಿಂದ ಇರುತ್ತದೆ. ಕಾಮಗಾರಿ ವೇಳೆ ಜಂಕ್ಷನಲ್ಲಿ ಈ ಹಿಂದೆ ಅಳವಡಿಸಿದ್ದ ಲಕ್ಷಾಂತರ ರುಪಾಯಿ ಮೊತ್ತದ ಹೈ ಮಾಸ್ಕ್‌ ವಿದ್ಯುತ್‌ ದೀಪದ ಕಂಬವನ್ನು ಬೇಕಾಬಿಟ್ಟಿ ಪಕ್ಕದ ಪಾದಚಾರಿ ಮಾರ್ಗದ ಮೇಲೆ ಇಡಲಾಗಿದೆ. ಇದರಿಂದ ಜನರು ಪ್ರಾಣ ಭಯದಲ್ಲಿ ವಾಹನಗಳ ಮಧ್ಯೆ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.ಮಾಹಿತಿ ಇಲ್ಲ: ಪಾಲಿಕೆ

ಈ ಬಗ್ಗೆ ಬಿಬಿಎಂಪಿಯ ಗಾಂಧಿನಗರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರೇವಣ್ಣ ಅವರನ್ನು ವಿಚಾರಿಸಿದಾಗ ಯೋಜನಾ ವಿಭಾಗದಿಂದ ಕಾಮಗಾರಿ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಹೈ ಮಾಸ್ಕ್‌ ವಿದ್ಯುತ್‌ ಕಂಬವನ್ನು ತೆರವು ಮಾಡಿರಬಹುದು. ಈ ಬಗ್ಗೆ ಮಾಹಿತಿ ಇಲ್ಲ. ಯೋಜನಾ ವಿಭಾಗದ ಅಧಿಕಾರಿಗಳನ್ನು ವಿಚಾರ ಮಾಡಲಾಗುವುದು ಎಂದು ಹೇಳಿದ್ದಾರೆ.