ಸಾರಾಂಶ
ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳವಾಗಿದ್ದರಿಂದ ನದಿಗೆ ಎರಡು ದಿನದಿಂದ 64000 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ತಾಲೂಕಿನ ಸಾಣಾಪುರ ಬಳಿ ಇರುವ ಹಳೇ ಸೇತುವೆ ಮೇಲೆ ನೀರು ಹರಿಯುತ್ತಿದೆ.
ಗಂಗಾವತಿ:
ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವುದರಿಂದ ಆನೆಗೊಂದಿಯ ನಡುಗಡ್ಡೆಯಲ್ಲಿರುವ ಶ್ರೀಕೃಷ್ಣದೇವರಾಯ ಸಮಾಧಿ (60 ಕಾಲಿನ ಮಂಟಪ) ಮುಳುಗುವ ಹಂತಕ್ಕೆ ತಲುಪಿದೆ.ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳವಾಗಿದ್ದರಿಂದ ನದಿಗೆ ಎರಡು ದಿನದಿಂದ 64000 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ತಾಲೂಕಿನ ಸಾಣಾಪುರ ಬಳಿ ಇರುವ ಹಳೇ ಸೇತುವೆ ಮೇಲೆ ನೀರು ಹರಿಯುತ್ತಿದೆ. ಪಂಪಾ ಸರೋವರ, ರುಷ್ಯಮುಖ ಪರ್ವತ, ನವವೃಂದಾವನಗಡ್ಡೆ ಮತ್ತು ಕಂಪ್ಲಿ ಬಳಿ ಇರುವ ಕಕ್ಕರಗೋಳ, ಹಿರೇಂಜಂತಗಲ್ ಸೇತುವೆ ವರೆಗೆ ನೀರು ಮುಟ್ಟಿದೆ.
ಬೋಟಿಂಗ್ ರದ್ದು:ಆನೆಗೊಂದಿಯ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿರುವ ನವವೃಂದಾವನಗಡ್ಡೆಯ ಸುತ್ತಲು ನೀರು ತುಂಬಿದ್ದರಿಂದ ಬೋಟ್ ಸಂಚಾರ ರದ್ದುಗೊಳಿಸಲಾಗಿದೆ. ನಿತ್ಯ ಮಂತ್ರಾಲಯ ಮಠ ಮತ್ತು ಉತ್ತರಾದಿ ಮಠದ ಅರ್ಚಕರು ಬೋಟ್ ಮೂಲಕ ಸಂಚರಿಸಿ ಪೂಜೆ ಸಲ್ಲಿಸುತ್ತಿದ್ದರು. ಈಗ ತಾಲೂಕಾಡಳಿತದ ಮತ್ತು ಪೊಲೀಸ್ ಇಲಾಖೆ ಸೂಚನೆ ಮೇರೆಗೆ ಸಂಚಾರ ರದ್ದುಗೊಳಿಸಿದೆ.