ಹೆದ್ದಾರಿ ಅಪಘಾತ: ಹೋರಾಟಗಾರರು, ಅಧಿಕಾರಿಗಳ ಸಭೆ

| Published : Jun 19 2025, 12:35 AM IST

ಹೆದ್ದಾರಿ ಅಪಘಾತ: ಹೋರಾಟಗಾರರು, ಅಧಿಕಾರಿಗಳ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ತುಂಗಣಿ ಗೇಟ್ ಬಳಿ ಬೈಪಾಸ್ ರಸ್ತೆ ಮತ್ತು ಹೆದ್ದಾರಿ ರಸ್ತೆಯ ಜಂಕ್ಷನ್ ಇದ್ದು ಇಲ್ಲಿ ಪ್ರತಿನಿತ್ಯ ಅಪಘಾತ ಸಂಭವಿಸಿ ಸಾವು ನೋವುಗಳಾಗಿದ್ದ ಪರಿಣಾಮ ಈ ಅಪಘಾತಗಳನ್ನು ತಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಕನಕಪುರ

ದಿನೇ ದಿನೇ ವಾಹನ ಸವಾರರಿಗೆ ಕಂಟಕ ಪ್ರಾಯವಾಗಿರುವ ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ತುಂಗಣಿ ಬಳಿಯ ಬೈಪಾಸ್ ರಸ್ತೆಯ ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡಲು ಹೋರಾಟಗಾರ ರೈತ ಮುಖಂಡರು ಹಾಗೂ ಅಧಿಕಾರಿಗಳ ಜೊತೆ ವೃತ್ತ ನಿರೀಕ್ಷಕ ಕಚೇರಿಯಲ್ಲಿ ಸಭೆ ನಡೆಸಲಾಯಿತು.

ಬೆಂಗಳೂರು ರಸ್ತೆಯ ತುಂಗಣಿ ಗೇಟ್ ಬಳಿ ಬೈಪಾಸ್ ರಸ್ತೆ ಮತ್ತು ಹೆದ್ದಾರಿ ರಸ್ತೆಯ ಜಂಕ್ಷನ್ ಇದ್ದು ಇಲ್ಲಿ ಪ್ರತಿನಿತ್ಯ ಅಪಘಾತ ಸಂಭವಿಸಿ ಸಾವು ನೋವುಗಳಾಗಿದ್ದ ಪರಿಣಾಮ ಈ ಅಪಘಾತಗಳನ್ನು ತಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದರು.

ಏನು ಪ್ರಯೋಜನ ಆಗದ ಹಿನ್ನೆಲೆಯಲ್ಲಿ ಬೇಸರಗೊಂಡ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ರೈತ ಸಂಘದ ನೇತೃತ್ವದಲ್ಲಿ ಹೋರಾಟಗಾರರು ತುಂಗಣಿ ಗೆಟ್ ಬಳಿ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸುವ ಮಾಹಿತಿ ತಿಳಿದ ಪೊಲೀಸ್ ಅಧಿಕಾರಿಗಳು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಮಾತನಾಡಿ ಹೆದ್ದಾರಿಯಲ್ಲಿ ಆಗುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಹೋರಾಟಗಾರರೊಂದಿಗೆ ಚರ್ಚೆ ನಡೆಸಲು ಸಭೆ ಆಯೋಜನೆ ಮಾಡಿದ್ದರು.

ಸಭೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ, ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು, ಹೊಸದುರ್ಗ ಪ್ರಶಾಂತ್ ಮಾತನಾಡಿ, ಕನಕಪುರ ಮಾರ್ಗವಾಗಿ ಅಭಿವೃದ್ಧಿಪಡಿಸಿರುವ ಹೆದ್ದಾರಿ ರಸ್ತೆಯ ಬೈಪಾಸ್ ಜಂಕ್ಷನ್‌ಗಳಲ್ಲಿ ಅಂಡರ್ ಪಾಸ್ ಮಾಡಬೇಕಿತ್ತು. ಅಂಡರ್ ಪಾಸ್ ಮಾಡದೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿರುವುದೇ ಈ ಎಲ್ಲಾ ಅಪಘಾತಗಳಿಗೆ ಕಾರಣವಾಗಿದೆ ಅಲ್ಲದೆ ತುಂಗಣಿ ಗೇಟ್ ಜಂಕ್ಷನ್, ಶಿವನಹಳ್ಳಿ ಸಮೀಪದ ಜಂಕ್ಷನ್, ಗಡಸಳ್ಳಿ ರಸ್ತೆ, ತಿಗಳರಹಳ್ಳಿ ರಸ್ತೆ ಈ ಜಾಗದಲ್ಲಿ ಹೆದ್ದಾರಿ ರಸ್ತೆಗೆ ಅಂಡರ್ ಪಾಸ್ ಮಾಡದೆ ಇರುವುದರಿಂದ ಪ್ರತಿ ದಿನ ಅಪಘಾತಗಳಾಗಿ ಸಾವು ನೋವುಗಳಾಗುತ್ತಿವೆ, ಇದಕ್ಕೆ ಹೆದ್ದಾರಿ ಪ್ರಾಧಿಕಾರವೇ ಹೊಣೆ ಎಂದು ದೂರಿದರು.

ಈ ರಸ್ತೆಯಲ್ಲಿ ಇಷ್ಟೊಂದು ಸಾವಗಳಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ನೋಡಿದರೆ ಇದು ಅಪಘಾತಗಳಲ್ಲ ಒಂದು ರೀತಿಯ ಕೊಲೆಯಾಗಿದ್ದು, ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷದಿಂದ ಈ ಸಾವುಗಳಾಗುತ್ತಿದ್ದು, ಇದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡಿ ಕೊಲೆ ಆರೋಪ ದಡಿ ಅವರುಗಳ ಮೇಲೆ ಪ್ರಕರಣ ದಾಖಲಿಸಬೇಕೆಂಗು ಒತ್ತಾಯಿಸಿದರು.

ಶೀಘ್ರವಾಗಿ ಅಗತ್ಯ ಕ್ರಮಗಳನ್ನು ಕೈಗೊಂಡು ಅಪಘಾತಗಳನ್ನು ತಡೆಗಟ್ಟದಿದ್ದರೆ ಸಾರ್ವಜನಿಕರ ಜೊತೆಗೂಡಿ ಪ್ರತಿಭಟನೆ ನಡೆಸಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ವೈಜ್ಞಾನಿಕವಾಗಿ ಹಂಪ್ ಹಾಕಿ ಸಿಸಿ ಟಿವಿ ಕ್ಯಾಮರವನ್ನು ಅಳವಡಿಸುವುದಾಗಿ ಭರವಸೆ ನೀಡಿದರು.

ಗ್ರಾಮಾಂತರ ವೃತ್ತ ನಿರೀಕ್ಷಕ ವಿಕಾಶ್, ನಗರ ವೃತ್ತ ನಿರೀಕ್ಷಕ ಅನಂತರಾಮ್, ಸಂಘಟನೆಯ ಮುಖಂಡರು, ರೈತ ಸಂಘದವರು, ಸಾರ್ವಜನಿಕರು ಈ ವೇಳೆ ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01: ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಬಳಿಯ ಅಪಘಾತಗಳನ್ನು ತಡೆಗಟ್ಟುವ ಬಗ್ಗೆ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಸಭೆ ನಡೆಸಲಾಯಿತು.