ಡೆಂಘೀ ನಿಯಂತ್ರಣಕ್ಕೆ ಹಿಮ್ಸ್ ಆಸ್ಪತ್ರೆ ಸಿದ್ಧ

| Published : Jul 05 2024, 12:53 AM IST

ಸಾರಾಂಶ

ಹಾಸನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜನವರಿ ಆರಂಭದಿಂದ ಈವರೆಗೆ ೧೬೩೦ ಡೆಂಘೀ ಪ್ರಕರಣಗಳು ಹಿಮ್ಸ್‌ನಲ್ಲಿ ದಾಖಲಾಗಿದ್ದು, ಈ ಪೈಕಿ ಇಬ್ಬರು ಮಕ್ಕಳು ತಡವಾಗಿ ಆಸ್ಪತ್ರೆಗೆ ದಾಖಲಾದ ಕಾರಣ ಮೃತಪಟ್ಟಿದ್ದಾರೆ. ಡೆಂಘೀ ನಿಯಂತ್ರಣಕ್ಕಾಗಿ ಪ್ರತಿ ೧೫ ದಿನಕ್ಕೊಮ್ಮೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪ್ರಾಥಮಿಕ ಸುರಕ್ಷತಾ ಅಧಿಕಾರಿ, ಆರೋಗ್ಯ ನಿರೀಕ್ಷಕರು ಎಲ್ಲೂ ಕೂಡ ನೀರು ನಿಲ್ಲದಂತೆ ನಿಗಾ ವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವಸ್ವಾಮಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಜುಲೈ ೬ರಂದು ನಗರಕ್ಕೆ ಮಧ್ಯಾಹ್ನ ಆಗಮಿಸಿ ಸಭೆ ನಡೆಸಲಿದ್ದಾರೆ. ಡೆಂಘೀ ನಿಯಂತ್ರಣಕ್ಕೆ ಹಿಮ್ಸ್ ಆಸ್ಪತ್ರೆ ಸಿದ್ಧವಾಗಿದ್ದು, ಅಗತ್ಯವಾದ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹಿಮ್ಸ್ ನಿರ್ದೇಶಕ ಡಾ. ಎಸ್.ವಿ. ಸಂತೋಷ್ ತಿಳಿಸಿದರು. ನಗರದ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿ, ಇದೆ ವೇಳೆ ಜು.೬ರಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್ ಅವರು ಹಾಸನಕ್ಕೆ ಆಗಮಿಸಲಿದ್ದು, ಮಧ್ಯಾಹ್ನ ಹಿಮ್ಸ್‌ನಲ್ಲಿ ಸಭೆ ನಡೆಸಲಿದ್ದಾರೆ. ೨೦೨೪-೨೫ನೇ ಸಾಲಿಗೆ ನೇತ್ರ ಚಿಕಿತ್ಸಾ ವಿಭಾಗಕ್ಕೆ ಹಾಲಿ ಇರುವ ೩ ಪಿ.ಜಿ ಸೀಟುಗಳ ಜೊತೆಗೆ ಹೆಚ್ಚುವರಿಯಾಗಿ ೨ ಪಿ.ಜಿ. ಸೀಟುಗಳು ಮತ್ತು ಇ.ಎನ್.ಟಿ. ವಿಭಾಗದಲ್ಲಿ ಹಾಲಿ ಇರುವ ೨ ಸೀಟುಗಳಿಗೆ ಅನುಮತಿ ದೊರೆತಿದೆ. ಹಿಮ್ಸ್ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯವಿರುವ ರು.೩೯.೦೦ ಕೋಟಿಗಳ ಅನುದಾನ ಮತ್ತು ಅಗತ್ಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹುದ್ದೆಗಳ ಸೃಜನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸರ್ಕಾರದಿಂದ ಶೀಘ್ರದಲ್ಲಿ ಅನುಮತಿ ಸಿಗುವ ಬಗ್ಗೆ ಭರವಸೆ ನೀಡಿದ್ದಾರೆ. ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಸುಮಾರು ರು.೮ ಕೋಟಿ ವೆಚ್ಚದಲ್ಲಿ ಹಿಮ್ಸ್ ಸಂಸ್ಥೆಯ ಆವರಣದಲ್ಲಿ ಹೊರಾಂಗಣ ಕ್ರೀಡಾಂಗಣ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಾಸನದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಅತೀ ಶೀಘ್ರದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಲಭ್ಯವಾಗಲಿದ್ದು, ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ. ಜೊತೆಗೆ ಹೆಚ್ಚಿನ ಅನುದಕ್ಕೆ ಸರ್ಕಾರಕ್ಕೆ ಸಂಸದರು ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಮಾಡಲಾಗಿದ್ದು ಹಣ ಬಿಡುಗಡೆ ಬಳಿಕ ಮತ್ತೊಂದು ಹಂತದ ಕಾಮಗಾರಿ ಮುಗಿಸಿ ಉದ್ಘಾಟನೆಗೆ ಸಜ್ಜಾಗಲಿದೆ ಎಂದು ಹೇಳಿದರು.

ಹಾಸನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬಾಬಾಡ್ರಾನ್ ೩ ಯಂತ್ರ ಕ್ಯಾನ್ಸರ್ ಚಿಕಿತ್ಸೆಗೆ ಲಭ್ಯವಿದ್ದು ಇದು ರಾಜ್ಯದಲ್ಲೇ ಉನ್ನತ ಗುಣಮಟ್ಟದ ಚಿಕಿತ್ಸೆ ನೀಡಲಾಗಿದೆ ಜೊತೆಗೆ ಇದೊಂದು ಮುಂದುವರಿದ ಚಿಕಿತ್ಸಾ ಮಾದರಿಯಾಗಿದೆ. ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವಸ್ವಾಮಿ ಮಾತನಾಡಿ, ಜನವರಿಯಿಂದ ಇಲ್ಲಿವರೆಗು ಡೆಂಘೀ ೨೦೫ ಕೇಸುಗಳು, ಚಿಕುನ್ ಗುನ್ಯ ೨೯ ಕೇಸುಗಳು, ಮಲೇರಿಯಾ ೧೦ ಪ್ರಕರಣಗಳಿವೆ. ಸ್ಥಳೀಯವಾಗಿ ಯಾವ ಮಲೇರಿಯಾ ಪ್ರಕರಣಗಳಿಲ್ಲ. ಹೊರಗಿನಿಂದ ಬಂದವರ ಮೇಲಿದೆ. ಡೆಂಘೀ ಜ್ವರ ಪ್ರಕರಣದಲ್ಲಿ ಇಲ್ಲಿಂದ ನಾಲ್ಕನ್ನು ಆಡಿಟ್ ಮಾಡಿ ಕಳುಹಿಸಲಾಗಿತ್ತು. ಎರಡನ್ನು ಮಾತ್ರ ಡೆಂಘೀ ಡೆತ್ ಎಂದು ಖಚಿತಪಡಿಸಿದ್ದಾರೆ. ಹಲವಾರು ಕಾಯಿಲೆಗಳಲ್ಲಿ ವೈರಲ್ ಬಂದರೇ ಡೆಂಘೀ ಎಂದು ಹೇಳಲಾಗುತ್ತಿದೆ.

*ಹೇಳಿಕೆ-1

ಡೆಂಘೀ ನಿಯಂತ್ರಣಕ್ಕಾಗಿ ಪ್ರತಿ ೧೫ ದಿನಕ್ಕೊಮ್ಮೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪ್ರಾಥಮಿಕ ಸುರಕ್ಷತಾ ಅಧಿಕಾರಿ, ಆರೋಗ್ಯ ನಿರೀಕ್ಷಕರು ಅವರು ಪ್ರತಿ ಮನೆಗೆ ಹೋಗಿ ಪರಿಶೀಲನೆ ಮಾಡಲಿದ್ದಾರೆ. ಎಲ್ಲೂ ಕೂಡ ನೀರು ನಿಲ್ಲದಂತೆ ನಿಗಾ ವಹಿಸಬೇಕು ಎಂದರು. ಜೊತೆಗೆ ಸಾರ್ವಜನಿಕರ ಸಹಕಾರ ಇಲ್ಲದಿದ್ದರೇ ಯಾವ ಜಾಗೃತಿ ಕಾರ್ಯಕ್ರಮ ಸಫಲವಾಗುವುದಿಲ್ಲ ಎಂದು ಮನವಿ ಮಾಡಿದರು.

- ಡಾ. ಶಿವಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ

* ಬಾಕ್ಸ್‌ನ್ಯೂಸ್‌

ಈವರೆಗೆ ೧೬೩೦ ಡೆಂಘೀ ಪ್ರಕರಣಗಳು:

ಹಾಸನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜನವರಿ ಆರಂಭದಿಂದ ಈವರೆಗೆ ೧೬೩೦ ಡೆಂಘೀ ಪ್ರಕರಣಗಳು ಹಿಮ್ಸ್‌ನಲ್ಲಿ ದಾಖಲಾಗಿದ್ದು, ಈ ಪೈಕಿ ಇಬ್ಬರು ಮಕ್ಕಳು ತಡವಾಗಿ ಆಸ್ಪತ್ರೆಗೆ ದಾಖಲಾದ ಕಾರಣ ಮೃತಪಟ್ಟಿದ್ದಾರೆ. ಇದನ್ನು ಹೊರತುಪಡಿಸಿ ಇನ್ನುಳಿದ ಎಲ್ಲರೂ ಚಿಕಿತ್ಸೆ ಪಡೆದು ಆರೋಗ್ಯದಿಂದ ಇದ್ದಾರೆ. ನಮ್ಮ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ೭೫೦ ಬೆಡ್‌ಗಳು ಚಿಕಿತ್ಸೆಗೆ ಲಭ್ಯವಿದ್ದು, ಈಗಾಗಲೇ ೭೨೯ ಬೆಡ್‌ಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಡೆಂಘೀ ನಿಯಂತ್ರಣಕ್ಕೆ ಮುಖ್ಯವಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಜೊತೆಗೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ೧೮೫ ಜನ ಹೆಚ್ಚುವರಿ ನರ್ಸಿಂಗ್ ಆಫೀಸರ್ಸ್‌ ಹಾಗೂ ಇನ್ನಷ್ಟು ಮೂಲಭೂತ ಸೌಕರ್ಯಗಳ ಅಗತ್ಯ ಇದೆ ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಇದೆ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಲೋಕೇಶ್ ಇತರರು ಇದ್ದರು.