ಸಾರಾಂಶ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರಸರ್ಕಾರ ಎನ್ಐಎಗೆ ವಹಿಸಿದೆ. ಈ ಕ್ರಮವನ್ನು ಹಿಂದೂ ಜಾಗರಣಾ ವೇದಿಕೆ ಸ್ವಾಗತಿಸುತ್ತದೆ ಎಂದು ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ದೋ.ಕೇಶವಮೂರ್ತಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರುಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಎನ್ಐಎ ವಹಿಸಿಕೊಂಡು ಮತಾಂಧ ಶಕ್ತಿಗಳ ಹೆಡೆಮುರಿ ಕಟ್ಟಿದ ಬಳಿಕ ಇದೀಗ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರಸರ್ಕಾರ ಎನ್ಐಎಗೆ ವಹಿಸಿದೆ. ಈ ಕ್ರಮವನ್ನು ಹಿಂದೂ ಜಾಗರಣಾ ವೇದಿಕೆ ಸ್ವಾಗತಿಸುತ್ತದೆ ಎಂದು ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ದೋ.ಕೇಶವಮೂರ್ತಿ ತಿಳಿಸಿದ್ದಾರೆ.ರಾಷ್ಟ್ರೀಯ ತನಿಖಾ ದಳದವರು ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ 30 ಮಂದಿ ಪಿಎಫ್ ಐ ಕಾರ್ಯಕರ್ತರನ್ನು ಬಂಧಿಸಿದ್ದು ಮಾತ್ರವಲ್ಲದೆ ಪಿಎಫ್ಐ ಸಂಘಟನೆಯನ್ನು ನಿಷೇಧಿಸಲಾಗಿತ್ತು ಎನ್ನುವುದು ಗಮನಾರ್ಹ ಸಂಗತಿ.
ಕೇಂದ್ರ ಗೃಹ ಸಚಿವಾಲಯ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವುದು ಹಿಂದು ಜಾಗರಣ ವೇದಿಕೆಯ ಬಲವಾದ ಆಗ್ರಹವಾಗಿತ್ತು ಎಂದು ಅವರು ತಿಳಿಸಿದ್ದಾರೆ.ಈ ಬರ್ಭರ ಹತ್ಯೆ ಪ್ರಕರಣದ ಸಂಬಂಧ ಈಗಾಗಲೇ ರಾಜ್ಯ ಪೊಲೀಸರ ತನಿಖಾ ತಂಡವು 11 ಮಂದಿಯನ್ನು ಬಂಧಿಸಿದ್ದು ಇದೀಗ ಎನ್ಐಎ ತನಿಖೆಯಿಂದ ಮತ್ತಷ್ಟು ಷಡ್ಯಂತ್ರಗಳು ಹೊರಗೆ ಬರಲಿದ್ದು ಇದರ ಹಿಂದಿರುವ ರಾಷ್ಟ್ರ ವಿದ್ರೋಹಿ ಶಕ್ತಿಗಳು ನಡೆಸಿರುವ ದುಷ್ಕೃತ್ಯಗಳ ಸ್ಫೋಟಕ ಸಂಗತಿಗಳು ಹೊರಗೆ ಬರಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಿಂದು ಸಂಘಟನೆಯ ಕಾರ್ಯಕರ್ತನಾಗಿದ್ದ ಸುಹಾಸ್ ಶೆಟ್ಟಿ ಹತ್ಯೆಗೆ ದೇಶ, ವಿದೇಶಗಳಿಂದ ಮತಾಂಧ ಶಕ್ತಿಗಳ ಫಂಡಿಂಗ್ ನಡೆದಿರುವ ಗುಮಾನಿಗಳಿದ್ದು, ಹತ್ಯೆ ನಡೆದಿರುವ ರೀತಿ, ಆ ನಂತರದ ಅದರ ವೀಡಿಯೊ ಕ್ಲಿಪ್ಪುಗಳನ್ನು ವ್ಯವಸ್ಥಿತವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿ ಹಿಂದೂ ಸಮಾಜವನ್ನೂ, ಹಿಂದೂ ಸಂಘಟನೆಗಳ ಹಿಂದೂಪರ ಹೋರಾಟಗಳ ನೈತಿಕ ಬಲವನ್ನು ಕುಗ್ಗಿಸುವ ಈ ಸಂಚಿನ ಹಿಂದೆ ಬಲವಾದ ಕಾಣದ ಕೈಗಳು ಕೆಲಸ ಮಾಡಿರುವುದು ಎದ್ದು ಕಾಣಿಸುತ್ತದೆ ಎಂದು ಅವರು ಹೇಳಿದ್ದಾರೆ.ಕೊಲೆ ನಡೆಯುವ ವಾರಗಳ ಮುಂಚೆಯೇ ವಿದೇಶಗಳಿಂದ ನಿರ್ವಹಿಸಲ್ಪಡುವ ಕೆಲ ಸಾಮಾಜಿಕ ಜಾಲತಾಣಗಳ ಮೂಲಕ ಟಾರ್ಗೆಟ್ಗಳನ್ನು ನಿಗದಿಪಡಿಸುವ ರೀತಿಗಳನ್ನು ಗಮನಿಸಿದಾಗ ಈ ವಿದೇಶಿ ಶಕ್ತಿಗಳ ಸಂಚುಗಳು ವ್ಯವಸ್ಥಿವಾಗಿ. ಈ ಕೊಲೆಯ ಹಿಂದೆ ಕೆಲಸ ಮಾಡಿರುವುದು ಕಂಡುಬರುತ್ತದೆ.ಇದೀಗ ಎನ್ಐಎ ತನಿಖೆಗೆ ವಹಿಸಿರುವುದರಿಂದ ಈ ಎಲ್ಲಾ ರಾಷ್ಟ್ರ ವಿದ್ರೋಹಿಗಳ ಕೈವಾಡದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಈ ವಿದ್ರೋಹಿ ಸಂಚನ್ನು ಹೆಡೆಮುರಿ ಕಟ್ಟಲಿದೆ ಎನ್ನುವ ವಿಶ್ವಾಸ ಹಿಂದು ಜಾಗರಣ ವೇದಿಕೆಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.