ಸಾರಾಂಶ
ಕರ್ನಾಟಕ ಅರ್ಬನ್ ವಾಟರ್ ಸಪ್ಲೆ ಇಲಾಖೆಯಿಂದ ಪಟ್ಟಣದ ವಾಟರ್ ಗೇಟ್ ಬಳಿ ಕಾವೇರಿ ನದಿ ತೀರದಲ್ಲಿ ನದಿ ನೀರಿಗೆ ತ್ಯಾಜ್ಯ ನೀರು ಸೇರುವ ಸ್ಥಳವೆಂದು ಗುರುತಿಸಿ ಒಂದು ಚಿಕ್ಕ ತಡೆ ಗೋಡೆ ನಿರ್ಮಿಸುವ ಸಂಬಂಧ ಅಧಿಕಾರಿಗಳು ಭಾನುವಾರ ಕಾಮಗಾರಿ ಆರಂಭಿಸಿದ ಹಿನ್ನೆಲೆ ಹಿಂದು ಜಾಗರಣಾ ವೇದಿಕೆ ಸಂಚಾಲಕ ಚಂದನ್ ನೇತೃತ್ವದಲ್ಲಿ ಕಾರ್ಯಕರ್ತರು ತಡೆದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ವಾಟರ್ ಗೇಟ್ ಬಳಿ ಕಾಮಗಾರಿಗೆ ಪರವಾನಿಗೆ ಪಡೆಯದೆ ಕಾವೇರಿ ನದಿಗೆ ಮಿನಿ ತಡೆಗೋಡೆ ನಿರ್ಮಿಸುತ್ತಿದ್ದ ಅಧಿಕಾರಿಗಳನ್ನು ಹಿಂದು ಜಾಗರಣೆ ವೇದಿಕೆ ಕಾರ್ಯಕರ್ತರು ತಡೆ ಮಾಡಿದ್ದಾರೆ.ಕರ್ನಾಟಕ ಅರ್ಬನ್ ವಾಟರ್ ಸಪ್ಲೆ ಇಲಾಖೆಯಿಂದ ಪಟ್ಟಣದ ವಾಟರ್ ಗೇಟ್ ಬಳಿ ಕಾವೇರಿ ನದಿ ತೀರದಲ್ಲಿ ನದಿ ನೀರಿಗೆ ತ್ಯಾಜ್ಯ ನೀರು ಸೇರುವ ಸ್ಥಳವೆಂದು ಗುರುತಿಸಿ ಒಂದು ಚಿಕ್ಕ ತಡೆ ಗೋಡೆ ನಿರ್ಮಿಸುವ ಸಂಬಂಧ ಅಧಿಕಾರಿಗಳು ಭಾನುವಾರ ಕಾಮಗಾರಿ ಆರಂಭಿಸಿದ ಹಿನ್ನೆಲೆ ಹಿಂದು ಜಾಗರಣಾ ವೇದಿಕೆ ಸಂಚಾಲಕ ಚಂದನ್ ನೇತೃತ್ವದಲ್ಲಿ ಕಾರ್ಯಕರ್ತರು ತಡೆದರು.
ಪುರಸಭೆಗಿಂತಲೂ ಮುಂಚೆ ಪಟ್ಟಣದಲ್ಲಿ ಯಾವುದೇ ಕಾಮಗಾರಿ ನಡೆಸಲು ಭಾರತೀಯ ಪುರಾತತ್ವ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳಿಂದ ಮೊದಲು ಪರವಾನಿಗೆ ಪಡೆಯಬೇಕು ಎಂಬ ನಿಯಮ ಇದ್ದುದ್ದರಿಂದ ಏಕಾಏಕಿ ಚೆಕ್ ಡ್ಯಾಂ ನಿರ್ಮಿಸಲು ಅವಕಾಶ ವಿರುವುದಿಲ್ಲ ಎಂದು ಈಗಾಗಲೇ ಪಟ್ಟಣ ನಾಗರಿಕರಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ಪುರಾತತ್ವ ಇಲಾಖೆಯಿಂದ ಪರವಾನಿಗೆ ತೆಗೆದುಕೊಳ್ಳಲು ಆಗ್ರಹಿಸಿದರು.ಕರ್ನಾಟಕ ಅರ್ಬನ್ ವಾಟರ್ ಸಪ್ಲೆ ಇಲಾಖೆ ಎಇಇ ಬಾಬುಸಾಬ್ ಮಾತನಾಡಿ, ತ್ಯಾಜ್ಯ ನೀರು ನದಿಗೆ ಹೋಗುವ ವಿಚಾರದಲ್ಲಿ ಉಪ ಲೋಕಾಯುಕ್ತರು ಇಲ್ಲಿನ ಸ್ಥಳ ಪರಿಶೀಲಿಸಿ ನಮಗೆ ಸೂಚನೆ ನೀಡಿದ್ದರು.
ತ್ಯಾಜ್ಯ ನೀರು ನದಿಗೆ ಸೇರದಂತೆ ತಡೆಗೋಡೆ ನಿರ್ಮಿಸಿ ಮತ್ತೊಂದೆಡೆ ಮುಂದಕ್ಕೆ ಇದೇ ತ್ಯಾಜ್ಯ ನೀರನ್ನು ಒಂದು ಕಡೆ ಸೇರಿಸಿ ವೆಟ್ ವೆಲ್ಗೆ ಮೋಟಾರ್ ಮೂಲಕ ತುಂಬಿ ನಂತರ ಚಂದಗಾಲು ಬಳಿಯ ಬೃಹತ್ ವೆಟ್ ವೆಲ್ಗೆ ರವಾನಿಸಲಾಗುತ್ತದೆ. ಇದರಿಂದ ತ್ಯಾಜ್ಯ ನೀರು ನದಿಗೆ ಸೇರಲ್ಲ. ಈ ಬಗ್ಗೆ ಪುರಾತತ್ವ ಇಲಾಖೆಗೂ ಮಾಹಿತಿ ನೀಡಲಾಗಿದೆ. ಅವರು ಪರವಾನಿಗೆ ನೀಡಿದ ನಂತರ ಕಾಮಗಾರಿ ಆರಂಭಿಸುತ್ತೇವೆ ಎಂದರು.ಕರ್ನಾಟಕ ಅರ್ಬನ್ ವಾಟರ್ ಸಪ್ಲೆ ಇಲಾಖೆ ಎಇ ಭಾಗ್ಯ, ಹಿಂದು ಜಾಗರಣಾ ವೇದಿಕೆ ಬಾಲರಾಜು ಸೇರಿದಂತೆ ಇತರೆ ಕಾರ್ಯಕರ್ತರು, ಸ್ಥಳೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಇದ್ದರು.