ಬಂಗಾರಪೇಟೆ: ತಾಲೂಕಿನ ಕಾಮಸಮುದ್ರ ಹೋಬಳಿ ಕೇಂದ್ರದಲ್ಲಿ ಭಾನುವಾರ ಹಿಂದೂ ಸಮಾಜೋತ್ಸವ ಸಹಸ್ರಾರು ಹಿಂದೂ ಕಾರ್ಯಕರ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಜಾನುಗುಟ್ಟ ವೃತ್ತದಿಂದ ಆರಂಭವಾದ ಬೃಹತ್ ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು ಮತ್ತಷ್ಟು ಮೆರಗು ನೀಡಿದವು.

ಮೆರವಣಿಗೆ ನಂತರ ಬಸ್ ನಿಲ್ದಾಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀ ದತ್ತ ಪಾದನಂದಸ್ವಾಮಿ ಮಾತನಾಡಿ, ಸಮಾಜದಲ್ಲಿ ಜಾತಿ ವ್ಯವಸ್ಥೆ ತಾಂಡವಾಡುತ್ತಿರುವುದರಿಂದ ಸಮಾಜ ಕುಲಗೆಟ್ಟು ಹೋಗಿದೆ, ಕನಕದಾಸರ ಜಯಂತಿಯನ್ನು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಣೆ ಮಾಡುವ ನಾವು ಅವರ ತತ್ವ- ಸಿದ್ಧಾಂತಗಳನ್ನು ಮಾತ್ರ ಪಾಲಿಸುತ್ತಿಲ್ಲ, ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಎಂದು ಹೇಳಿದ್ದಾರೆ, ಆದರೆ ಇಂದು ಅದನ್ನು ಪಾಲಿಸಲು ಬಿಡುತ್ತಿಲ್ಲ. ಎಲ್ಲಾ ಕುಲಗಳನ್ನು ಹೊಡೆದು ಕೆಲವರು ತಮ್ಮ ಸ್ವಾರ್ಥ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದರಿಂದ ನಾವು ಎಚ್ಚೆತ್ತುಕೊಳ್ಳಬೇಕು. ಆಗಲೇ ಸಮಾಜೋತ್ಸವ ಮಾಡಿದ್ದಕ್ಕೆ ಸಾರ್ಥಕ ಎಂದರು.

ಈ ಜಾತಿ ಎಂಬ ವಿಷ ಬೀಜ ಎಲ್ಲಿಯವರೆಗೂ ಹಬ್ಬಿದೆ ಎಂದರೆ ದೇಶ ಕಾಯುವ ಸೈನಿಕರವರೆಗೂ ಹೋಗಿದೆ. ಅಲ್ಲಿಯೂ ನೀನು ಯಾವ ಜಾತಿ ಎಂದು ಕೇಳುವಂತಾಗಿದೆ. ನಾವು ಗಾಂಧಿವಾದಿಗಳು ಎನ್ನುವರು, ಆದರೆ ಗಾಂಧಿ ಪ್ರತಿಮೆ ಮುಂದೆಯೇ ಸಾರಾಯಿ ಅಂಗಡಿ ಇಡಲಾಗಿದೆ. ಇದುವರೆಗೂ ಅಂಗಡಿಯನ್ನು ತೆರವುಗೊಳಿಸಿಲ್ಲ, ಇವರು ಗಾಂಧಿವಾದಿಗಳೇ ಎಂದು ಪ್ರಶ್ನಿಸಿದರು.

ನಮ್ಮಲ್ಲಿನ ಬಲ ಹೀನತೆಯನ್ನು ಬಳಸಿಕೊಂಡು ದಬ್ಬಾಳಿಕೆ ಮಾಡುವರು, ಎಣ್ಣೆ ಅಂಗಡಿ ತೆರವು ಮಾಡಿದರೆ ರಹೀಮರ ಮತ ಸಿಗುವುದಿಲ್ಲ ಎಂದು ಹಿಂದೂಗಳಿಗೆ ದ್ರೋಹ ಮಾಡಲಾಗುತ್ತಿದೆ. ಇದರ ಬಗ್ಗೆ ಸಹ ನಾವು ಜಾಗೃತಿಯಿಂದ ಇರಬೇಕು ಎಂದು ಕರೆ ನೀಡಿದರು.


ಹಿಂದೂಗಳು ಹಣದಾಸೆಗೆ ಬೇರೆ ಸಮುದಾಯಕ್ಕೆ ಮಾರಿ ಹೋಗದಿರಿ, ನಮ್ಮ ಸಂಸ್ಕೃತಿ- ಪರಂಪರೆಯನ್ನು ಉಳಿಸಿ ಬೆಳೆಸಲು ಹಿಂದೂಗಳೆಲ್ಲಾ ಸಂಘಟಿತರಾಗಬೇಕು. ಇಂದು ತೋರಿದ ಹುಮ್ಮಸ್ಸನ್ನು ಕೊನೆಯವರೆಗೂ ಮುಂದುವರಿಸಿಕೊಂಡು ಹೋಗಬೇಕೆಂದು ಹೇಳಿದರು.

ಈ ವೇಳೆ ಮಾಜಿ ಸಂಸದ ಎಸ್.ಮುನಿಸ್ವಾಮಿ, ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್, ಪುರಸಭೆ ಮಾಜಿ ಸದಸ್ಯ ಕಪಾಲಿಶಂಕರ್, ಬತ್ತಲಹಳ್ಳಿ ಮಂಜುನಾಥ್, ಸುಬೇದಾರ್, ಡಾ.ಪಿ.ಎಂ.ಗಿರಿಧರ್, ಅಂಜನಪ್ಪ, ವೆಂಕಟಸ್ವಾಮಿ, ರಾಜಣ್ಣ ಇತರರು ಇದ್ದರು.