ಹಿಂದುಗಳೇ ದಯವಿಟ್ಟು ಮೂರು ಮಕ್ಕಳನ್ನು ಮಾಡಿಕೊಳ್ಳಿ: ಕಲ್ಲಡ್ಕ ಪ್ರಭಾಕರ್ ಭಟ್

| Published : Dec 25 2023, 01:30 AM IST

ಹಿಂದುಗಳೇ ದಯವಿಟ್ಟು ಮೂರು ಮಕ್ಕಳನ್ನು ಮಾಡಿಕೊಳ್ಳಿ: ಕಲ್ಲಡ್ಕ ಪ್ರಭಾಕರ್ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಮುಸ್ಲಿಂರಿಗೆ ಹಲವು ದೇಶಗಳು ಇವೆ. ಆದರೆ, ಹಿಂದುಗಳಿಗೆ ಭಾರತ ಮಾತ್ರ, ಮುಸ್ಲಿಂ ಹುಡುಗರು ಅಷ್ಟೇ ಅಲ್ಲ, ಮುಸ್ಲಿಂ ಮಹಿಳೆಯರು ಮತಾಂತರ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಸ್ಲಿಮರ ಪರವಾಗಿ ನಿಂತರು ಪಕ್ಷ, ಜಗತ್ತಿನ ಎಲ್ಲ ಜನರಿಗೆ ಬದುಕು ಕೊಟ್ಟ ದೇಶ ಭಾರತ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ದೇಶದಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದು ಸಮಾಜ ಉಳಿಯಬೇಕಾದರೆ ಒಂದು ಮಗು ಸಾಕು ಎನ್ನುವುದನ್ನು ಬಿಟ್ಟು ಹಿಂದುಗಳೇ ದಯವಿಟ್ಟು ಮೂರು ಮಕ್ಕಳು ಮಾಡಿಕೊಳ್ಳಿ ಎಂದು ಹಿಂದೂ ಸಂಘಟನೆ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸಲಹೆ ನೀಡಿದರು..

ಪಟ್ಟಣದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಹನುಮಾ ಮಾಲಾಧಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಜನಸಂಖ್ಯೆ ಕಡಿಮೆಯಾಗುತ್ತಿದೆ. ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿದೆ. ಈ ದೇಶವನ್ನು ಉಳಿಸಿಕೊಳ್ಳುವ ಮಹತ್ ಕಾರ್ಯ ಹಿಂದೂಗಳಿಂದ ಮಾತ್ರ ಸಾಧ್ಯ. ಮುಸ್ಲಿಂರಿಗೆ ಹಲವು ದೇಶಗಳು ಇವೆ. ಆದರೆ, ಹಿಂದೂಗಳಿಗೆ ಭಾರತ ಮಾತ್ರ ಇರೋದು. ಹಿಂದೂಗಳಿಗೆ ಬೇರೆ ಕಡೆ ಜಾಗ ಇಲ್ಲ. ಅದಕ್ಕಾಗಿ ನಾವು ಹೋರಾಟ ಮಾಡಬೇಕು. ನಮ್ಮ ದೇಶವನ್ನು ಉಳಿಸಬೇಕು ಎಂದರು.

ಮುಸಲ್ಮಾನ್ ಹುಡುಗರು ಅಷ್ಟೇ ಅಲ್ಲ, ಮುಸ್ಲಿಂ ಮಹಿಳೆಯರು ಮತಾಂತರ ಮಾಡುತ್ತಿದ್ದಾರೆ. ನಿಮ್ಮ ಮುಸ್ಲಿಂ ಸಮಾಜದಲ್ಲಿ ಹುಡುಗಿಯರು ಇಲ್ಲವಾ. ಹಿಂದೂ ಹುಡುಗಿಯರನ್ನು ಯಾಕೆ ಟಾರ್ಗೆಟ್ ಮಾಡುತ್ತೀರಾ. ಮತಾಂತರ ಮಾಡಲು ಲವ್ ಜಿಹಾದ್ ಪ್ರಯತ್ನಗಳಾಗುತ್ತಿವೆ ಎಂದು ಎಚ್ಚರಿಸಿದರು.

ಮುಸ್ಲಿಮರಿಗೆ ಈ ಹಿಂದೆ ತಲಾಕ್ ಹೇಳುವ ಅವಕಾಶ ಇತ್ತು. ಮೋದಿ ಸರ್ಕಾರದಿಂದ ತ್ರಿವಳಿ ತಲಾಕ್ ಇಲ್ಲದಾಗಿದೆ. ಮುಸಲ್ಮಾನ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ ಇರಲಿಲ್ಲ. ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಮೋದಿ ಸರ್ಕಾರ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದ ಕೇಳರ ಸ್ಟೋರಿ’, ‘ಕಾಶ್ಮೀರ ಫೈಲ್ಸ್’ ಸಿನೆಮಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ಹಿಂದೂಗಳ ಮತಾಂತರ ವಿಷಯವಾಗಿ ವಿಸ್ತಾರವಾಗಿ ತೋರಿಸಿದ್ದಾರೆ. ಮಲಗಿರುವ ಹಿಂದಗಳೇ ಈಗ ಜಾಗೃತರಾಗಬೇಕಿದೆ ಎಂದರು.

ನಮ್ಮಲ್ಲಿರುವ ಪಾಠಗಳಲ್ಲಿ ಶೇ.90 ರಷ್ಟು ಸುಳ್ಳು ಹೇಳಲಾಗಿದೆ. ಸಾವಿರಾರು ವರ್ಷಗಳ ಹಿಂದೆ ನಮ್ಮ ನಮ್ಮಲ್ಲೇ ಗೊಂದಲ ಮೂಡಿಸಿ ಹಿಂದುಗಳಲ್ಲಿ ಒಡಕುಂಟಾಯಿತು. ಅಲೆಕ್ಸಾಂಡರ್ ದೇಶದ ಮೇಲೆ ಆಕ್ರಮಣ ಮಾಡಲು ಬಂದವನು. ನಾಚಿಕೆ ಇಲ್ಲದವರು ಅಲೆಕ್ಸಾಂಡರ್ ಗ್ರೇಟ್ ಅಂತಾರೆ. ಅಲೆಕ್ಸಾಂಡರ್ ಸೋಲಿಸಿದ ಪರಾಕ್ರಮಿಶಾಲಿ ದೇಶ ಭಾರತ ಎಂದರು.

ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಸೇರಿದಂತೆ ಹಲವು ಮಾತೆಯರು ಈ ದೇಶಕ್ಕಾಗಿ ಹೋರಾಡಿದ್ದಾರೆ. ಬ್ರಿಟಿಷರ ವಿರುದ್ಧ ನಾವು ಮಾನಸಿಕವಾಗಿ ಸೋತೆವು ಅಷ್ಟೆ. ಮೊಘಲರು ಒಳ ನುಸುಳಿ ಈ ದೇಶವನ್ನು ಮುಸ್ಲಿಂ ದೇಶ ಮಾಡಲು ಮುಂದಾದರು. ಘಜನಿ ಮಹಮ್ಮದ್ ಕಾಲದಿಂದಲೂ ಈ ದೇಶವನ್ನು ಮುಸ್ಲಿಂ ದೇಶ ಮಾಡಬೇಕು ಎಂಬುದಿದೆ. ದಾಳಿ ವೇಳೆ ಹಿಂದುಗಳ ಕೊಲೆ ಅತ್ಯಾಚಾರ ಮಾಡಲಾಯಿತು ಎಂದು ಕಿಡಿಕಾರಿದರು.

ದೇಶವನ್ನು ಇಸ್ಲಾಮೀಕರಣ, ಕ್ರಿಶ್ಚಿಯನ್ನೀಕರಣ ಮಾಡಲು ಹಲವು ಯತ್ನಗಳಾಗಿದೆ. ಆಸೆ, ಆಮಿಷ, ಬೆದರಿಕೆ, ಕೊಲೆ ಮಾಡಿ ಮತಾಂತರ ಮಾಡಿದ್ದಾರೆ. ಕ್ರಿಶ್ಚಿಯನ್ನರು, ಮುಸ್ಲಿಮರು ಕಾಲಿಟ್ಟಾಗಲೇ ದೇಶವನ್ನು ಮತಾಂತರ ಮಾಡಲು ಯೋಚಿಸಿದ್ದರು ಎಂದರು.

ಕಾಂಗ್ರೆಸ್ ಮುಸ್ಲಿಮರ ಪರವಾಗಿ ನಿಂತರು:

ಕಾಂಗ್ರೆಸ್ ಮುಸ್ಲಿಮರ ಬೇಡಿಕೆ ಪೂರೈಸುವ ಕೆಲಸ ಮಾಡುತ್ತ ಬಂದಿತ್ತು. ಪಾಕಿಸ್ತಾನಕ್ಕಾಗಿ ಮುಸಲ್ಮಾನರು ಹೋರಾಟ ಮಾಡಿದ್ದರು. ಬ್ರಿಟೀಷರ ವಿರುದ್ಧ ಹೋರಾಡಬೇಕಿದ್ದವರು ಹಿಂದೂಗಳ ವಿರುದ್ಧ ಹೋರಾಡಿದರು. ದೇವಸ್ಥಾನಗಳ ನಿರ್ನಾಮ ಮಾಡಿದ್ದರು. ಇಂತಹವರಿಂದಾಗಿ ವೇದ ಉಪನಿಷತ್ತು ಹುಟ್ಟಿದ ದೇಶ ಇದೀಗ ನಮ್ಮ ಕೈಯ್ಯಲಿಲ್ಲ. ಹಿಂದೂ ಪದ ಹುಟ್ಟಿದ ಸಿಂಧು ನದಿ ನಮ್ಮ ಕೈಯಲಿಲ್ಲ. ಎಲ್ಲವನ್ನು ಈ ದೇಶ ಕಳೆದುಕೊಂಡಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಮುಸ್ಲಿಂ ದೇಶ ಮಾಡಲು ಮುಸ್ಲಿಂ ಲೀಗ್ ಸ್ಥಾಪನೆ ಆಯಿತು. ಕಾಂಗ್ರೆಸ್ ಮತ್ತು ನೆಹರು ಮೋಸ ಮಾಡಿದರು. ಕಾಶ್ಮೀರವನ್ನು ಪಾಕಿಸ್ತಾನ ವಶಪಡಿಸಿಕೊಂಡಾಗ ನೆಹರು ಮತ್ತು ಕಾಂಗ್ರೆಸ್‌ನಿಂದ ಮೋಸ ಆಯಿತು ಎಂದು ದೂರಿದರು.

ಕ್ಯಾ.ಪ್ರಾಂಜಲ್ ಬಲಿದಾನಕ್ಕೆ ಕಾರಣರಾದವರು ಕಾಂಗ್ರೆಸ್. ಆ ವಿಷಬೀಜ ಬಿತ್ತಿ, ಬೆಳೆದವರು ಕಾಂಗ್ರೆಸ್. ದೇಶದ ಆದಾಯದ ಮೊದಲ ಭಾಗ ಮುಸಲ್ಮಾನರಿಗೆ ಎಂದು ಮನಮೋಹನ್ ಸಿಂಗ್ ಹೇಳಿದ್ದರು. 10 ಸಾವಿರ ಕೋಟಿರು ಮುಸ್ಲಿಮರಿಗೆ ಮೀಸಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಾರಪ್ಪನ ದುಡ್ಡು ಅವರಿಗೆ ನೀವು ಮೀಸಲಿಡಲು. ಸರ್ಕಾರಕ್ಕೆ ತೆರಿಗೆ ಕಟ್ಟುವುದು ಹಿಂದೂಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಗತ್ತಿನ ಎಲ್ಲಾ ಜನರಿಗೆ ಬದುಕು ಕೊಟ್ಟ ದೇಶ:

ಹನುಮ ನಮ್ಮ ಧರ್ಮ. ರಾಮ ನಮ್ಮ ಸಂಸ್ಕೃತಿ, ಧೈರ್ಯ, ಸಮರ್ಪಣೆ ಶ್ರೀರಾಮ ಸರ್ವ ಶ್ರೇಷ್ಠ ವ್ಯಕ್ತಿ. ರಾಮನ ಹೃದಯದಲ್ಲಿ ಹನುಮಂತನಿದ್ದಾನೆ. ಪವಿತ್ರ ಅಯೋಧ್ಯೆಯಲ್ಲಿ ಮತ್ತೊಮ್ಮೆ ರಾಮಮಂದಿರ ನಿರ್ಮಾಣವಾಗಲಿದೆ. ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಜಗತ್ತಿನ ಎಲ್ಲ ಜನರಿಗೆ ಬದುಕು ಕೊಟ್ಟ ದೇಶ. ಜಗತ್ತಿಗೆ ನಾಗರಿಕತೆ ಹೇಳಿಕೊಟ್ಟದ್ದು ನಮ್ಮ ಜನ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಹಿಂದೂ ಧರ್ಮದ ನಿದರ್ಶನಗಳಿವೆ ಎಂದರು.