ಸಾರಾಂಶ
ಜಿಲ್ಲೆಯಲ್ಲಿ ನಿರಂತರವಾಗಿ ಗೋ ಹತ್ಯೆ, ಅಕ್ರಮ ಗೋವುಗಳ ಸಾಗಾಟ, ಗೋವುಗಳ ಕಳ್ಳತನ ನಡೆಯುತ್ತಿದೆ. ಇದರ ವಿರುದ್ಧ ಜಿಲ್ಲಾ ಹಿಂದು ಜಾಗರಣಾ ವೇದಿಕೆ ವತಿಯಿಂದ ಫೆ.29ರಂದು ಭದ್ರಾವತಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಜಿಲ್ಲಾ ಸಂಚಾಲಕ ದೇವರಾಜ ಅರಳೀಹಳ್ಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ನಿರಂತರವಾಗಿ ಗೋ ಹತ್ಯೆ, ಅಕ್ರಮ ಗೋವುಗಳ ಸಾಗಾಟ, ಗೋವುಗಳ ಕಳ್ಳತನ ನಡೆಯುತ್ತಿದೆ. ಇದರ ವಿರುದ್ಧ ಜಿಲ್ಲಾ ಹಿಂದು ಜಾಗರಣಾ ವೇದಿಕೆ ವತಿಯಿಂದ ಫೆ.29ರಂದು ಭದ್ರಾವತಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಜಿಲ್ಲಾ ಸಂಚಾಲಕ ದೇವರಾಜ ಅರಳೀಹಳ್ಳಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ. ಅದರಲ್ಲೂ ಭದ್ರಾವತಿಯ ಬಹುತೇಕ ಕಡೆ ಅಕ್ರಮ ಕಸಾಯಿಖಾನೆಗಳು ತಲೆಯೆತ್ತಿವೆ. ಸುಮಾರು 40 ಕಸಾಯಿಖಾನೆಗಳು ನಡೆಯುತ್ತಿದ್ದರೂ ಪೊಲೀಸರಿಗೆ ಮಾಹಿತಿ ಇಲ್ಲ ಎಂದು ದೂರಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ಮಾಡಿ ಗೋ ವಧೆಗೆ ಕಡಿವಾಣ ಹಾಕಬೇಕು. ಪ್ರಸ್ತುತ ಜಾರಿಯಲ್ಲಿರುವ ಗೋ ಹತ್ಯೆ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.
ಬಕ್ರಿದ್ ಮಾರನೇ ದಿನ ಶಿಕಾರಿಪುರದ ಪುಣೆದ ಹಳ್ಳಿಯ ಬಳಿ ಸುಮಾರು ಗೋವುಗಳ ಚರ್ಮ ಮತ್ತು ಕ್ವಿಂಟಲ್ಗಟ್ಟಲೆ ಗೋಮಾಂಸ ಸಿಕ್ಕಿದೆ. ಆದರೂ ಗಾಡಿಯಲ್ಲಿ ಕೊಂಡೊಯ್ಯುತ್ತಿದ್ದವನ ಮೇಲೆ ಪ್ರಕರಣ ದಾಖಲಾಗಿದೆ.
ಆದರೆ, ಇಲ್ಲಿಯವರೆಗೂ ಗೋ ಹತ್ಯೆ ಮಾಡಿದ ಮೂಲ ಆರೋಪಿಗಳನ್ನು ಬಂಧಿಸದೇ, ಗೋ ಹತ್ಯೆ ಮಾಡಿರುವ ಸ್ಥಳಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ಆರೋಪಿಸಿದರು.
ಶಿರಾಳಕೊಪ್ಪದಲ್ಲಿ ಮನೆಯೊಂದರಲ್ಲಿ ಗೋವನ್ನು ಕಡಿಯುತ್ತಿದ್ದ ಪ್ರಕರಣ ದಾಖಲಾಗಿದೆ. ಆದರೆ, ಆ ಮನೆಯ ಮೇಲೆ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿಲ್ಲ. ಮಾಚೇನಹಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸುಮಾರು ಗೋವುಗಳ ಬೋಟಿ, ಗೋಮಾಂಸದ ತ್ಯಾಜ್ಯಗಳು ದೊರೆತಿವೆ. ಆದರೂ, ಗೋ ಹತ್ಯೆ ಮಾಡಿರುವ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ.
ಭದ್ರಾವತಿಯ ಭದ್ರಾನದಿ ದಡದಲ್ಲಿ ಸುಮಾರು 2ರಿಂದ 3 ಟನ್ನಷ್ಟು ಗೋಮಾಂಸದ ಕುರುಹುಗಳು ದೊರೆತಿವೆ. ಹೀಗೆ ಸಾಲು ಸಾಲಾಗಿ ನೂರಾರು ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾದರೂ ಯಾವುದೇ ಕಾನೂನಿನ ಭಯವಿಲ್ಲದೇ ಭದ್ರಾವತಿಯ ತಿಪ್ಲಾಪುರ, ಗೌಡ್ರಳ್ಳಿ ಕಾಗೆಕೋಡಮಗ್ಗೆ, ಬೊಮ್ಮನಕಟ್ಟೆ, ದೊಣಬಘಟ್ಟ, ಅನ್ವರ್ ಕಾಲೋನಿ, ಮುಂತಾದ ಸ್ಥಳಗಳಲ್ಲಿ ಅಕ್ರಮ ಗೋವಿನ ಕಸಾಯಿಖಾನೆಗಳು ಭದ್ರಾವತಿ ನಗರದ ಮುಖ್ಯ ರಸ್ತೆಗಳಲ್ಲಿ ಅಕ್ರಮ ಗೋಮಾಂಸದ ಹೋಟೆಲ್ಗಳು ತಲೆಯೆತ್ತಿವೆ. ಹಲವಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸುಗಳು ದಾಖಲಾಗಿದ್ದರು.
ಸೂಕ್ತ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಪಾದಿಸಿದರು. ಪತ್ರಿಕಾಗೋಷ್ಟಿಯಲ್ಲಿ ವೇದಿಕೆಯ ಮುಖಂಡರಾದ ಸುಧೀಂದ್ರ, ಸುರೇಶ್ ದಿನೇಶ್, ಪವನ್ ಮತ್ತಿತರರು ಇದ್ದರು.