ಸಾರಾಂಶ
ಸಿಂಧನೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಿಂಧನೂರು ತಾಲೂಕಾ ಅಧ್ಯಕ್ಷರಾಗಿ ಚಂದ್ರಶೇಖರ ಹಿರೇಮಠ ಆಯ್ಕೆಯಾದರು.34 ಸ್ಥಾನ ಬಲದ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ತಾಪಂ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಚಂದ್ರಶೇಖರ ಹಿರೇಮಠ 22 ಮತಗಳನ್ನು ಪಡೆದು ಜಯಶಾಲಿಗಳಾದರೆ, ಇನ್ನೂ ವೀರೇಶ ಸಾಸಲಮರಿ 12 ಮತಗಳನ್ನು ಪಡೆಯುವ ಮೂಲಕ ಸೋಲು ಕಂಡರು. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿನ ಕೆಲವು ಗೊಂದಲಗಳಿಂದ ಚುನಾವಣಾಧಿಕಾರಿಗಳ ನಡೆ ಚರ್ಚೆಗೆ ಕಾರಣವಾಗಿತ್ತು. ಆದರೆ ಇಂದು ಸುಸೂತ್ರವಾಗಿ ಚುನಾವಣೆ ನಡೆದು, ಮತಗಳ ಎಣಿಕೆಯೂ ನಡೆಯಿತು. ಇಬ್ಬರು ಅಭ್ಯರ್ಥಿಗಳು ಸತಾಯ ಗತಾಯ ಗೆಲ್ಲಲೇಬೇಕು ಎನ್ನುವ ನಿಟ್ಟಿನಲ್ಲಿ ನಾನಾ ತಂತ್ರಗಳನ್ನು ಬಳಸಿದ್ದರು. ಚುನಾವಣಾಧಿಕಾರಿಗಳಾಗಿ ನಿವೃತ್ತ ಮುಖ್ಯಗುರು ಬಿ.ರವಿಯಪ್ಪ, ಸಹಾಯಕ ಚುನಾವಣಾಧಿಕಾರಿಯಾಗಿ ಅಮರಯ್ಯ ಸ್ವಾಮಿ ಕಾರ್ಯ ನಿರ್ವಹಿಸಿದರು. ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಚಂದ್ರಶೇಖರ ಹಿರೇಮಠ ಅವರ ಬೆಂಬಲಿಗರು ಹೂ ಮಾಲೆ ಹಾಕಿ ವಿಜಯೋತ್ಸವ ಆಚರಿಸಿದರು.