ಸಾರಾಂಶ
ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಐತಿಹಾಸಿಕ ವೈಭವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾರ್ಥಿಗಳಲ್ಲಿ ಜ್ಞಾನದ ಶಕ್ತಿ ಹೆಚ್ಚಿಸಲು ಐತಿಹಾಸಿಕ ವೈಭವದಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಹೇಳಿದರು.ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಐತಿಹಾಸಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದ ಸಂಸ್ಕೃತಿ, ಇತಿಹಾಸ, ಪರಂಪರೆ ಕುರಿತು ಪೂರ್ವಜರು ನಮ್ಮ ನಾಡನ್ನು ಆಳಿದ ರಾಜರ ಬಗ್ಗೆ ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಈ ಐತಿಹಾಸಿಕ ವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಇತಿಹಾಸದ ಬಗ್ಗೆ ಕಲಿಕೆ ಅವಧಿಯಲ್ಲಿಯೇ ಸವಿಸ್ತಾರವಾಗಿ ಮನವರಿಕೆ ಮಾಡುವ ಅಗತ್ಯ ಇದೆ. ಕಳೆದ ಬಾರಿ ನಡೆಸಿದ ದಸರಾ ವೈಭವ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿ ಅಚ್ಚಳಿಯದೆ ಉಳಿದಿದೆ ಎಂದರು.ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿ ಶ್ರೀಮಂತವಾದ ಭಾರತ ದೇಶ ಒಗ್ಗಟ್ಟಿನಿಂದ ಪ್ರಪಂಚದಲ್ಲೇ ಸೂಪರ್ ಪವರ್ ಆಗಬೇಕೆಂದು ಕನಸು ಕಾಣುತ್ತಿದ್ದು, ಇದನ್ನು ನನಸು ಮಾಡಲು ವಿದ್ಯಾರ್ಥಿಗಳಿಗೆ ಇತಿಹಾಸದ ಪರಿಚಯ ಅಗತ್ಯ ಎಂದು ಹೇಳಿದರು.ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಎಂ.ಸಿ. ಪ್ರಕಾಶ್ ಮಾತನಾಡಿ, ಇತಿಹಾಸದ ಬಗ್ಗೆ ಅಧ್ಯಯನ ಮಾಡಿದಾಗ ಅನೇಕ ರೀತಿ ಇತಿಹಾಸದ ಪ್ರಕಾರಗಳು ಗೋಚರಿಸುತ್ತವೆ. ಮನುಷ್ಯ 50 ವರ್ಷಗಳ ನಂತರ ತಮ್ಮ ಮೂಲ ಸಂಸ್ಕೃತಿ ಹುಡುಕುತ್ತಾನೆ ಎಂದು ಹೇಳಿದರು.
ಕೆಳದಿ, ಹೊಯ್ಸಳ, ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಸೇರಿದಂತೆ ಹಲವಾರು ಇತಿಹಾಸ ಮರುಕಳಿಸುವ ಪಾತ್ರ ಗಳನ್ನು ವಿದ್ಯಾರ್ಥಿಗಳು ಧರಿಸಿದ್ದು, ಈ ಕಾರ್ಯಕ್ರಮ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲು ಸಹಕಾರಿ ಎಂದು ಹೇಳಿದರು.ಪ್ರೊ. ಅನುರಾಧ ಮಾತನಾಡಿ, ಸಮಾಜದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಅವರದೇ ಆದ ಇತಿಹಾಸ, ಪರಂಪರೆ ಇದೆ. ಆದರೆ, ಒಕ್ಕಲಿಗರಿಗೆ ಬಹುದೊಡ್ಡ ಇತಿಹಾಸವೇ ಇದೆ. ಅದನ್ನು ವಿದ್ಯಾರ್ಥಿಗಳು ಪಾತ್ರಗಳ ಮೂಲಕ ಅನಾವರಣ ಮಾಡ ಬೇಕಾಗಿದೆ ಎಂದು ಹೇಳಿದರು.ಸಂಘದ ಸಹ ಕಾರ್ಯದರ್ಶಿ ಕೆ.ಕೆ. ಮನುಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕಲೆ, ಸಾಹಿತ್ಯ, ಸಂಗೀತ ಮತ್ತು ನಾಟಕಗಳಲ್ಲಿ ಅಭಿನಯಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದು ಎಂದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಲಕ್ಷ್ಮಣ್ ಗೌಡ, ಮಾಜಿ ಕಾರ್ಯದರ್ಶಿ ಉಮೇಶ್ಚಂದ್ರ, ಜೆವಿಎಸ್ ಕಾಲೇಜಿನ ಪ್ರಾಂಶುಪಾಲರಾದ ತೇಜಸ್ವಿನಿ, ತೀರ್ಪುಗಾರರಾದ ಬಿ.ತಿಪ್ಪೇರುದ್ರಪ್ಪ, ದಯಾನಂದ್, ಸಿಇಒ ಕುಳ್ಳೇಗೌಡ, ವ್ಯವಸ್ಥಾಪಕ ತೇಜಸ್ ಮೂರ್ತಿ, ಮುಖ್ಯ ಶಿಕ್ಷಕ ವಿಜಿತ್ , ಶಿಕ್ಷಕಿ ಪ್ರೀತಿ , ಪ್ರಮೀಳ ಉಪಸ್ಥಿತರಿದ್ದರು. 29 ಕೆಸಿಕೆಎಂ 3ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ನಡೆದ ಐತಿಹಾಸಿಕ ವೈಭವ ಕಾರ್ಯಕ್ರಮವನ್ನು ಟಿ. ರಾಜಶೇಖರ್ ಉದ್ಘಾಟಿಸಿದರು. ಎಂ.ಸಿ. ಪ್ರಕಾಶ್, ಕೆ.ಕೆ. ಮನುಕುಮಾರ್, ಪ್ರೊ. ಅನುರಾಧ ಇದ್ದರು.