ಧಾರವಾಡದಲ್ಲಿ ಶುರುವಾಗಿದೆ ಹೋಳಿ ರಾಜಕೀಯ

| Published : Mar 14 2025, 01:34 AM IST

ಧಾರವಾಡದಲ್ಲಿ ಶುರುವಾಗಿದೆ ಹೋಳಿ ರಾಜಕೀಯ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲ ವರ್ಷಗಳಿಂದ ಶಾಸಕ ಅರವಿಂದ ಬೆಲ್ಲದ ಕರ್ನಾಟಕ ಕಾಲೇಜು ವೃತ್ತದಲ್ಲಿ ಶುರು ಮಾಡಿದರು

ಧಾರವಾಡ:ಪ್ರಸಕ್ತ ಹೋಳಿ ಹಬ್ಬವನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಮುಖಂಡರುಗಳು ಪ್ರತಿಷ್ಠೆಯ ಕಣವಾಗಿಸಿಕೊಂಡಿದ್ದು, ಧಾರವಾಡದಲ್ಲಿ ಹೋಳಿ ರಾಜಕೀಯ ಶುರುವಾಗಿದೆ.

ಶಾಸಕ ಅರವಿಂದ ಬೆಲ್ಲದ ಮುಖಂಡತ್ವದಲ್ಲಿ ಬಿಜೆಪಿ ಮುಖಂಡರು ಎಲ್‌ಐಸಿ ಬಳಿಯ ಎಸ್‌ಬಿಐ ವೃತ್ತದಲ್ಲಿ ಹೋಳಿ ಹಬ್ಬ ಹಾಗೂ ರೇನ್‌ ಡ್ಯಾನ್ಸ್‌ ಹಮ್ಮಿಕೊಂಡಿದ್ದರೆ, ತಾವೇನೂ ಕಮ್ಮಿ ಇಲ್ಲ ಎಂದು ಶಾಸಕ ವಿನಯ ಕುಲಕರ್ಣಿ ಅಭಿಮಾನಿಗಳು ಶಿವಾಜಿ ವೃತ್ತದಲ್ಲಿ ಇದೇ ತೆರನಾದ ಕಾರ್ಯಕ್ರಮ ಆಯೋಜಿಸಿದ್ದಾರೆ.

ಈ ಮೊದಲು ಟಿಕಾರೆ ರಸ್ತೆಯಲ್ಲಿ ಗಡಿಗೆ ಒಡೆಯುವ ಸ್ಪರ್ಧೆ ಸಾರ್ವಜನಿಕರಿಂದ ಅದ್ಭುತವಾಗಿ ನಡೆಯುತ್ತಿತ್ತು. ಜತೆಗೆ ಜಯನಗರದಲ್ಲೂ ಶಾಸಕ ವಿನಯ ಕುಲಕರ್ಣಿ ನೇತೃತ್ವದಲ್ಲಿ ಗಡಿಗೆ ಒಡೆಯುವ ಸ್ಪರ್ಧೆ ಇತ್ತು. ಕೋವಿಡ್‌ ನಂತರದಲ್ಲಿ ಹೋಳಿಯಲ್ಲಿ ಇವೆರೆಡು ಬಂದ್‌ ಆಗಿದ್ದವು.

ಕೆಲ ವರ್ಷಗಳಿಂದ ಶಾಸಕ ಅರವಿಂದ ಬೆಲ್ಲದ ಕರ್ನಾಟಕ ಕಾಲೇಜು ವೃತ್ತದಲ್ಲಿ ಶುರು ಮಾಡಿದರು. ಈ ಬಾರಿಯೂ ಇದೇ ವೃತ್ತದಲ್ಲಿ ಆಯೋಜನೆಯಾಗಿತ್ತು. ಆದರೆ, ಕೈ ಮುಖಂಡ ನಾಗರಾಜ ಗೌರಿ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ಹಿನ್ನೆಲೆಯಲ್ಲಿ ಎಲ್‌ಐಸಿ ಬಳಿಯ ಎಸ್‌ಬಿಐ ವೃತ್ತದಲ್ಲಿ ಸ್ಥಳಾಂತರಿಸಲಾಯಿತು.

ಇನ್ನು, ಬಿಜೆಪಿ ಮುಖಂಡರು ಎರಡ್ಮೂರು ದಿನಗಳ ಹಿಂದೆ ಹಲಗೆ ಹಬ್ಬಕ್ಕೆಚಾಲನೆ ನೀಡಿದ್ದು, ಕಾಂಗ್ರೆಸ್‌ ಮುಖಂಡರು ವಿನಯ ಕುಲಕರ್ಣಿ ಬ್ರಿಗೇಡ್‌ ಹೆಸರಿನಲ್ಲಿ ಹಲಗೆ ಹಬ್ಬವನ್ನು ಕಡಪಾ ಮೈದಾನದಿಂದ ಗುರುವಾರ ಶುರು ಮಾಡಿದರು.

ಇದಕ್ಕೆ ಅಪಸ್ವರ ಎತ್ತಿರುವ ಜೆಡಿಎಸ್‌ ಮುಖಂಡ ಗುರುರಾಜ ಹುಣಸೀಮರದ, ಸಂಸ್ಕೃತಿ ಉಳಿಸುವ ಬದಲು ಶಾಸಕರುಗಳೇ ಸಂಸ್ಕೃತಿ ಹಾಳು ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಪೂಜೆ, ನಾಳೆ ಕಾಮದಹನ:

ಧಾರವಾಡದಲ್ಲಿ ಮಾ.14ರಂದು ಹೋಳಿ ಹುಣ್ಣಿಮೆ ನಿಮಿತ್ತ ಶುಕ್ರವಾರ ಮಧ್ಯಾಹ್ನ ನಂತರ ಕಾಮಣ್ಣನ ಪ್ರತಿಷ್ಟಾಪನೆ ಆಗಲಿದೆ. ಸಂಜೆಯಿಂದ ರಾತ್ರಿ ವರೆಗೆ ಪೂಜೆ ನಡೆಯಲಿದೆ. ಮಾ.15ರ ಶನಿವಾರ ಕಾಮಣ್ಣನ ದಹನ ಮಾಡಲಾಗುವುದು.

ನಂತರ ಹೋಳಿ ಹಬ್ಬ,ಬಣ್ಣದಾಟ ನಡೆಯಲಿದೆ. ಈ ಸಮಯದಲ್ಲಿ ಯಾವುದೇ ಗದ್ದಲ-ಗೊಂದಲ ಆಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಜತೆಗೆ ಮಾ.15ರ ಶುಕ್ರವಾರ ಸಂಜೆ 6 ರಿಂದ ಮಾ.16ರ ಭಾನುವಾರ ಬೆಳಗ್ಗೆ 6ರ ವರೆಗೆ ಮದ್ಯ ಮಾರಾಟ ಬಂದ್‌ ಮಾಡಲಾಗಿದೆ.