ಪಟ್ಟದ್ದೇವರ ಕಾಯಕದಿಂದ ಮಠಕ್ಕೆ ಗೌರವ: ಸಚಿವ ಈಶ್ವರ ಖಂಡ್ರೆ

| Published : Dec 23 2023, 01:46 AM IST

ಸಾರಾಂಶ

ಬಸವತತ್ವವನ್ನು ಕೇವಲ ಬೋಧನೆ ಮಾಡದೆ ಚನ್ನಬಸವ ಪಟ್ಟದ್ದೇವರು ನುಡಿದಂತೆ ನಡೆದರು: ಉಸ್ತುವಾರಿ ಸಚಿವ. ಭಾಲ್ಕಿಯಲ್ಲಿ ಪಟ್ಟದ್ದೇವರ 134ನೇ ಜಯಂತ್ಯುತ್ಸವ ಮತ್ತು ಮೂರ್ತಿ ಅನಾವರಣ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಭಾಲ್ಕಿ

ಮಠ, ಮಾನ್ಯಗಳಿಂದ ಸ್ವಾಮೀಜಿ ಆದವರಿಗೆ ಗೌರವ ಸಿಗುವುದು ಸಾಮಾನ್ಯ. ಆದರೆ, ಲಿಂ. ಡಾ.ಚನ್ನಬಸವ ಪಟ್ಟದ್ದೇವರು ಸತ್ಯಶುದ್ಧ ಕಾಯಕದ ಮೂಲಕ ಶ್ರೀಮಠದ ಕೀರ್ತಿಯನ್ನು ಬೆಳಗಿಸಿದವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಚನ್ನಬಸವಾಶ್ರಮ ಪರಿಸರದ ಹರ್ಡೇಕರ ಮಂಜಪ್ಪನವರ ವೇದಿಕೆಯಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಡಾ. ಚನ್ನಬಸವ ಪಟ್ಟದ್ದೇವರ 134ನೇ ಜಯಂತ್ಯುತ್ಸವ ಮತ್ತು ಮೂರ್ತಿ ಅನಾವರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ವಚನವನ್ನು ಪಟ್ಟದ್ದೇವರು ತಮ್ಮ ಜೀವನದಲ್ಲಿ ಅಕ್ಷರಶಹಃ ಪಾಲಿಸಿಕೊಂಡು ಬಂದಿದ್ದರು. ಗಡಿ ಭಾಗದಲ್ಲಿ ಪಟ್ಟದ್ದೇವರು ಅನೇಕ ವಿಧಾಯಕ ಕಾರ್ಯಗಳು ಅಚ್ಚಳಿಯದಂತೆ ಮಾಡಿದ್ದಾರೆ. ಜೀವನದುದ್ದಕ್ಕೂ ಅವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕ ಕ್ಷೇತ್ರಗಳ ಸೇವೆಯ ಮೂಲಕ ಅದ್ಭುತ ಕ್ರಾಂತಿಗೈದಿದ್ದಾರೆ. ಬಸವಾದಿ ಶರಣರಂತೆ ಪಟ್ಟದ್ದೇವರು ಕೂಡ ಕಾಯಕಕ್ಕೆ ಹೆಚ್ಚು ಆದ್ಯತೆ ಪ್ರಾತಿನಿಧ್ಯ ನೀಡಿದ್ದರು ಎಂದರು.

ಸಚಿವ ರಹೀಮ್‌ಖಾನ್‌ ಮಾತನಾಡಿ, ಬಸವಣ್ಣನವರ, ಪಟ್ಟದ್ದೇವರ ವಿಚಾರಧಾರೆ ಒಂದೆಯಾಗಿವೆ. ಅಂತಹ ಮಹಾತ್ಮರ ತತ್ವಗಳು ಪ್ರತಿಯೊಬ್ಬರು ಪಾಲಿಸಬೇಕು. ಪಟ್ಟದ್ದೇವರು ಈ ಭಾಗದಲ್ಲಿ ಮಾಡಿರುವ ಶೈಕ್ಷಣಿಕ ಕ್ರಾಂತಿ ಮಾದರಿ ಎನಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, 12ನೇ ಶತಮಾನದ ಶರಣರ ಕ್ರಾಂತಿಯನ್ನು 20ನೇ ಶತಮಾನದಲ್ಲಿಗೈದು ಸಮ ಸಮಾಜ ನಿರ್ಮಿಸಲು, ಸರ್ವ ಕ್ಷೇತ್ರಗಳ ಉದ್ಧಾರಕ್ಕೆ ಶ್ರಮಿಸಿದವರು ಲಿಂ. ಚನ್ನಬಸವ ಪಟ್ಟದ್ದೇವರು. ಎಲ್ಲರೂ ಅವರ ತತ್ವಗಳನ್ನು ಪಾಲಿಸಿ ಉತ್ತಮ ಬದುಕು ನಡೆಸಬೇಕು ಎಂದರು.

ನೇತೃತ್ವ ವಹಿಸಿದ ಗುರುಬಸವ ಪಟ್ಟದ್ದೇವರು ಮಾತನಾಡಿ, ವಿಶ್ವಗುರು ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಂಡವರಲ್ಲಿ ಪಟ್ಟದ್ದೇವರು ಮೊದಲಿಗರು. ಮಠದ ಸಂಪ್ರದಾಯವನ್ನು ಮುರಿದು ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯದ ಮೆರವಣಿಗೆ ನಡೆಸಿ ಬಸವತತ್ವದ ಮಹತ್ವ ಸಾರಿದ ಮಹಾನ್‌ ಚೇತನ. ಪಟ್ಟದ್ದೇವರು ಬಸವತತ್ವ-ಕನ್ನಡ ಎರಡು ಕಣ್ಣಾಗಿಸಿಕೊಂಡು ಈ ಭಾಗಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ ನಿಡಸೋಸಿ ಮಠದ ಜಗದ್ಗುರು ಪಂಚಮಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು.

ನಿವೃತ್ತ ಐಪಿಎಸ್‌ ಅಧಿಕಾರಿ ಡಿ.ವಿ.ಗುರುಪ್ರಸಾದ, ಕಾಯಕ ಪ್ರಶಸ್ತಿ ಪುರಸ್ಕೃತ ಶಿವಶರಣಪ್ಪ ಹುಗ್ಗೆ ಪಾಟೀಲ್‌ ಮಾತನಾಡಿದರು. ಬಸವಕಲ್ಯಾಣ ಅನುಭವ ಮಂಟಪ ಸಂಚಾಲಕ ವಿ. ಸಿದ್ಧರಾಮಣ್ಣ ಶರಣರು ಸಮ್ಮುಖ ವಹಿಸಿದರು.

ಅಟಲ್ ಬಿಹಾರಿ ವಾಜಪೇಯಿ ಫೌಂಡೇಶನ್‌ ಅಧ್ಯಕ್ಷ, ಬಿಜೆಪಿ ಹಿರಿಯ ಮುಖಂಡ ಗುರುನಾಥ ಕೊಳ್ಳೂರ ಬಸವ ಗುರುವಿನ ಪೂಜೆ ನೆರವೇರಿಸಿದರು. ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ ಸಿದ್ರಾಮ್‌, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಯುವ ಮುಖಂಡ ಚನ್ನಬಸವಣ್ಣ ಬಳತೆ, ಪ್ರಸನ್ನಕುಮಾರ ಚೌಕಿಮಠ, ಶಕುಂತಲಾ ಬೆಲ್ದಾಳೆ, ನೀಲಮ್ಮ ವಿಕೆ ಪಾಟೀಲ್‌, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಅಭಿಷೇಕ ಆರ್‌ ಪಾಟೀಲ, ಜಮ್ಮು ಆರ್ಮಿ ಆಸ್ಪತ್ರೆ ಕ್ಯಾಪ್ಟನ್‌ ಡಾ. ಸಂತೋಷಕುಮಾರ ಓಂಕಾರ ಬಲ್ಲೂರೆ, ಪುಣೆಯ ಸುಧಾ ಸಚಿನ ಕುಂಬಾರ ಇದ್ದರು.

ಇದೇ ವೇಳೆ ಬೀದರ್‌ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕ ಶಿವಶರಣಪ್ಪ ಹುಗ್ಗೆ ಪಾಟೀಲ್‌ ಅವರಿಗೆ 2023ನೇ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸ್ವಾಗತಿಸಿದರು. ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ್ ನಿರೂಪಿಸಿದರು. ಮಲ್ಲಮ್ಮ ನಾಗನಕೇರೆ ವಂದಿಸಿದರು.