ಕನ್ನಡಪ್ರಭ ವಾರ್ತೆ ಇಳಕಲ್ಲ

ದುಶ್ಚಟಗಳು ಕೇವಲ ಐದು ನಿಮಿಷ ನಿಮ್ಮ ಮನಸ್ಸಿಗೆ ಮುದ ಕೊಡಬಹುದು. ಆದರೆ ಅವು ನಿಮ್ಮ ಮನೆಯನ್ನೇ ಸರ್ವನಾಶ ಮಾಡುತ್ತವೆ. ನಿಮ್ಮ ಕುಟುಂಬವನ್ನು ಹಾಳು ಮಾಡುತ್ತವೆ ಎಂದು ಇಳಕಲ್ಲ ವಿಜಯ ಮಹಾಂತೇಶ್ವರ ಶ್ರೀಮಠದ ಡಾ.ಗುರುಮಹಾಂತ ಶ್ರೀಗಳು ನುಡಿದರು.

ಇಳಕಲ್ಲ ತಾಲೂಕಿನ ಚಕ್ಕಶಿವನಗುತ್ತಿ ಗ್ರಾಮದಲ್ಲಿ ಲಿಂ.ಡಾ.ಮಹಾಂತಪ್ಪಗಳ ೮ನೇ ಶತಮಾನೋತ್ಸವ ಅಂಗವಾಗಿ ಒಂದು ವಾರಗಳ ಕಾಲ ಪ್ರತಿದಿನ ಒಂದು ಗ್ರಾಮದಲ್ಲಿ ಪಾದಯಾತ್ರೆ ಮಾಡಿ ಜನರ ದುಶ್ಚಟಗಳನ್ನು ಭಿಕ್ಷೆ ಬೇಡಿ ಅವರನ್ನು ದುಶ್ಚಟಗಳಿಂದ ಮುಕ್ತ ಮಾಡುವ ಅಭಿಯಾನ ಹಮ್ಮಿಕೊಂಡಿದ್ದು, ಈ ನಿಮಿತ್ತ ಚಿಕ್ಕಶಿವನಗುತ್ತಿ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಪ್ರತಿ ಮನೆ ಮೆನೆಗೆ ಭೇಟಿ ನೀಡಿ ದುಶ್ಚಟಗಳ ಭಿಕ್ಷೆ ಬೇಡಿದರು.

ನಿಮ್ಮ ಮನೆಯಲ್ಲಿ ಯಾರಾದರೂ ದುಶ್ಚಟ ಮಾಡುತಿದ್ದರೆ ಅವುಗಳನ್ನು ನಮ್ಮ ಜೋಳಿಗೆಗೆ ಹಾಕಿ ನೀವು ಉತ್ತಮ ಸಂಸಾರವಂತರಾಗಿ ಎಂದು ಪಾದಯಾತ್ರೆ ಮೂಲಕ ದುಶ್ಚಟಗಳ ಭಿಕ್ಷೆ ಬೇಡಿ ಗ್ರಾಮಸ್ಥರ ಮನ ಪರಿವರ್ತನೆಗೆ ಪ್ರಯತ್ನ ಮಾಡಿದರು. ಶ್ರೀಗಳು ಮನೆ ಬಾಗಲಿಗೆ ಬಂದು ದುಶ್ಚಟಗಳನ್ನು ಬಿಡಲು ಮನವಿ ಮಾಡುವುದನ್ನು ನೋಡಿ ಅನೇಕರು ಶ್ರೀಗಳಿಗೆ ಬಂದು ತಮ್ಮ ದುಶ್ಚಟಗಳನ್ನು ಅವರ ಜೋಳಿಗೆಗೆ ಹಾಕಿ ಅವರ ಪಾದ ಮುಟ್ಟಿ ಇನ್ಮುಂದೆ ಸಾರಾಯಿ, ತಂಬಾಕು, ಬೀಡಿ, ಇಸ್ಪೀಟ್‌ ಸೇರಿ ಎಲ್ಲ ದುಶ್ಚಟಗಳಿಂದ ದೂರ ಇರುವುದಾಗಿ ಪ್ರಮಾಣ ಮಾಡಿದರು.

ಡಾ;ಗುರುಮಹಾಂತ ಶ್ರೀಗಳ ಜೊತೆಗೆ ಶಿರೂರಿನ ಡಾ.ಬಸವಲಿಂಗ ಶ್ರೀಗಳು, ವಿಜಯ ಮಹಾಂತೇಶ್ವರ ತುರಣ ಸಂಘದವರು, ಅಕ್ಕನ ಬಳಗದವರು, ಬಸವ ಕೇಂದ್ರ ಹಾಗೂ ನಗರದ ಅನೇಕ ಗಣ್ಯರು ಉಪಸ್ಥಿತರಿದ್ದರು.