ದಾಬಸ್ಪೇಟೆ: ಗೃಹಸಚಿವ ಜಿ.ಪರಮೇಶ್ವರ್ ಇತ್ತೀಚೆಗೆ ಕೆನಡಾದಲ್ಲಿ ಗುಂಡಿನ ದಾಳಿಗೆ ಬಲಿಯಾಗಿರುವ ಚಂದನ್ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ನಿವೃತ್ತ ದೈಹಿಕ ಶಿಕ್ಷಕ ನಂದಕುಮಾರ್ ಪುತ್ರ ಚಂದನ್ ಹತ್ಯೆ ವಿಷಾದಕರ. ಏರ್ ಪೋರ್ಟ್ನ ಪ್ರಕ್ರಿಯೆಗಳ ಬಗ್ಗೆ ರಾಜ್ಯ ಸರ್ಕಾರ ಸಹಾಯ ಮಾಡಲಿದೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದೇನೆ. ಚಂದನ್ ದುರ್ಘಟನೆ ತಂದೆ-ತಾಯಿಗೆ ಅಪಾರ ದುಃಖ ತಂದಿದೆ. ಅವರ ಕುಟುಂಬದ ಜೊತೆ ನಿಂತು ನೋವು ಹಂಚಿಕೊಳ್ಳುತ್ತೇವೆ ಎಂದರು.ಕೆನಡಾದಲ್ಲಿ ಕನ್ನಡಿಗನೊಬ್ಬನ ಹತ್ಯೆಯಾಗಿರುವುದು ಇದೇ ಮೊದಲು. ಇಂತಹ ಘಟನೆಗಳು ಮರುಕಳಿಸಬಾರದು. ಅಲ್ಲಿನ ಸರ್ಕಾರ ತನಿಖೆಗೆ ಆದೇಶಿಸಿದ್ದು, ತನಿಖಾ ವರದಿಯನ್ನು ಇಂಡಿಯನ್ ಎಂಬೆಸಿಗೆ ಸಲ್ಲಿಸುತ್ತದೆ. ಕೇಂದ್ರದ ಮೂಲಕ ನಮಗೂ ಮಾಹಿತಿ ಲಭಿಸಲಿದೆ ಎಂದರು.10 ಲಕ್ಷ ಭರಿಸುವ ಭರವಸೆ:
ಶಾಸಕ ಶ್ರೀನಿವಾಸ್ ಮಾತನಾಡಿ, ಮೃತ ಚಂದನ್ ವಿದೇಶದಲ್ಲಿಯೂ ಕನ್ನಡ ಉಳಿಸುವ ಬೆಳೆಸುವ ಕೆಲಸ ಮಾಡುತ್ತಿದ್ದವರು. ಅದಲ್ಲದೆ ಕೆನಡಾಕ್ಕೆ ಉದ್ಯೋಗಕ್ಕೆ ಹೋಗುತ್ತಿದ್ದ ಕನ್ನಡಿಗರಿಗೆ ಸಹಾಯ ಮಾಡುತ್ತಿದ್ದರು. ಮೃತ ಚಂದನ್ ಮೃತದೇಹ ಸ್ವಗ್ರಾಮಕ್ಕೆ ರವಾನಿಸಲು 10 ಲಕ್ಷ ರು.ಗಳ ವೆಚ್ಚವನ್ನು ನಾನೇ ಭರಿಸುತ್ತೇನೆ. ನಾನು ಸರ್ಕಾರದ ಜೊತೆ ಮಾತನಾಡಿ ಆದಷ್ಟು ಬೇಗ ಪಾರ್ಥಿವ ಶರೀರ ತರಲು ಕ್ರಮ ವಹಿಸುತ್ತೇನೆ ಎಂದರು.ಪೋಟೋ 3 :ಕೆನಾಡದಲ್ಲಿ ಗುಂಡೇಟಿಗೆ ಬಲಿಯಾದ ಚಂದನ್ ಮನೆಗೆ ಗೃಹಸಚಿವ ಜಿ.ಪರಮೇಶ್ವರ್, ಶಾಸಕ ಶ್ರೀನಿವಾಸ್ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.