ಯಲಬುರ್ಗಾ: ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಲಿಪಿಕ ನೌಕರರ, ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘದ ನ್ಯಾಯಸಮ್ಮತ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಘದ ರಾಜ್ಯ ಉಪಾಧ್ಯಕ್ಷ ಆದೆಪ್ಪ ಬಾಗ್ಲಿ ಭರವಸೆ ನೀಡಿದರು.
ಪಟ್ಟಣದ ಸಾಯಿ ಪ್ಯಾಲೇಸ್ನಲ್ಲಿ ಯಲಬುರ್ಗಾ-ಕುಕನೂರು ತಾಲೂಕಿನ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಲಿಪಿಕ ನೌಕರರ, ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ನಿವೃತ್ತ ಬೋಧಕೇತರ ನೌಕರರಿಗೆ ಗೌರವ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಬೋಧಕೇತರ ನೌಕರರ ಕಾರ್ಯಾಗಾರದ ಸಂಯುಕ್ತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಇಲಾಖೆಯ ಗ್ರೂಪ್ ಡಿ ಹಾಗೂ ವಾಹನ ಚಾಲಕರ ಮನವಿ ಮೇರೆಗೆ ಸಂಘ ಅಸ್ತಿತ್ವಕ್ಕೆ ತಂದಿರುವುದು ಖುಷಿಯ ವಿಚಾರ. ಸಂಘದ ಬಹುದಿನದ ಪ್ರಮುಖ ಬೇಡಿಕೆ ಈಡೇರಿಸಲು ಶ್ರಮಿಸಲಾಗುತ್ತಿದೆ. ಅದರಂತೆ ಸಂಘದ ಎಲ್ಲ ಸದಸ್ಯರು ಮೇಲಿಂದ ಮೇಲೆ ಸಭೆ ಸೇರಿ, ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚಿಸಿ, ಒಗ್ಗಟ್ಟಿನ ಬಲ ಪ್ರದರ್ಶಿಸಬೇಕು ಎಂದರು.ಸಂಘದ ತಾಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೋಧಕೇತರ ನೌಕರರನ್ನು ಸನ್ಮಾನಿಸಲಾಯಿತು. ಮಾಹಿತಿ ಹಕ್ಕು ಹಾಗೂ ಎಚ್ಆರ್ಎಂಎಸ್ ೨.೦ ವಿಷಯ ಕುರಿತು ಕಾರ್ಯಾಗಾರ ನಡೆಯಿತು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಮೌಳಿ, ಜಿಲ್ಲಾಧ್ಯಕ್ಷ ಅಯ್ಯಣ್ಣ ಮರದೂರ, ನಿವೃತ್ತ ಎಸ್ಎಡಿಪಿಐ ವಿರೂಪಾಕ್ಷಯ್ಯ ಹಿರೇಮಠ ಬೆಳಗಾವಿ, ವಿಜಯನಗರ ಪ್ರತಾಂತ್ರಿಕ ಸಹಾಯಕ ವೆಂಕಟೇಶ ದೇಶಪಾಂಡೆ, ಪ್ರತಾಂತ್ರಿಕ ವ್ಯವಸ್ಥಾಪಕ ಎನ್. ಪದ್ಮನಾಭರಾವ್, ಸೂರ್ಯನಾರಾಯಣ, ಜಿ. ಸೋಮಶೇಖರ್, ಶಿವಪ್ರಸಾದ್ ಸ್ವಾಮಿ, ಶಿವಶಂಕರ, ರಾಯಚೂರು ಜಿಲ್ಲಾಧ್ಯಕ್ಷ ಇಮ್ಯಾನುವೇಲ್, ಶ್ರೀಧರ, ಗೋಪಾಲರಾವ್, ಶಶಿಕಾಂತ, ಯಮನೂರಪ್ಪ ಗದಾರಿ, ಮಹೇಶ ಅಸೂಟಿ, ಬಿ. ಫಾರೂಖ್ ಖಾನ್, ಬಿ.ಎಸ್. ಪುರಾಣಿಕಮಠ, ಶರಣಪ್ಪ ಹಳ್ಳಿಕೇರಿ, ಸವಿತಾಬಾಯಿ, ಸಂತೋಷಗೌಡ, ಶಶಿಧರಗೌಡ ಗೌಡ್ರು, ಶಿವಪ್ಪ ಲಮಾಣಿ ಇತರರಿದ್ದರು.