ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಟ್ಟಣದ ಜನಾರ್ಧನಸ್ವಾಮಿ ದೇಗುಲ ಬೀದಿಯ ಹೊನ್ನಾಳಮ್ಮ ದೇಗುಲ ಲೋಕಾರ್ಪಣೆ ಪೂಜಾ ಕೈಂಕರ್ಯ ಗುರುವಾರ ಚಂಡಿಕಾ ಹೋಮದೊಂದಿಗೆ ಸುಸಂಪನ್ನವಾಯಿತು.ಮಂಗಳವಾರದಿಂದ ಆರಂಭಗೊಂಡ ಧಾರ್ಮಿಕ ಪೂಜಾ ಮಹೋತ್ಸವ ಮೂರು ದಿನಗಳವರೆಗೆ ವಿಜೃಂಭಣೆಯಿಂದ ನಡೆದು ಅಗ್ನಿ ದೇವನಿಗೆ ಮಂಗಳದ್ರವ್ಯ, ಅಷ್ಟದ್ರವ್ಯ, ಫಲತಾಂಬೂಲ ಅರ್ಪಿಸಿ ಗ್ರಾಮ ಸುಭಿಕ್ಷತೆಗೆ ಪ್ರಾರ್ಥಿಸಲಾಯಿತು. ಹೋಮದ ತಿರ್ಥ ಪ್ರಸಾದವನ್ನು ಭಕ್ತರಿಗೆ ನೀಡಲಾಯಿತು.
ಹೊನ್ನಾಳಮ್ಮ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ಅಧ್ಯಕ್ಷ ಕೆ.ಎಚ್.ಮೋಹನ್ಕುಮಾರ್ ನೇತೃತ್ವದಲ್ಲಿ ದೇವಿ ಜತೆ ವೀರಭದ್ರೇಶ್ವರ, ಲಕ್ಷ್ಮೀದೇವಿ ದೇವರನ್ನು ಪ್ರತಿಷ್ಟಾಪಿಸಲಾಯಿತು. ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥಸ್ವಾಮೀಜಿ ಅಮೃತ ಹಸ್ತದಿಂದ ಅರ್ಚಕ ಪ್ರಸನ್ನ ಹೊಳ್ಳ ಮಾರ್ಗದರ್ಶನದಲ್ಲಿ ವಿವಿಧ ಬಗೆಯ 120 ಹೋಮಗಳು ಅವಿರತವಾಗಿ ಜರುಗಿದವು.ಬುಧವಾರ ರಾತ್ರಿ ಆಶ್ಲೇಷ ಬಲಿ ಪೂಜೆಗೆ ಗ್ರಾಮದ ಸುತ್ತಮುತ್ತಲ ಭಕ್ತರು ಭಾಗವಹಿಸಿ ಸರ್ಪದೋಷ ಪರಿಹಾರಕ್ಕೆ ದೇವರಲ್ಲಿ ಮೊರೆಇಟ್ಟರು. ಅಂತಿಮ ದಿನವಾದ ಗುರುವಾರ ಚಂಡಿಕಾಹೋಮದಲ್ಲಿ ಅಧಿಕವಾಗಿ ಭಕ್ತರು ಭಾಗವಹಿಸಿ ಹೋಮ ಕುಂಡಕ್ಕೆಅಷ್ಟ ದ್ರವ್ಯ, ಫಲತಾಂಬೂಲ ಅರ್ಪಿಸಿ ಗ್ರಾಮ ಸಂರಕ್ಷಣೆ, ಮಳೆ, ಬೆಳೆಗಾಗಿ ಪ್ರಾರ್ಥಿಸಲಾಯಿತು.
ದೇವಿಗೆ ವಿವಿಧ ಪರಿಮಳ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಭಂಟದೇವರಾದ ದೊಡ್ಡಯ್ಯ, ಚಿಕ್ಕಯ್ಯ, ಹಳದಿರಣ್ಣ ದೇವರಿಗೆ ನೈವೇದ್ಯ ಅರ್ಪಿಸಿ ಗ್ರಾಮರಕ್ಷಣೆಗೆ ಮೊರೆ ಇಡಲಾಯಿತು.ಕಳಶಸೇವೆ, ಹೂವಿನ ಅಲಂಕಾರ ಸೇವೆ, ತ್ರೀಮದುರ ಸಮರ್ಪಣೆ, ಗುಡಾನ್ನ ಸಮರ್ಪಣೆ, ಆಶ್ಲೇಷ ಸೇವೆ, ವಸ್ತ್ರ ಸಮರ್ಪಣೆ, ಪಂಚ ಕಜ್ಜಾಯ ಸೇವೆ, ಸರ್ಪ ಸಂಸ್ಕಾರ, ಆಶ್ಲೇಷ ಪೂಜೆ, 108 ಕಲಶ ಪ್ರತಿಷ್ಟೆ ಸ್ವಸ್ತ್ರಿ ಪುಣ್ಯಾಹವಾಚನ, ಪ್ರಸನ್ನ ಪೂಜೆ, ಕಲಶಾಭಿಷೇಕ, ಅಷ್ಟಬಂಧ ಲೇಪನ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದಂತಹ ವಿವಿಧ ಪೂಜಾ ವಿಧಿ ವಿಧಾನಗಳು ಜರುಗಿದವು.
ನಿತ್ಯ ವೀರಭದ್ರಕುಣಿತ, ಚಂಡೆ ಮದ್ದಳೆಯಂತಹ ವಿವಿಧಜಾನಪದ ಕಲಾಪ್ರಕಾರಗಳ ವಾದನ ಭಕ್ತರ ಕಿವಿಗೆ ಇಂಪು ನೀಡಿತು.