ಸಾರಾಂಶ
ಕಾಗಿನೆಲೆ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ, ಸಾವಿರಾರು ಭಕ್ತರಿಂದ ಕೆಂಡಾದರ್ಚನೆ
ಕನ್ನಡಪ್ರಭ ವಾರ್ತೆ ಹೊನ್ನಾಳಿಪಟ್ಟಣದ ದೊಡ್ಡಕೇರಿಯ ಶ್ರೀ ಬೀರಲಿಂಗೇಶ್ವರ ದೇವರ ಕಾರ್ತಿಕೋತ್ಸವ ಅಂಗವಾಗಿ ಮಂಗಳವಾರ ದೇವರ ಕೆಂಡಾದರ್ಚನೆ ಹಾಗೂ ಮುಳ್ಳುಗದ್ದುಗೆ ಉತ್ಸವ ಮತ್ತು ಗುಗ್ಗಳ ಮಹೋತ್ಸವ ಸಾವಿರಾರು ಭಕ್ತರ ನಡುವೆ ಸಡಗರ ಹಾಗೂ ಸಂಭ್ರಮದಿಂದ ಜರುಗಿತು.
ಭಾನುವಾರ ಬೀರಪ್ಪ ದೇವರ ಕದಳಿ ಮಹೋತ್ಸವ, ಸೋಮವಾರ ಬೀರಪ್ಪ ದೇವರ ಪವಾಡ ಕಾರ್ಯಕ್ರಮಗಳು ಜರುಗಿದವು. ಮಂಗಳವಾರ ಬೆಳಿಗ್ಗೆ ಶ್ರೀ ಬೀರಲಿಂಗೇಶ್ವರ ದೇವರು, ಸುಡುಗಾಡು ಸಿದ್ದಪ್ಪ ದೇವರು, ವೀರಭದ್ರ ದೇವರು, ಹಳದಮ್ಮ ದೇವಿ ಹಾಗೂ ಗೋಪಗೊಂಡನಹಳ್ಳಿ ಬೀರಪ್ಪ ದೇವರ ಮೂರ್ತಿಗಳ ಹೂವುಗಳಿಂದ ಸಿಂಗರಿಸಿದ ಪಲ್ಲಕ್ಕಿಗಳಲ್ಲಿ ಹೊತ್ತು ತುಂಗಭದ್ರಾ ನದಿಗೆ ಪೂಜೆಗೆ ತೆರಳಿ ಅಲ್ಲಿ ಅಭಿಷೇಕ, ಸಕಲ ಪೂಜಾ ವಿಧಿ ವಿಧಾನಗಳು ನಡೆದವು.ಪೂಜಾ ಸಂದರ್ಭದಲ್ಲಿ ಡೊಳ್ಳುಗಳ ಶಬ್ದಕ್ಕೆ ಬೀರಪ್ಪ ದೇವರ ಗಣಮಕ್ಕಳ ಮೇಲೆ ದೇವರು ಆವಾಹನೆಯಾಗಿ ಗಣಮಕ್ಕಳಾದ ಅಣ್ಣಪ್ಪ ಸ್ವಾಮಿ ಕಬ್ಬಿಣದ ಮೊಳೆ ಪಲ್ಲಕ್ಕಿ ಮೇಲೆ ಹಾಗೂ ಬೀರದೇವರ ಗಣಮಗ ಪ್ರಭುಸ್ವಾಮಿ ಮುಳ್ಳು ಪಲ್ಲಕ್ಕಿ ಮೇಲೆ ಆಸೀನರಾದರು. ನಂತರ ನೂರಾರು ಮುತ್ತೈದೆಯರು, ದೇವರ ಸೇವೆಗಾಗಿ ಮೀಸಲಿದ್ದವರು, ದೇವರ ಹೊತ್ತವರು ಸಾಲಾಗಿ ತುಂಗಭದ್ರಾ ನದಿಯಿಂದ ಪುರಪ್ರವೇಶ ಮಾಡಿದರು.
ಪಟ್ಟಣದ ದುರ್ಗಮ್ಮ ದೇವಸ್ಥಾನದ ಮುಂಭಾಗದ ಹೊಂಡದಲ್ಲಿ ದೇವರ ಗಣ ಮಕ್ಕಳು ಮೊದಲು ಕೆಂಡ ಹಾಯ್ದ ಬಳಿಕ ಹರಕೆ ಹೊತ್ತ ಸಾವಿರಾರು ಭಕ್ತರು ಕೆಂಡ ತುಳಿದರು. ನಂತರ ಮೆರವಣಿಗೆಯಲ್ಲಿ ಹೊರಟ ಸಾಲು ಸಾಲು ದೇವರುಗಳು ಪ್ರಮುಖ ಬೀದಿಗಳಲ್ಲಿ ವಿವಿಧ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಹೊರಟು ದೊಡ್ಡಕೇರಿ ಬೀರಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬಂದು ಆಸೀನರಾದವು.ಇದಕ್ಕೂ ಮುನ್ನ ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಕಾರ್ಯಕ್ರಮದ ಆರಂಭದಲ್ಲಿ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ನಂತರ ದೇವಸ್ಥಾನಕ್ಕೆ ತೆರಳಿ ಭಕ್ತರಿಗೆ ದರ್ಶನ ನೀಡಿದರು. ಈ ವೇಳೆ ನೆರೆದಿದ್ದ ಸಾವಿರಾರು ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಮುಳ್ಳುಗದ್ದುಗೆ ಉತ್ಸವದಲ್ಲಿ ದೇವಸ್ಥಾನ ಸಮಿತಿ ಮುಖಂಡರಾದ ಎಚ್.ಬಿ. ಗಿಡ್ಡಪ್ಪ, ಗೌಡ್ರು ನರಸಪ್ಪ, ಪರಸಣ್ಣಾರ ನರಸಿಂಹಪ್ಪ, ತೆಂಗಿನಮರದ ಮಾದಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಚ್.ಬಿ. ಮಂಜಪ್ಪ, ಮುಖಂಡರಾದ ಎಂ.ಎಸ್. ಫಾಲಾಕ್ಷಪ್ಪ, ಎಚ್.ಡಿ. ವಿಜೇಂದ್ರಪ್ಪ, ಎಚ್.ಎಂ. ಗಾಳೇಶಪ್ಪ, ಸೊರಟೂರು ಗಣೇಶಪ್ಪ, ಭಂಗಿ ಪರಮೇಶ್ವರಪ್ಪ, ಗುಡ್ಡಜ್ಜಿ ಮೂರ್ತೆಪ್ಪ, ಬೂದೆಪ್ಪ, ಕವಳಿ ಮಾದಪ್ಪ, ಎಚ್.ಬಿ. ಅಣ್ಣಪ್ಪ ಸೇರಿ ಸಮಾಜದ ಮುಖಂಡರು ಭಾಗವಹಿಸಿದ್ದರು.ಇಂದಿನಿಂದ ಮೂರು ದಿನ ಕುಸ್ತಿ ಪಂದ್ಯಾವಳಿ
ಕಾರ್ತಿಕೋತ್ಸವ ಅಂಗವಾಗಿ ಜ.3ರಿಂದ 5ರವರೆಗೆ ಕುಸ್ತಿ ಪಂದ್ಯಾವಳಿಗಳ ಆಯೋಜಿಸಿದ್ದು, ಜ.3 ರಂದು ಎಚ್.ಬಿ. ಗಿಡ್ಡಪ್ಪ ಕುಸ್ತಿ ಪಂದ್ಯಾವಳಿಗಳಿಗೆ ಚಾಲನೆ ನೀಡುವರು. ಕುಸ್ತಿ ಪಂದ್ಯಾವಳಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೇರಿ ಅನೇಕ ಗಣ್ಯರು ಭಾಗವಹಿಸುವರು. ರಾಜ್ಯದ ವಿವಿಧ ಭಾಗಗಳಿಂದ ಬರುವ ಕುಸ್ತಿಪಟುಗಳಿಗೆ ಮೂರು ದಿನ ಕಾಲ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಪೈಲ್ವಾನರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕುಸ್ತಿ ಪಂದ್ಯಗಳ ಯಶಸ್ವಿಯಾಗಿಸಲು ದೇವಸ್ಥಾನದ ಸಮಿತಿಯವರು ಮನವಿ ಮಾಡಿದ್ದಾರೆ.