ಸಾರಾಂಶ
ಹೊನ್ನಾವರ: ಪಟ್ಟಣದ ಸಬ್ ರಜಿಸ್ಟರ್ ಕಚೇರಿ ಮತ್ತು ಪಪಂ ಪಂಚಾಯಿತಿಯ ಕೆಲವು ಮಳಿಗೆಗಳ ವಿದ್ಯುತ್ ಬಿಲ್ ಪಾವತಿ ಮಾಡದೆ ಇರುವುದಕ್ಕೆ ಶುಕ್ರವಾರ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ತಾಲೂಕಿನ ಸಾರ್ವಜನಿಕರಿಗೆ ಅತಿ ಮುಖ್ಯ ಇಲಾಖೆ ಆಗಿರುವ ಸಬ್ ರಜಿಸ್ಟರ್ ಕಚೇರಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದರಿಂದ ಜನರು ಪರದಾಡಿದರು. ಆಸ್ತಿ ನೋಂದಣಿ, ವಿವಾಹ ನೋಂದಣಿ ಹೀಗೆ ವಿವಿಧ ಕೆಲಸಗಳಿಗೆ ಬರುವ ನೂರಾರು ಜನರು ಕೆಲಸ ಆಗದೆ ಮರಳುವಂತಾಯಿತು.ವಿದ್ಯುತ್ ಬಿಲ್ ತುಂಬದ ಇಲಾಖೆಯ ನಿರ್ಲಕ್ಷ್ಯದಿಂದ ಜನರ ಕೆಲಸಕ್ಕೆ ಅಡ್ಡಿ ಉಂಟಾಗಿದೆ. ಈ ಸಮಸ್ಯೆ ಶೀಘ್ರದಲ್ಲಿ ಸರಿಹೋಗುವ ಸಾಧ್ಯತೆ ಕಡಿಮೆ ಎನ್ನುವುದು ಮನಗಂಡ ಸಾರ್ವಜನಿಕರು, ವಕೀಲರು ಸೇರಿ ವಿದ್ಯುತ್ ಸಂಪರ್ಕ ಮರುಜೋಡಣೆ ಆಗುವ ತನಕ ಬಾಡಿಗೆ ಜನರೇಟರ್ ಒದಗಿಸಿದ್ದಾರೆ.ಇನ್ನು ಪಟ್ಟಣ ಪಂಚಾಯಿತಿಗೆ ಸಂಬಂಧಪಟ್ಟ ಸುಲಭ ಶೌಚಾಲಯ ಇನ್ನಿತರ ಸೇರಿ 7ರಿಂದ 8 ಮಳಿಗೆಯ ವಿದ್ಯುತ್ ಬಿಲ್ ಪಾವತಿ ಮಾಡದೆ ಇರುವುದಕ್ಕೆ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಎಲ್ಲ ಇಲಾಖೆಯ ಅಂದಾಜು ₹18 ಲಕ್ಷ ವಿದ್ಯುತ್ ಬಿಲ್ ಬಾಕಿ ಉಳಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ದಾಂಡೇಲಿಯಲ್ಲಿ ಸುವರ್ಣ ರಥಯಾತ್ರೆಗೆ ಅದ್ಧೂರಿ ಸ್ವಾಗತ
ದಾಂಡೇಲಿ: ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ 50 ವರ್ಷವಾದ ಹಿನ್ನೆಲೆ ರಾಜ್ಯದ ಇತಿಹಾಸ, ಸಂಸ್ಕೃತಿ, ಸಾಹಿತ್ಯ ಮತ್ತು ಸಂಪ್ರದಾಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ಜ್ಯೋತಿ ರಥ ಯಾತ್ರೆಯು ದಾಂಡೇಲಿಗೆ ಶುಕ್ರವಾರ ಆಗಮಿಸಿತು.ನಗರಕ್ಕೆ ಆಗಮಿಸಿದ ಜ್ಯೋತಿ ರಥಯಾತ್ರೆಯನ್ನು ತಾಲೂಕು ಆಡಳಿತ, ನಗರಾಡಳಿತ ವತಿಯಿಂದ ನಗರದ ಪಟೇಲ್ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.ನಗರಭೆಯ ಅಧ್ಯಕ್ಷ ಅಷ್ಪಾಕ್ ಶೇಖ, ತಹಸೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ರಾಜಾರಾಮ ಪವಾರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ನಗರಸಭೆ ಉಪಾಧ್ಯಕ್ಷೆ ಶಿಲ್ಪಾ ಕೊಡೆ ಮೊದಲಾದ ಗಣ್ಯರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.ಇದಕ್ಕೂ ಮೊದಲು ರಥಕ್ಕೆ ಪೂಜೆಯನ್ನು ಸಲ್ಲಿಸಿ ಬರಮಾಡಿಕೊಳ್ಳಲಾಯಿತು. ನಂತರ ಪಟೇಲ್ ವೃತ್ತದಿಂದ ನಗರಸಭೆಯವರೆಗೆ ಡೊಳ್ಳು ಕುಣಿತ, ವಾದ್ಯವೃಂದದೊಂದಿಗೆ ರಥವನ್ನು ಶಾಲಾ- ಕಾಲೇಜು ಉಪಸ್ಥಿತಿಯಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ರಥವು ನಗರದ ಹಲವು ಶಾಲಾ- ಕಾಲೇಜುಗಳಿಗೆ ಭೇಟಿ ನೀಡಿ ದಾಂಡೇಲಿಯಲ್ಲಿ ವಾಸ್ತವ್ಯವನ್ನು ಹೂಡಿ ಶನಿವಾರ ಬೆಳಗ್ಗೆ ಹಳಿಯಾಳ ತಾಲೂಕಿಗೆ ಪ್ರಯಾಣವನ್ನು ಬೆಳೆಸಲಿದೆ.ಈ ಸಂದರ್ಭದಲ್ಲಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸುಧಾ ರಾಮಲಿಂಗ ಜಾಧವ, ನಗರಸಭೆಯ ಸದಸ್ಯರು, ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ಸಿಪಿಐ ಭೀಮಣ್ಣ ಸೂರಿ, ಪಿಎಸ್ಐ ಐಆರ್ ಗಡ್ಡೇಕರ, ಕನ್ನಡ ಸಾಹಿತ್ಯ ಪರಿಷತ್ತಿನ ದಾಂಡೇಲಿ ತಾಲೂಕು ಅಧ್ಯಕ್ಷ ನಾರಾಯಣ ಇತರರು ಇದ್ದರು.