ಸಾರಾಂಶ
ಸುವರ್ಣ ಪ್ರತಿಷ್ಠಾನ ಕರ್ನಿರೆ ವತಿಯಿಂದ 11ನೇ ವಾರ್ಷಿಕೋತ್ಸವ ಅಂಗವಾಗಿ ಯಕ್ಷಗಾನ ಕಲಾವಿದರು ಮತ್ತು ಕಲಾಧಕರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರುಸುವರ್ಣ ಪ್ರತಿಷ್ಠಾನ ಕರ್ನಿರೆ ವತಿಯಿಂದ 11ನೇ ವಾರ್ಷಿಕೋತ್ಸವದ ಅಂಗವಾಗಿ ಯಕ್ಷ ಕಲಾರಾಧನೆ ಮತ್ತು ಹಿರಿಯ ಕಲಾವಿದರ ಸನ್ಮಾನ ಕಾರ್ಯಕ್ರಮ ಜರಗಿತು.
ಕರ್ನಿರೆ ಜಾರಂದಾಯ ದೈವದ ಗಡುವಾಡು ಬಳಿ ಕೊಪ್ಪಳ ತೋಟದಲ್ಲಿ ದುಬೈ ನಿವಾಸಿ - ಹವ್ಯಾಸಿ ಯಕ್ಷಗಾನ ವೇಷಧಾರಿ ಪ್ರಭಾಕರ ಡಿ. ಸುವರ್ಣ ಮತ್ತು ಕುಟುಂಬಿಕರು ಈ ಕಾರ್ಯಕ್ರಮ ಏರ್ಪಡಿಸಿದ್ದರು.ಕಲಾಸಾಧಕರ ಸಮ್ಮಾನ: ಯಕ್ಷಗಾನ ಕ್ಷೇತ್ರದಲ್ಲಿ ತಾಳಮದ್ದಳೆ ಅರ್ಥಧಾರಿಗಳಾಗಿ, ವೇಷಧಾರಿಗಳಾಗಿ ಮತ್ತು ಸಂಘಟಕರಾಗಿರುವ ಎಂಟು ಮಂದಿ ಸಾಧಕ ಕಲಾವಿದರನ್ನು ಸನ್ಮಾನಿಸಲಾಯಿತು. ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ, ಸಂಘಟಕ ಉಜಿರೆ ಅಶೋಕ ಭಟ್, ವೇಷಧಾರಿಗಳಾದ ಸರಪಾಡಿ ಅಶೋಕ ಶೆಟ್ಟಿ, ಡಿ.ಮನೋಹರ ಕುಮಾರ್, ಶಶಿಕಾಂತ ಶೆಟ್ಟಿ ಕಾರ್ಕಳ ಹಾಗೂ ಯಕ್ಷಗಾನ ಮತ್ತು ನೃತ್ಯ ಕಲಾವಿದೆ ಸುಮಂಗಲಾ ರತ್ನಾಕರ್ ಅವರನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಸನ್ಮಾನಿಸಿದರು.ಪೋಷಕರಿಗೆ ಗೌರವ: ಪ್ರತಿಷ್ಠಾನದ ವತಿಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ ನಿಧಿಯನ್ನು ವಿತರಿಸಲಾಯಿತು. ಇದೇ ವೇಳೆ ಯಕ್ಷಗಾನ ಪೋಷಕ, ಮುಂಬೈ ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತು ಸಂಘಟಕ ಪದ್ಮನಾಭ ಕಟೀಲು ಅವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಸಂಘಟಕ ಗಿರೀಶ್ ಸುವರ್ಣ ದಂಪತಿಯನ್ನು ಗೌರವಿಸಲಾಯಿತು.ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ ಡಿ. ಸುವರ್ಣ ಸ್ವಾಗತಿಸಿದರು. ಗೌರವಾಧ್ಯಕ್ಷ ಭುಜಂಗ ಡಿ. ಸುವರ್ಣ ಮತ್ತು ಪ್ರತಿಷ್ಠಾನದ ಸದಸ್ಯರು ಇದ್ದರು. ಕಾರ್ಯಕ್ರಮದ ಸಂಯೋಜಕ ಜನಾರ್ದನ ಅಮ್ಮುಂಜೆ ನಿರೂಪಿಸಿ ವಂದಿಸಿದರು. ಬಳಿಕ ತೆಂಕುತಿಟ್ಟಿನ ವಿವಿಧ ಮೇಳಗಳ ಕಲಾವಿದರು ಮತ್ತು ಮಹಿಳಾ ಕಲಾವಿದೆಯರಿಂದ ‘ಶ್ರೀಮತಿ ಪರಿಣಯ -ಸಮಗ್ರ ಭೀಷ್ಮ’ ಯಕ್ಷಗಾನ ಬಯಲಾಟ ನಡೆಯಿತು.