ಸಾರಾಂಶ
ಕಳೆದ ವರ್ಷದ ಶಿಲ್ಕು 4.85 ಕೋಟಿ ರು. ಇದ್ದು, ಈ ಸಾಲಿನಲ್ಲಿ 15.15 ಕೋಟಿ ರು. ಆದಾಯದ ನಿರೀಕ್ಷೆ ಇದೆ. ವಿವಿಧ ಯೋಜನೆಗಾಗಿ 19 ಕೋಟಿ ರು. ವೆಚ್ಚ ಮಾಡಿ, ಸುಮಾರು 20 ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಲಾಯಿತು.
ಹೊಸನಗರ: ಪಟ್ಟಣ ಪಂಚಾಯಿತಿಯ ಎಲ್ಲಾ ಆದಾಯ ಮೂಲಗಳನ್ನು ಬಂದ್ ಮಾಡಿ, ಆಯ-ವ್ಯಯ ಮಂಡಿಸುವುದು ಕೇವಲ ಔಪಚಾರಿಕ ಪ್ರಹಸನ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಹಾಲಗದ್ದೆ ಉಮೇಶ ಟೀಕಿಸಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ತಹಸೀಲ್ದಾರ್ ರಶ್ಮಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಆಯ-ವ್ಯಯ ಸಭೆಯಲ್ಲಿ ಮಾತನಾಡಿ,ಪಟ್ಟಣ ಪಂಚಾಯಿತಿಗೆ ಆದಾಯ ಮೂಲವಾಗಿರುವ ಬಸ್ ನಿಲ್ದಾಣದ ಹೋಟೆಲ್, ಲಾಡ್ಜ್, ಮಳಿಗೆ ಕಳೆದ 1 ವರ್ಷದಿಂದ ಹರಾಜು ಆಗಿಲ್ಲ. ಬೊಕ್ಕಸಕ್ಕೆ ಲಕ್ಷಾಂತರ ರು. ನಷ್ಟ ಆಗಿದೆ. ಇದಕ್ಕೆ ಅಧಿಕಾರಿಗಳು ಕಾರಣ ಎಂದು ದೂರಿದರು. ಪಟ್ಟಣ ಪಂಚಾಯಿತಿಗೆ ಒಬ್ಬ ಕಾಯಂ ಮುಖ್ಯಾಧಿಕಾರಿಗಳ ನೇಮಕ ಆಗಿಲ್ಲ. ಇಲ್ಲಿರಿವ ನೌಕರರ ಹೇಳಿದ್ದೇ ಆಟ. ಸಾರ್ವಜನಿಕರ ಕೆಲಸ ಒಂದು ಆಗುತ್ತಿಲ್ಲ ಎಂದು ಆರೋಪಿಸಿದರು.
ಕಳೆದ ವರ್ಷದ ಶಿಲ್ಕು 4.85 ಕೋಟಿ ರು. ಇದ್ದು, ಈ ಸಾಲಿನಲ್ಲಿ 15.15 ಕೋಟಿ ರು. ಆದಾಯದ ನಿರೀಕ್ಷೆ ಇದೆ. ವಿವಿಧ ಯೋಜನೆಗಾಗಿ 19 ಕೋಟಿ ರು. ವೆಚ್ಚ ಮಾಡಿ, ಸುಮಾರು 20 ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಲಾಯಿತು.ಸಭೆಯಲ್ಲಿ ಸದಸ್ಯರಾದ ಗುಲಾಬಿ ಮರಿಯಪ್ಪ, ಕೃಷ್ಣವೇಣಿ, ಸುರೇಂದ್ರ ಕೊಟ್ಯಾನ್, ನಾಗಪ್ಪ ,ಶಾಯಿನ್ ಭಾನು, ಗಾಯತ್ರಿ, ಅಶ್ವಿನಿಕುಮಾರ್, ಸಿಂಥಿಯಾ ಶೆರಾವೋ, ಗುರುರಾಜ ಮತ್ತಿತರ ಸದಸ್ಯರಿ ಇದ್ದರು.