ಕನ್ನಡಪ್ರಭ ವಾರ್ತೆ, ಶಿಡ್ಲಘಟ್ಟ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂ ಪೋಷಣ್ ಯೋಜನೆಯಡಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ಸುಮಾರು 5,000 ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿದಿನ ಶುಚಿ-ರುಚಿಯಾದ ಪೌಷ್ಟಿಕ ಬಿಸಿಯೂಟವನ್ನು ಉಣಬಡಿಸಲು ಅಕ್ಷಯಪಾತ್ರೆ ಸಂಸ್ಥೆ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಹೇಳಿದರು.

ತಾಲೂಕಿನ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂಟಿ ಕ್ರಾಸ್ ಬಳಿ ಎಸ್ ಎಲ್ ವಿ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ದಿ. ಎನ್.ವಿ. ಕೃಷ್ಣಮೂರ್ತಿ ರಾವ್ ಮತ್ತು ದಿ. ಎನ್. ಆರ್. ಪದ್ಮಾವತಮ್ಮ ರವರ ನೆನಪಿನಲ್ಲಿ ಅಕ್ಷಯ ಪಾತ್ರೆಯ 81ನೇ ಅಡುಗೆ ಮನೆ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಹೆಮ್ಮೆಯ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ನೀಡಲಿದ್ದು, ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಕ್ಷೀರಭಾಗ್ಯ ಯೋಜನೆಗೂ ಪೂರಕವಾಗಿ ಕೆಲಸ ಮಾಡಲಿದೆ. ರಾಜ್ಯ, ಕೇಂದ್ರ ಸರ್ಕಾರ,ಕಾರ್ಪೊರೇಟ್ ಪಾಲುದಾರರು ಹಾಗೂ ದಾನಿಗಳ ಆರ್ಥಿಕ ನೆರವಿನೊಂದಿಗೆ ಯಶಸ್ವಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಅಕ್ಷಯಪಾತ್ರೆ ಕಾರ್ಯನಿರ್ವಹಿಸುತ್ತಿದೆ. ಬಿಸಿಯೂಟದ ಈ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಮಕ್ಕಳ ಶಾಲಾ ದಾಖಲಾತಿ ಹೆಚ್ಚಿರುವುದಲ್ಲದೆ, ಮಕ್ಕಳ ಶೈಕ್ಷಣಿಕ ಪ್ರದರ್ಶನ ಹಾಗೂ ಆರೋಗ್ಯ ಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ.

ಬೆಂಗಳೂರು ಪ್ರಾಂತೀಯ ಅಧ್ಯಕ್ಷ ಗುಣಕರ ರಾಮದಾಸ ಮಾತನಾಡಿ, 2000ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಅತ್ಯಂತ ಸಣ್ಣ ಮಟ್ಟದಲ್ಲಿ ಆರಂಭವಾದ ಅಕ್ಷಯಪಾತ್ರೆ, ಇಂದು ಜಾಗತಿಕ ಮಟ್ಟದಲ್ಲಿ ಬೃಹತ್ ಸಾಮಾಜಿಕ ಚಳವಳಿಯಾಗಿ ಬೆಳೆದು ನಿಂತಿದೆ. ಪ್ರಸ್ತುತ ದೇಶದ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಂಸ್ಥೆ ಸಕ್ರಿಯವಾಗಿದ್ದು, 25,000 ಕ್ಕೂ ಹೆಚ್ಚು ಶಾಲೆ ಹಾಗೂ ಅಂಗನವಾಡಿಗಳ ಒಟ್ಟು 23.5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿದಿನ ಪೌಷ್ಟಿಕಾಹಾರ ಒದಗಿಸುತ್ತಿದೆ ಎಂದರು.


ಈ ಸಂದರ್ಭದಲ್ಲಿ ಅಕ್ಷಯ ಪಾತ್ರೆ ಫೌಂಡೇಷನ್‌ ಸಹ ಸಂಸ್ಥಾಪಕ ಹಾಗೂ ಉಪಾಧ್ಯಕ್ಷ ಚಂಚಲಾಪತಿ ದಾಸ, ಸಿಇಒ ಡಾ. ನವೀನ್ ಭಟ್.ವೈ, ತಹಸೀಲ್ದಾರ್ ಗಗನ ಸಿಂಧು, ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ.ಆರ್, ಪೌರಾಯುಕ್ತೆ ಅಮೃತಗೌಡ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನ ಕುಮಾರ್, ಬಿಸಿಯೂಟ ಯೋಜನಾ ಅಧಿಕಾರಿ ಆಂಜನೇಯಲು, ನೌಕರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ಆನೂರು ಪಿಡಿಓ ಕಾತ್ಯಾಯಿನಿ, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.ಕೋಟ್‌....ಅಕ್ಷಯಪಾತ್ರೆ ಸಂಸ್ಥೆಯು ವಿಶ್ವದಲ್ಲೇ ಅತಿ ದೊಡ್ಡ ತಂತ್ರಜ್ಞಾನ ಆಧಾರಿತ ಮತ್ತು ಸ್ವಯಂಚಾಲಿತ ಅಡುಗೆ ಮನೆಗಳ ಜಾಲ ಹೊಂದಿದೆ. ಇಲ್ಲಿ ಅತ್ಯಂತ ಸುರಕ್ಷಿತ ಹಾಗೂ ಆರೋಗ್ಯಕರ ವಾತಾವರಣದಲ್ಲಿ, ಯಾವುದೇ ಮನುಷ್ಯನ ಸ್ಪರ್ಶವಿಲ್ಲದೆ ಅತ್ಯಾಧುನಿಕ ಯಂತ್ರಗಳ ಮೂಲಕ ಬೃಹತ್ ಪ್ರಮಾಣದಲ್ಲಿ ಅಡುಗೆ ಸಿದ್ಧಪಡಿಸಲಾಗುತ್ತದೆ. ಇದೀಗ ಸುಧಾರಿತ ಬೃಹತ್ ಯಂತ್ರೋಪಕರಣಗಳು ಅಳವಡಿಸಿರುವುದರಿಂದ, ಎಲ್ಲವೂ ಯಂತ್ರಗಳ ಮೂಲಕವೇ ನಡೆಯುವುದು. ಡಾ.ಎಂ.ಸಿ.ಸುಧಾಕರ್, ಮಾಜಿ ಸಚಿವರು.ಸುದ್ದಿ ಚಿತ್ರ ೧ಶಿಡ್ಲಘಟ್ಟದ ಬೆಳ್ಳೂಟಿ ಕ್ರಾಸ್ ಬಳಿ ಅಕ್ಷಯ ಪಾತ್ರೆಯ 81ನೇ ಅಡುಗೆಮನೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಗಣ್ಯರು