ಗರಿಗೆದರಿದ ಪ್ರವಾಸೋದ್ಯಮ ಚಟುವಟಿಕೆ । ೩೨ ರೆಸಾರ್ಟ್ಗಳಿಗೆ ಮರು ವಿದ್ಯುತ್ ಸಂಪರ್ಕ
ಕನ್ನಡಪ್ರಭ ವಾರ್ತೆ ಗೋಕರ್ಣನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಯ ದುಬ್ಬನಸಶಿ, ಮತ್ತಿತರ ಕಡೆಯ ಕಡಲತೀರದಲ್ಲಿ ಬಂದ್ ಆಗಿದ್ದ ಸರ್ಕಾರಿ ಜಾಗದಲ್ಲಿ ನಿರ್ಮಿಸಿದ ಹೊಟೇಲ್, ರೆಸಾರ್ಟ್ಗಳು ಪುನಃ ಕಾರ್ಯಚಟುವಟಿಕೆ ಆರಂಭಿಸಿವೆ.ಅಕ್ರಮವಾಗಿ ಕಟ್ಟಿದ ಕಟ್ಟಡ ತೆರವುಗೊಳಿಸಲು ಹೋರಾಟ ನಡೆದು, ಕಳೆದ ವಾರ ತೆರವು ಕಾರ್ಯಾಚರಣೆಗೆ ಸಹ ತಾಲೂಕಾ ಆಡಳಿತ ಸಿದ್ದತೆ ನಡೆಸಿತ್ತು, ಅಂತಿಮವಾಗಿ ತೆರವಿನ ಬದಲು ಬೀಗಮುದ್ರೆ ಹಾಕಿ ಸರ್ಕಾರದ ಆಸ್ತಿ ಪ್ರವಾಸಿಗರಿಗೆ, ಸ್ಥಳೀಯರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ನಾಮಫಲಕ ಅಳವಡಿಸಲಾಗಿತ್ತು.ಆದರೆ ಹೊಟೇಲ್, ರೆಸಾರ್ಟ್ ಮಾಲೀಕರು ನ್ಯಾಯಾಲಯದಲ್ಲಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಕಾಲಾವಕಾಶ ಕೋರಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರು ತಿಂಗಳ ಒಳಗೆ ಸ್ವಯಂಪೇರಿತವಾಗಿ ತೆರಗೊಳಿಸಲು ಅವಕಾಶ ನೀಡಿ ಆದೇಶಿಸಿತ್ತು. ಇದರ ಪರಿಣಾಮ ಮತ್ತೆ ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಿದೆ.ವಿದ್ಯುತ್ ಮರು ಸಂಪರ್ಕ:
ತೆರವು ಕಾರ್ಯಾಚರಣೆಗಾಗಿ ಈ ಹಿಂದೆ ತಾತ್ಕಾಲಿಕವಾಗಿ ರೆಸಾರ್ಟ್ನವರು ಪಡೆದುಕೊಂಡಿದ್ದ ವಿದ್ಯುತ್ ಸಂಪರ್ಕವನ್ನ ಕಡಿತಗೊಳಿಸಲಾಗಿತ್ತು, ನ್ಯಾಯಾಲಯದ ಆದೇಶದಂತೆ ಪ್ರಸ್ತುತ ೩೨ ರೆಸಾರ್ಟ್ಗಳಿಗೆ ಮರು ವಿದ್ಯುತ್ ಸಂಪರ್ಕ ನೀಡಲಾಗಿದೆ. ತೆರವು ಅಥವಾ ಉಳಿವೂ ಜನರ ಪ್ರಶ್ನೆ:ನ್ಯಾಯಾಲಯ ಸ್ವಇಚ್ಚೆಯಿಂದ ತೆರವು ಮಾಡಲು ಕಾಲಾವಕಾಶ ನೀಡಿದೆಯೇ ಅಥವಾ ಪ್ರವಾಸೋದ್ಯಮ ಚಟುವಟಿಕೆಗೆ ಅವಕಾಶ ನೀಡಿದೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಕಟ್ಟಡ ತೆರವಿಗಾಗಿ ೨೦೦ಕ್ಕೂ ಹೆಚ್ಚು ಪೊಲೀಸರು, ತಾಲೂಕಾ ಮಟ್ಟದ ಅಧಿಕಾರಿಗಳು ಒಂದು ದಿನ ಪೂರ್ತಿ ಇದ್ದು ಹಾಗೆ ತೆರಳಿದ್ದು, ಇದು ಸರ್ಕಾರಿ ಹಣದ ಪೋಲು ಅಲ್ಲವೇ ಎಂದು ಪ್ರಶ್ನಿಸಿರುವ ಸಾರ್ವಜನಿಕರು, ಸ್ವಯಂ ಪ್ರೇರಿತವಾಗಿ ತೆಗೆಯುವುದಾದರೆ ಈಗಲೇ ಪ್ರಾರಂಭಿಸಿದರೆ ಆರು ತಿಂಗಳಿಗೆ ಮುಗಿಯುತ್ತಿತ್ತಲ್ಲವೇ, ಆರು ತಿಂಗಳ ಉದ್ಯಮ ನಡೆಸಿ ಮತ್ತೆ ತೆರವಿಗೆ ಅವಕಾಶ ಸಿಗುತ್ತದೆಯೇ ಅಥವಾ ಮತ್ತಾವುದು ಕಾನೂನಿನ ನೆರವಿನಿಂದ ಚಟುವಟಿಕೆ ಮುಂದುವರಿಸುತ್ತಾರೆಯೇ ಎಂಬ ಮಾತು ಕೇಳಿಬರುತ್ತಿದೆ.ಅಧಿಕಾರಿಗಳು ಹೈರಾಣ:ಆರು ತಿಂಗಳ ಅವಧಿಯ ಮಳೆಗಾಲ ಮುಗಿದು ಮತ್ತೆ ಪ್ರವಾಸಿ ಹಂಗಾಮು ಆರಂಭ ಆಗುವ ದಿನಗಳಲ್ಲಿ ಈಗಿನಂತೆ ಒಕ್ಕಲೆಬ್ಬಿಸಿದರೆ ಪ್ರವಾಸೋದ್ಯಮ ಹೆಸರಲ್ಲಿ ಮತ್ತೆ ರೆಸಾರ್ಟ್ನವರು ಅಥವಾ ಸ್ಥಳೀಯರು ಮತ್ತೊಮ್ಮೆ ಕೋರ್ಟ್, ಕಚೇರಿ ಅಂತ ಹೋಗುವುದು ಸಹಜವಾಗಿದ್ದು, ಮತ್ತೊಂದು ಪ್ರಕ್ರಿಯೆ ಆರಂಭವಾಗಬಹುದು. ಈ ಮಧ್ಯೆ ಪೇಚಿಗೆ ಸಿಲುಕುವವರು ಮಾತ್ರ ಅಧಿಕಾರಿಗಳಾಗಿದ್ದು, ಅತ್ತ ಸರ್ಕಾರಿ ಆದೇಶ, ಇತ್ತ ಕೋರ್ಟ್ ತೆರವುಗೊಳಿಸಿ ಮತ್ತೆ ಯಥಾಸ್ಥಿತಿ ಮುಂದುವರೆಸುವ ಸೂಚನೆ ಎಲ್ಲವನ್ನು ಮೈಮೇಲೆ ಎಳೆದುಕೊಂಡು ನಿಭಾಯಿಸುತ್ತಾ ಹೈರಾಣಾಗುತ್ತಿದ್ದಾರೆ.