ಉಡುಪಿ: ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದಿಂದಾಗಿ ದೇಶದಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಾಯ ಉಂಟಾಗಿದೆ. ಇದರಿಂದ ಹೊಟೇಲ್ ಉದ್ಯಮ ನಡೆಸುವವರಿಗೆ ತೊಂದರೆಯಾಗಿದ್ದು, ಹೊಟೇಲ್ ಉದ್ಯಮ ಮುಂದುವರಿಸಲು ಪರ್ಯಾಯ ಉರುವಲುಗಳಾದ ಕಟ್ಟಿಗೆ ಹಾಗೂ ವಿದ್ಯುತನ್ನು ಬಳಕೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಸೂಚನೆ ನೀಡಿದ್ದಾರೆ.

ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ಸರಬರಾಜು ಸಮಸ್ಯೆ ಕುರಿತು ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗೃಹ ಬಳಕೆ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಿಲ್ಲ. ವಾಣಿಜ್ಯ ಬಳಕೆಯ ಅನಿಲ ಹೊರ ದೇಶಗಳಿಂದ ಪೂರ್ಣ ಪ್ರಮಾಣದಲ್ಲಿ ಆಮದು ಆಗಬೇಕಾಗಿದ್ದು, ಯುದ್ಧ ಭೀತಿಯಿಂದಾಗಿ ಆಮದು ಆಗದೆ ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದು ತಾತ್ಕಾಲಿಕ ಸಮಸ್ಯೆ ಆಗಿದೆ. ಆದರೂ ಇದಕ್ಕೆ ಪರ್ಯಾಯ ಉರುವಲುಗಳ ಬಳಕೆ ಮಾಡಿಕೊಳ್ಳಬೇಕು ಎಂದರು.ಜಿಲ್ಲೆಯಲ್ಲಿ 80 ಕ್ಕೂ ಹೆಚ್ಚು ಸಾಮಿಲ್‌ಗಳಿದ್ದು, ಅವುಗಳು ಹೊಟೇಲುಗಳಿಗೆ ಕಟ್ಟಿಗೆ ಪೂರೈಕೆಗೆ ಸಹಕರಿಸಬೇಕು, ಹೊಟೇಲ್ ಮಾಲಕರು ವಿದ್ಯುತ್ ಸ್ಟವ್‌ಗಳ ಬಳಕೆಗೆ ಮುಂದಾದಲ್ಲಿ ಅವರಿಗೆ ವಿದ್ಯುತ್ ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ರವೀಂದ್ರ, ಮೆಸ್ಕಾಂ ಅಧಿಕಾರಿಗಳು, ಸಾಮಿಲ್ ಮಾಲಕರು, ಹೊಟೇಲ್ ಮಾಲಕರು ಉಪಸ್ಥಿತರಿದ್ದರು.


ಮುಂದೆ ಕಾರ್ಮಿಕರ ಕೊರತೆಯಾಗಬಹುದು!: ಜಿಲ್ಲೆಯಲ್ಲಿರುವ 25000 - 30000 ಹೊಟೇಲ್ ಕಾರ್ಮಿಕರಲ್ಲಿ ಹೆಚ್ಚಿನವರು ಹೊರ ಜಿಲ್ಲೆ - ರಾಜ್ಯದವರು, ಹೊಟೇಲು ಮುಚ್ಚಿದರೆ ಅವರು ನಿರುದ್ಯೋಗಿಗಳಾಗಿ, ಬೇರೆ ಉದ್ಯೋಗ ಅರಸಿ ಹೋದರೆ ಮುಂಬರುವ ದಿನಗಳಲ್ಲಿ ಹೊಟೇಲುಗಳಲ್ಲಿ ಕಾರ್ಮಿಕರ ಸಮಸ್ಯೆ ಉಂಟಾಗುತ್ತದೆ. ಈಗಾಗಲೇ ಕೆಲವು ಹೊಟೇಲುಗಳಲ್ಲಿ ಕಟ್ಟಿಗೆ ಮತ್ತಿತರ ಉರುವಲುಗಳನ್ನು ಬಳಸುತ್ತಿದ್ದಾರೆ. ಇತರ ಹೊಟೇಲು ಮಾಲಕರು ಪರ್ಯಾಯ ವ್ಯವಸ್ಥೆಗೆ ಒತ್ತು ನೀಡಿ, ಹೊಟೇಲ್ ಉದ್ಯಮವನ್ನು ಮುಂದುವರಿಸಿ, ಕಾರ್ಮಿಕರ ಉದ್ಯೋಗವಕಾಶವನ್ನು ಉಳಿಸಿಕೊಳ್ಳಬೇಕು ಎಂದು ಡಿಸಿ ಸಲಹೆ ಮಾಡಿದರು.