ಪಾಂಡವಪುರ ತಾಲೂಕಿನಲ್ಲಿ ಈಗಾಗಲೇ ಹಲವಾರು ಮನೆಗಳನ್ನು ನಿರ್ಮಿಸಿಕೊಡಲಾಗಿದ್ದು, ಈ ವರ್ಷದಲ್ಲಿ ನಾಲ್ಕು ಮನೆಗಳನ್ನು ನಿರ್ಮಿಸಲಾಗಿದೆ. ಅದಲ್ಲದೇ, ಸಂಸ್ಥೆಯಿಂದ ಕೆರೆಗಳ ಜೀರ್ಣೋದ್ಧಾರ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು, ಡೇರಿ ಕಟ್ಟಡಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲುಕೋಟೆ ಶಾಖೆಯಿಂದ ವಾತ್ಸಲ್ಯ ಯೋಜನೆಯಡಿ ರಾಜಮ್ಮ, ಶಿವಲಿಂಗಚಾರಿ ಎಂಬ ನಿರ್ಗತಿಕ ದಂಪತಿಗೆ ನಿರ್ಮಿಸಿಕೊಟ್ಟಿರುವ ಮನೆಯನ್ನು ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕಿ ಮಮತರಾವ್ ಉದ್ಘಾಟಿಸಿದರು.ನಂತರ ಮಾತನಾಡಿದ ಮಮತ ರಾವ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವು ಸಮಾಜಮುಖಿ ಸೇವಾ ಕೆಲಸಗಳನ್ನು ಮಾಡುವ ಮೂಲಕ ಬಲಿಷ್ಠ ಗ್ರಾಮ ಕಟ್ಟುವ ಕೆಲಸ ಮಾಡಿಕೊಡುತ್ತಿದೆ. ಅದರಲ್ಲೊಂದು ವಾತ್ಸಲ್ಯ ಯೋಜನೆಯಡಿ ನಿರ್ಗತಿಕ ಬಡವರಿಗೆ ಸಂಸ್ಥೆಯಿಂದ ಹೊಸ ಮನೆ ನಿರ್ಮಾಣ ಮಾಡಿ ಅವರ ಬದುಕು ನಿರ್ವಹಣೆಗೆ ನೆರವಾಗುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ತಾಲೂಕಿನಲ್ಲಿ ಈಗಾಗಲೇ ಹಲವಾರು ಮನೆಗಳನ್ನು ನಿರ್ಮಿಸಿಕೊಡಲಾಗಿದ್ದು, ಈ ವರ್ಷದಲ್ಲಿ ನಾಲ್ಕು ಮನೆಗಳನ್ನು ನಿರ್ಮಿಸಲಾಗಿದೆ. ಅದಲ್ಲದೇ, ಸಂಸ್ಥೆಯಿಂದ ಕೆರೆಗಳ ಜೀರ್ಣೋದ್ಧಾರ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು, ಡೇರಿ ಕಟ್ಟಡಗಳಿಗೆ ಆರ್ಥಿಕ ನೆರವು, ಬಡವರಿಗೆ ಮಾಸಾಶನ, ಸದಸ್ಯರ ಮಕ್ಕಳಿಗೆ ಸ್ಕಾಲರ್ ಶಿಪ್, ಮಧ್ಯವರ್ಜನ ಶಿಬಿರಗಳು ಸೇರಿದಂತೆ ಹಲವು ಯೋಜನೆ ಜಾರಿಗೊಳಿಸಲಾಗಿದೆ ಎಂದರು.ಜಿಲ್ಲಾ ಜನಜಾಗೃತಿ ಸಮಿತಿ ಉಪಾಧ್ಯಕ್ಷ ಅಶ್ವಥ್ ಕುಮಾರೇಗೌಡ ಮಾತನಾಡಿ, ವಾತ್ಸಲ್ಯ ಯೋಜನೆಯಡಿ ಮನೆ ಇಲ್ಲದ ನಿರ್ಗತಿಕರನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸಿಕೊಡುವುದು ಅಷ್ಟೊಂದು ಸುಲಭ ಮಾತಲ್ಲ. ಈ ಕೆಲಸವನ್ನು ಶ್ರೀಕ್ಷೇತ್ರ ಮಾಡುತ್ತಿದೆ. ವಾತ್ಸಲ್ಯ ಯೋಜನೆಯು ಹೇಮಾವತಿ ಹೆಗ್ಗಡೆ ಅವರ ಪ್ರೀತಿಪೂರ್ವಕ ಕಾರ್ಯಕ್ರಮ. ಒಂದೂವರೆ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡುತ್ತಿದ್ದಾರೆ. ಸರ್ಕಾರವು ಸಹ ಇಷ್ಟು ಕಡಿಮೆ ವೆಚ್ಚದಲ್ಲಿ ಇಷ್ಟು ಸುಂದರ ಮನೆ ನಿರ್ಮಿಸಿಕೊಟ್ಟಿಲ್ಲ ಎಂದರು.
ಈ ವೇಳೆ ಯೋಜನಾಧಿಕಾರಿ ಸರೋಜ, ವಾತ್ಸಲ್ಯ ಕಾರ್ಯಕ್ರಮದ ವ್ಯವಸ್ಥಾಪಕಿ ಮೂಖಾಂಭಿಕ ಸೇರಿದಂತೆ ಯೋಜನೆ ಮೇಲ್ವಿಚಾರಕರು, ಸಿಬ್ಬಂದಿ ಹಾಜರಿದ್ದರು.