ಸಾರಾಂಶ
ರಾಮನಗರ: ಮನೆಗಳ್ಳತನ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಬಿಡದಿ ಠಾಣೆ ಪೊಲೀಸರು 37 ಲಕ್ಷ ರು. ಮೌಲ್ಯದ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹೊಸೂರು ತೆಂಡ್ರಲ್ ನಗರದ ಶ್ರೀನಿವಾಸನ್ ಅಲಿಯಾಸ್ ಸೀನ, ಸಾನಸಂದ್ರಂನ ಕಾರ್ತಿಕ್ , ತಮಿ ಶೆಟ್ಟಿ ಉಪೇಂದ್ರ ಬಂಧಿತ ಆರೋಪಿಗಳು. ಗೋವಿಂದ ಎಂಬುವನು ತಲೆ ಮರೆಸಿಕೊಂಡಿದ್ದಾನೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗ್ಗಡಗೆರೆ ಗ್ರಾಮದ ತೋಟದ ಮನೆಯವರು ತಮಿಳುನಾಡಿಗೆ ಪ್ರವಾಸಕ್ಕೆ ತೆರಳಿದ್ದರು. ಆ ಸಮಯದಲ್ಲಿ ಕಳ್ಳರು ಮನೆಯ ಹಿಂಬಾಗಿಲನ್ನು ಮೀಟಿ ಮನೆಯಲ್ಲಿರುವ ಬೆಳ್ಳಿಯ ವಸ್ತುಗಳನ್ನು ಹಾಗೂ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ 37 ಲಕ್ಷ ಮೌಲ್ಯದ 11 ಕೆಜಿ ತೂಕದ ಬೆಳ್ಳಿ ವಸ್ತುಗಳು, 277 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ ಕಾರನ್ನು ವಶ ಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಭಾಗಿಯಾಗಿದ್ದ ಆರು ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.