ಸಾರಾಂಶ
ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಮನೆಯಲ್ಲಿಟ್ಟಿದ್ದ ತೊಗರಿ, ಕೃಷಿ ಉಪಕರಣಗಳು, ಗೃಹಪಯೋಗಿ ಸಾಮಾನುಗಳು ಬೆಂಕಿಯಲ್ಲಿ ಸುಟ್ಟು ಹೋಗಿರುವ ಘಟನೆ ಹೂಡದಳ್ಳಿ ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಹೂಡದಳ್ಳಿ ಗ್ರಾಮದಲ್ಲಿ ತಾಲೂಕ ಕೋಲಿ ಸಮಾಜ ಅಧ್ಯಕ್ಷರು ಬಿಜೆಪಿ ಮುಖಂಡ ಅನೀಲಕುಮಾರ ಜಮಾದಾರ ಇವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಮನೆಯಲ್ಲಿಟ್ಟಿದ್ದ ತೊಗರಿ, ಕೃಷಿ ಉಪಕರಣಗಳು, ಗೃಹಪಯೋಗಿ ಸಾಮಾನುಗಳು ಬೆಂಕಿಯಲ್ಲಿ ಸುಟ್ಟು ಹೋಗಿರುವ ಘಟನೆ ನಡೆದಿದೆ.ಅನೀಲಕುಮಾರ ಜಮಾದಾರ ಇವರ ಮನೆಯಲ್ಲಿ ಸಣ್ಣದಾದ ಬೆಂಕಿ ಕಾಣಿಸಿಕೊಂಡು ನಂತರ ಬೆಂಕಿ ಕೆನ್ನಾಲಿಗೆ ಕಾಣಿಸಿಕೊಂಡ ನಂತರ ಚಿಂಚೋಳಿ ಅಗ್ನಿಶಾಮಕ ದಳಕ್ಕೆ ಸುದ್ದಿ ತಿಳಿದ ನಂತರ ಗ್ರಾಮಕ್ಕೆ ಬಂದು ಬೆಂಕಿ ಆರಿಸುವಷ್ಟರಲ್ಲಿ ಗ್ರಾಮಸ್ಥರು ಬೆಂಕಿಯನ್ನು ನೀರು ಹಾಕಿ ಹತೋಟಿಗೆ ತಂದಿದ್ದರಿಂದ ಮನೆಯಲ್ಲಿ ಮಾರಾಟಕ್ಕಾಗಿ ಸಂಗ್ರಹಣೆ ಮಾಡಿದ್ದ ೧೨೦ ತೊಗರಿ ಚೀಲದಲ್ಲಿ ಕೇವಲ ೨೦ ಚೀಲಗಳು ಸುಟ್ಟು ಹೋಗಿವೆ. ಅಲ್ಲದೇ ಹಾಲು ಮಾಪನ ಮಶೀನ್, ಕೃಷಿ ಸಲಕರಣೆಗಳು ಮತ್ತು ಮನೆಯಲ್ಲಿದ್ದ ಬೆಲೆಬಾಳುವ ಗೃಹಪಯೋಗಿ ಸಾಮಾನುಗಳು ಸುಟ್ಟು ಹೋಗಿದ್ದು ಒಟ್ಟು ೬ ಲಕ್ಷ ರು.ಗಳಷ್ಟು ಹಾನಿಯಾಗಿದೆ ಎಂದು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಾಲೂಕ ಕೋಲಿ ಸಮಾಜ ಅಧ್ಯಕ್ಸ ಅನೀಲಕುಮಾರ ತಿಳಿಸಿದ್ದಾರೆ.
ಶಾಸಕ ಅವಿನಾಶ ಜಾಧವ್ ಭೇಟಿ: ಅನೀಲಕುಮಾರ ಜಮಾದಾರ ಮನೆ ಬೆಂಕಿಯಿಂದ ಸುಟ್ಟ ಘಟನೆ ಬಗ್ಗೆ ತಿಳಿದ ಕೂಡಲೇ ಶಾಸಕ ಅವಿನಾಶ ಜಾಧವ್ ಗ್ರಾಮಕ್ಕೆ ಭೇಟಿ ನೀಡಿದರು. ಘಟನೆಯಿಂದ ಆಗಿರುವ ಹಾನಿಯ ವಿವರ ಪಡೆದು ಸರಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಬಿಜೆಪಿ ಮುಖಂಡರಾದ ಅಲ್ಲಮಪ್ರಭು ಹುಲಿ, ಮಲ್ಲು ಕೊಡಂಬಲ್, ನಾರಾಯಣ ನಾಟೀಕಾರ ಇನ್ನಿತರಿದ್ದರು.