ಸಾರಾಂಶ
ನಗರದ ವಾರ್ಡ್ ಸಂಖ್ಯೆ 11ರ ಗಣೇಶ ನಗರದಲ್ಲಿ ಆಟೋ ಚಾಲಕ ಮಹ್ಮದ್ ಜಲಾಲ್ ಮನೆಯಲ್ಲಿ ಭಾನುವಾರ ರಾತ್ರಿ 8 ಗಂಟೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿ ಮನೆಯಲ್ಲಿದ್ದ ಬೆಲೆಬಾಳುವ ಅಪಾರ ವಸ್ತುಗಳು ಸುಟ್ಟುಹೋಗಿವೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ವಾರ್ಡ್ ಸಂಖ್ಯೆ 11ರ ಗಣೇಶ ನಗರದಲ್ಲಿ ಆಟೋ ಚಾಲಕ ಮಹ್ಮದ್ ಜಲಾಲ್ ಮನೆಯಲ್ಲಿ ಭಾನುವಾರ ರಾತ್ರಿ 8 ಗಂಟೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿ ಮನೆಯಲ್ಲಿದ್ದ ಬೆಲೆಬಾಳುವ ಅಪಾರ ವಸ್ತುಗಳು ಸುಟ್ಟುಹೋಗಿವೆ.ಸುದ್ದಿ ತಿಳಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಭೇಟಿ ನೀಡಿ ಸಾಂತ್ವನ ಹೇಳಿದರು. ಕುಟುಂಬಸ್ಥರು ಬೆಂಕಿಗೆ ಮನೆಯಲ್ಲಿದ್ದ ಆಟೋಮೊಬೈಲ್ ಬೆಲೆಬಾಳುವ ವಸ್ತುಗಳು, ಆಹಾರ ಪದಾರ್ಥಗಳು ಹಾಗೂ ಬಟ್ಟೆ, ಇತರ ಸಾಮಾನು ಸುಟ್ಟಿವೆ ಎಂದು ನೋವು ತೋಡಿಕೊಂಡರು. ಶಾಸಕರು ವೈಯಕ್ತಿಕವಾಗಿ ಆರ್ಥಿಕ ಸಹಾಯ ನೀಡಿದರು.
ಶಾಸಕರ ದೂರವಾಣಿ ಕರೆ ಮೇರೆಗೆ ಸ್ಥಳಕ್ಕೆ ಆಗಮಿಸಿ ಘಟನೆಗೆ ಕಾರಣ ಪ್ರಾಥಮಿಕ ತನಿಖೆ ಮಾಡಿದರು. ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಮನೆಗಳಿಗೆ ವಿದ್ಯುತ್ ಸೌಕರ್ಯ ಪಡೆಯಲು ವಿದ್ಯುತ್ ಕಂಬ ದೂರವಿದೆ. ಇನ್ನೊಂದು ಕಂಬ ಮಧ್ಯದಲ್ಲಿ ಹಾಕಿದರೆ ಅನುಕೂಲವಾಗುತ್ತದೆ ಎಂದರು. ಕೂಡಲೇ ವಿದ್ಯುತ್ ಕಂಬ ಹಾಕುವಂತೆ ಹಾಗೂ ಕುಟುಂಬಕ್ಕೆ ಇಲಾಖೆಯಿಂದ ಪರಿಹಾರ ನೀಡಲು ಪ್ರಯತ್ನಿಸುವಂತೆ ಶಾಸಕರು ಸೂಚಿಸಿದರು.ಈ ವೇಳೆ ಪೊಲೀಸ್ ಅಧಿಕಾರಿಗಳು, ನಗರಸಭೆ ಸದಸ್ಯ ಚನ್ನಕೇಶವಗೌಡ ಬಾಣತಿಹಾಳ, ಶಹಾಪುರ ಎಪಿಎಂಸಿ ಅಧ್ಯಕ್ಷ ಅಯ್ಯಣ್ಣ ಹಾಲಗೇರಾ ಸೇರಿದಂತೆ ಇತರರಿದ್ದರು.