ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಗರ್ಭಕೊರಳ ಕ್ಯಾನ್ಸರ್ ತಡೆಗಟ್ಟುವ ಸಾರ್ವಜನಿಕ ಆರೋಗ್ಯದ ಪಯಣದಲ್ಲಿ ಎಚ್‌ಪಿವಿ ಲಸಿಕಾ ಅಭಿಯಾನ ಮಹತ್ವದ ಮೈಲಿಗಲ್ಲಾಗಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಅವರು ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ ಎಚ್‌ಪಿವಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸುಯೋಜಿತ ಮತ್ತು ವ್ಯವಸ್ಥಿತ ಅಭಿಯಾನಗಳ ಮೂಲಕ ಗಂಭೀರ ಕಾಯಿಲೆಗಳ ಹೊರೆಯನ್ನು ತೊಡೆದು ಹಾಕಿದ ಸುದೀರ್ಘ ಇತಿಹಾಸ ಭಾರತಕ್ಕಿದೆ ಎಂದರು.೧೯೫೦ರ ದಶಕದ ಕಾಯಿಲೆಗಳಿಂದ ಹಿಡಿದು ಇತ್ತೀಚಿನ ಕೋವಿಡ್ ಲಸಿಕಾ ಅಭಿಯಾನಗಳವರೆಗೆ ಇವೆಲ್ಲವನ್ನೂ ಯಶಸ್ಸಿನ ಗುರಿಯೊಂದಿಗೆ ರೂಪಿಸಲಾಗಿತ್ತು. ಅದೇ ಶಿಸ್ತು ಮತ್ತು ಸಾರ್ವಜನಿಕ ನಂಬಿಕೆ ಈಗ ಎಚ್‌ಪಿವಿ ಲಸಿಕಾ ಕಾರ್ಯಕ್ರಮದ ಯಶಸ್ಸನ್ನು ನಿರ್ಧರಿಸಲಿದೆ. ಗರ್ಭಕಂಠದ ಕ್ಯಾನ್ಸರ್‌ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು ಮತ್ತು ರಾಜ್ಯ ಸರ್ಕಾರ ಕೈ ಜೋಡಿಸಿ ಕಾರ್ಯಕ್ರಮವನ್ನು ಅಭಿಯಾನದ ಮಾದರಿ ಯಲ್ಲಿ ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದರು.ತಾಲೂಕಿನಾದ್ಯಂತ ೧೪ ವರ್ಷ ತುಂಬಿದ ೧೫ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್‌ ಬಾರದಂತೆ ತಡೆಗಟ್ಟಲು ಲಸಿಕಾ ಅಭಿಯಾನ ಪ್ರಾರಂಭಿಸಲಾಗಿದ್ದು, ಈ ಸಂಬಂಧವಾಗಿ ಅರ್ಹ ಹೆಣ್ಣು ಮಕ್ಕಳ ತಂದೆ ತಾಯಿಯವರಿಗೆ ಸದರಿ ಲಸಿಕೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ರೂಪಿಸಿಕೊಂಡು ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಗಳಿಗೆ ಮಕ್ಕಳನ್ನು ಕರೆಯಿಸಿ ಸುರಕ್ಷಿತವಾಗಿ ಲಸಿಕೆ ನೀಡಬೇಕು. ತಾಲೂಕಿನ ಎಲ್ಲಾ ಹೆಣ್ಣು ಮಕ್ಕಳು ಸರ್ಕಾ ರದಿಂದ ಉಚಿತವಾಗಿ ನೀಡುವ ಎಚ್‌ಪಿವಿ ಲಸಿಕೆ ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೂಲಕ ಗರ್ಭಕಂಠದ ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಿಸಬೇಕೆಂದು ಕರೆ ನೀಡಿದರು.ವದಂತಿಗೆ ಕಿವಿಗೊಡದಿರಿ ಖಾಸಗಿ ಮಾರುಕಟ್ಟೆಯಲ್ಲಿ ೫ ಸಾವಿರ ರು.ಗೆ ಮಾರಾಟವಾಗುವ ಈ ಲಸಿಕೆಯನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ. ಅರ್ಹ ಹೆಣ್ಣುಮಕ್ಕಳು ಲಸಿಕೆ ಹಾಕಿಸಿಕೊಂಡು ಕ್ಯಾನ್ಸರ್‌ ಬಾರದಂತೆ ರಕ್ಷಣೆ ಪಡೆಯಬಹುದು. ಎಚ್‌ಪಿವಿ ಲಸಿಕೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪ ಪ್ರಚಾರ ನಡೆಸಲಾಗುತ್ತಿದೆ. ವದಂತಿಯನ್ನು ನಂಬಿ ಲಸಿಕೆ ಹಾಕಿಸಿಕೊಳ್ಳದೇ ಇರಬಾರದೆಂದು ಮನವಿ ಮಾಡಿದರು.ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಯು. ಆರ್‌. ಯುವರಾಜ್ ಮಾತನಾಡಿ, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ತಾಲೂಕಿನಲ್ಲಿ ಎಚ್‌ಪಿವಿ ಲಸಿಕಾಕರಣ ಕೈಗೊಳ್ಳಲಾಗಿದೆ. ದಿನ ನಿತ್ಯದ ರೋಗ ನಿರೋಧಕ ಶಕ್ತಿ ವೃದ್ಧಿ, ಎಂಆರ್‌ ನಿರ್ಮೂಲನೆ ಹಾಗೂ ಗರ್ಭಕಂಠದ ಕ್ಯಾನ್ಸರ್‌ ತಡೆಗಟ್ಟುವ ಮೂಲಕ ಹೆಣ್ಣುಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ಸುರಕ್ಷಿತ ಲಸಿಕೆ ಅಭಿಯಾನ ಕೈ ಗೊಳ್ಳಲಾಗಿದೆ. ಎಚ್‌ಪಿವಿ ಲಸಿಕೆಯು ಹೆಣ್ಣು ಮಕ್ಕಳಲ್ಲಿ ಗರ್ಭಕಂಠದ ಕ್ಯಾನ್ಸರ್‌ ಅನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ ಎಂದರು.ಪ್ರತಿ ೧೪ ವರ್ಷದ ಹೆಣ್ಣುಮಕ್ಕಳಿಗೆ ಎಚ್‌ಪಿವಿ ಲಸಿಕೆಯನ್ನು ಉಚಿತವಾಗಿ ಹಾಕಲಾಗುತ್ತದೆ. ತಾಲೂಕಿನಲ್ಲಿ ಸಮೀಕ್ಷಾ ವರದಿಯಂತೆ ೧೫ ವರ್ಷದೊಳಗಿನ ೧೮೩೦ ಹೆಣ್ಣುಮಕ್ಕಳಿದ್ದಾರೆ. ಇವರಿಗೆ ಲಸಿಕೆ ಹಾಕುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಇದಕ್ಕೆ ಈಗಾಗಲೇ ತಾಲೂಕಿಗೆ ೭೫೦ ಡೋಸ್ ಲಸಿಕೆ ಬಂದಿದ್ದು ಸುರಕ್ಷತಾ ಕ್ರಮಗಳೊಂದಿಗೆ ಲಸಿಕಾ ಕೇಂದ್ರಕ್ಕೆ ಪೂರೈಸಲಾಗಿದೆ. ಎರಡನೇ ಹಂತದಲ್ಲಿ ಉಳಿದ ಪ್ರಮಾಣದ ಲಸಿಕೆಗಳು ತರಿಸಿಕೊಳ್ಳಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೨ರವರೆಗೆ ಸರ್ಕಾರಿ ಸಾರ್ವ ಜನಿಕ ಆಸ್ಪತ್ರೆ, ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಲಸಿಕ ಕೇಂದ್ರಗಳಲ್ಲಿ ಉಚಿತ ವಾಗಿ ಎಡಗೈ ತೋಳಿನ ಸ್ನಾಯುಗೆ ಲಸಿಕೆಯನ್ನು ಹಾಕಲಾಗುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಟಿಎಪಿಸಿಎಂಎಸ್ ಅಧ್ಯಕ್ಷ ವೆಂಕಟೇಶಮೂರ್ತಿ, ಮಾಜಿ ಅಧ್ಯಕ್ಷ ಕುಂಬಾರಹಳ್ಳಿ ರಮೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ನಸಿಂಗ್ ಅಧೀಕ್ಷಕಿ ಆರ್.ಪದ್ಮಮ್ಮ, ಅನುರಾಧ ಇತರರಿದ್ದರು.