ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಕಾಮಸಮುದ್ರ ಸಮೀಪದ ಹೆದ್ದಾರಿಯಲ್ಲಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಚಿರಂತ್‌ಗೌಡ(೧೪) ಎಂಬ ೮ನೇ ತರಗತಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕಾಮಸಮುದ್ರದ ರಾಧಕೃಷ್ಣ ಎಂಬುವರ ಪುತ್ರ ಚಿರಂತ್‌ ಗೌಡ ಹಳೇಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಶಾಲೆ ಮುಗಿಸಿಕೊಂಡು ಹಳೇಕೋಟೆಯಿಂದ ಸರ್ಕಾರಿ ಬಸ್ಸಿನಲ್ಲಿ ಕಾಮಸಮುದ್ರಕ್ಕೆ ಆಗಮಿಸಿದ್ದಾನೆ. ಬಸ್ಸಿನಿಂದ ಇಳಿದು ಮನೆಗೆ ತೆರಳಲು ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಚಿರಂತ್‌ಗೌಡ ಸ್ಥಳದಲೇ ಮೃತಪಟ್ಟಿದ್ದಾನೆ. ನಗರ ಠಾಣೆ ಪೊಲೀಸರು ಕಾರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.