ಬೇಲೂರು: ಯುದ್ಧದ ಪರಿಣಾಮ ಗ್ಯಾಸ್ ಸಿಲಿಂಡರ್‌ಗಳ ಲಭ್ಯತೆಯಲ್ಲಿ ಕೆಲ ದಿನಗಳಿಂದ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಅರೆಹಳ್ಳಿ ಗ್ಯಾಸ್ ಏಜೆನ್ಸಿ ಮುಂದೆ ಮುಂಜಾನೆಯಿಂದಲೇ ಗ್ರಾಹಕರು ಸರದಿ ಸಾಲಿಗಾಗಿ ಸಿಲಿಂಡರ್ ಇಟ್ಟುಕೊಂಡು ಕಾಯುತ್ತಿದ್ದಾರೆ.ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಗ್ಯಾಸ್ ಪಡೆಯಲು ಕಚೇರಿ ಮುಂದೆ ಜಮಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಹಿಂದೆ ಬುಕ್ಕಿಂಗ್ ಮಾಡಿದ ತಕ್ಷಣ ಸಿಲಿಂಡರ್ ದೊರೆಯುತ್ತಿದ್ದ ಪರಿಸ್ಥಿತಿ ಇತ್ತೀಚೆಗೆ ಬದಲಾಗಿದೆ. ಹೊರದೇಶದಲ್ಲಿ ನಡೆಯುತ್ತಿರುವ ಯುದ್ಧದಿಂದ ತೈಲ ಉತ್ಪನ್ನಗಳ ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾದ ಪರಿಣಾಮ ಜನರು ಆತಂಕಕ್ಕೀಡಾಗಿದ್ದಾರೆ, ಹೀಗಾಗಿ ಅಗತ್ಯಕ್ಕಿಂತ ಸಿಲಿಂಡರ್‌ಗಳನ್ನು ಶೇಖರಣೆ ಮಾಡುವ ಪ್ರವೃತ್ತಿಯು ಅನೇಕರಲ್ಲಿ ಕಾಣಿಸಿಕೊಳ್ಳುತ್ತಿದೆ ಅಲ್ಲದೆ ಮುಂದೆ ಸಿಗದೇ ಹೋದರೆ ಏನೆಂಬ ಭಯದಿಂದ ಗ್ರಾಹಕರು ಮುಂಜಾನೆಯೇ ಗ್ಯಾಸ್ ಕಚೇರಿಗಳ ಬಳಿ ಕ್ಯೂ ನಿಂತು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಹತ್ತಾರು ಕಿಲೋಮೀಟರ್‌ ದೂರದ ಹಳ್ಳಿಗಳಿಂದಲೂ ಜನರು ಮುಂಜಾನೆ ಬಂದು ಸಾಲಿನಲ್ಲಿ ನಿಲ್ಲುತ್ತಿರುವುದರಿಂದ ಗದ್ದಲ ಹಾಗೂ ನೂಕು ನುಗ್ಗಲು ಸಹ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಈಗ ಪರಿಸ್ಥಿತಿ ಹಂತವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.

ಹೊರದೇಶದಲ್ಲಿ ಯುದ್ಧ ಆರಂಭವಾದ ಬಳಿಕ ಗ್ಯಾಸ್ ಬುಕಿಂಗ್ ಮಾಡಲು ಹಾಗೂ ಸಿಲಿಂಡರ್‌ ವಿತರಣೆ ಮಾಡಲು ಒಂದಿಷ್ಟು ದಿನ ವ್ಯತ್ಯಯವಾಗಿತ್ತು, ಆದರೆ ಇದೀಗ ಯಥಾಸ್ಥಿತಿ ತಲುಪುತ್ತಿದೆ!. ಆದರೆ ಗ್ರಾಹಕರು ಗೊಂದಲಕ್ಕೆ ಒಳಗಾಗಿ ಒಮ್ಮೆಲೇ ಗ್ಯಾಸ್ ಸಿಲಿಂಡರ್ ಪಡೆಯಲು ಬೆಳ್ಳಂಬೆಳಿಗ್ಗೆ ಗ್ಯಾಸ್ ಕಚೇರಿ ಮುಂದೆ ಜಮಾಯಿಸುತ್ತಿದ್ದಾರೆ ಆದರಿಂದ ಗದ್ದಲ ಹಾಗೂ ನೂಕುನುಗ್ಗಲು ಹೆಚ್ಚಾಗುತ್ತದೆ. ಅಲ್ಲದೆ ನಮ್ಮ ವಿತರಣ ವಾಹನ ಸುತ್ತಮುತ್ತಲ ಹಳ್ಳಿಗಳಿಗೆ ಎಂದಿನಂತೆ ತೆರಳಿ ಸಿಲಿಂಡರ್ ವಿತರಣೆ ಮಾಡಲಾಡಲಾಗುತ್ತಿದ್ದರು ಸಹ ಹತ್ತಾರು ಕಿಲೋಮೀಟರ್ ದೂರದ ಹಳ್ಳಿಗಳಿಂದ ಬೆಳಗಿನ ಜಾವದಿಂದ ಕಚೇರಿ ಮುಂದೆ ಗಂಟೆಗಟ್ಟಲೆ ಕ್ಯೂ ನಿಲ್ಲುತ್ತಿದ್ದಾರೆ, ಮುಂದಿನ ವಾರದೊಳಗೆ ಯಥಾಸ್ಥಿತಿ ತಲುಪುತ್ತದೆ ಆದ್ದರಿಂದ ಯಾರು ಸಹ ಆತಂಕಕ್ಕೀಡಾಗದೇ ಸಹಕರಿಸುವಂತೆ ಅರೇಹಳ್ಳಿಯ ವಾಲ್ಮಿಕಾ ಎಚ್‌ಪಿ ಗ್ಯಾಸ್ ಏಜೆನ್ಸಿ ರಾಜು ಅವರು ಮನವಿ ಮಾಡಿದ್ದಾರೆ.