- ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಎಚ್.ಪಿ. ವಿ.ಲಸಿಕಾ ಅಭಿಯಾನಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಎಚ್ ಪಿ ವಿ ಲಸಿಕೆ ಗರ್ಭಕಂಠ ಕ್ಯಾನ್ಸರ್ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿದೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಶನಿವಾರ ಆರೋಗ್ಯ ಇಲಾಖೆ, ಇನ್ನರ್ ವ್ಹೀಲ್‌ ಕ್ಲಬ್ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಎಚ್ ಪಿ ವಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ಆತಂಕಕಾರಿಯಾಗಿ ಕಾಣಿಸಿಕೊಳ್ಳುತ್ತಿದೆ. 2024 ರ ಸಮೀಕ್ಷೆ ಅಂದಾಜಿನ ಪ್ರಕಾರ ಭಾರತದಲ್ಲಿ 78,499 ಹೊಸ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಕಂಡು ಬಂದಿವೆ. 42,392 ಸಾವು ಸಂಭವಿಸಿದೆ. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ನಲ್ಲಿ ಗರ್ಭಕಂಠದ ಕ್ಯಾನ್ಸರ್ 2ನೇ ಸ್ಥಾನದಲ್ಲಿದೆ. ಈಗಾಗಲೇ ಖಾಸಗಿಯಾಗಿ ಎಚ್ ಪಿ ವಿ ಲಸಿಕೆ ಲಭ್ಯವಿದ್ದು ಸರ್ಕಾರದಿಂದ ಆಯ್ದ ವಯಸ್ಸಿನ ಫಲಾನುಭವಿ ಮಕ್ಕಳಿಗೆ ಉಚಿತ ಲಸಿಕೆ ವಿತರಿಸಲಾಗುತ್ತಿದೆ. 14 ವರ್ಷದಿಂದ 15 ವರ್ಷದ ಒಳಗಿನ ಹೆಣ್ಣು ಮಕ್ಕಳು ಈ ಲಸಿಕೆ ಫಲಾನುಭವಿಗಳಾಗಿದ್ದಾರೆ. ಕೇವಲ ಒಂದು ಡೋಸ್ ಎಚ್ ಪಿ ವಿ ಲಸಿಕೆ ತೆಗೆದುಕೊಂಡರೆ ಹ್ಯೂಮನ್ ಪ್ಯಾಪಿಲೋಮಾ ವೈರಸ್ ನಿಂದ ಬರುವ ಗರ್ಭ ಕಂಠದ ಕ್ಯಾನ್ಸರ್ ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯ. ಕಳೆದ 15 ವರ್ಷಗಳ ಅಂಕಿ ಅಂಶಗಳ ಪ್ರಕಾರ ಈ ಲಸಿಕೆ ಪಡೆದ ಮಹಿಳೆಯರಲ್ಲಿ ಅಮೆರಿಕದಲ್ಲಿ ಶೇ. 65, ಸ್ಕಾಟ್ಲ್ಯಾಂಡ್ ನಲ್ಲಿ ಶೇ. 85 ರಷ್ಟು ಕ್ಯಾನ್ಸರ್ ಇಳಿಮುಖವಾಗಿದೆ. ಆದ್ದರಿಂದ ಎಲ್ಲ ಅರ್ಹ ಹೆಣ್ಣು ಮಕ್ಕಳಿಗೆ ಈ ಲಸಿಕೆ ಹಾಕಿಸ ಬೇಕು ಎಂದು ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿದ್ದ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಭವ್ಯಸಂತೋಷ್ ಮಾತನಾಡಿ, ಸರ್ಕಾರದಿಂದ ಎಚ್ ಪಿ ವಿ ಲಸಿಕೆಯನ್ನು ಹೆಣ್ಣು ಮಕ್ಕಳಿಗೆ ನೀಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ. ಅತಿ ದುಬಾರಿಯ ಈ ಲಸಿಕೆ ಉಚಿತವಾಗಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ . ಇನ್ನರ್ ವೀಲ್ ಸಂಸ್ಥೆಯಿಂದ ಮಹಿಳೆಯರ ಕ್ಯಾನ್ಸರ್ ವಿರುದ್ಧ ಅನೇಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ರೀತಿ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.


ಸಭೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಚಂದ್ರಪ್ರಭ, ವೈದ್ಯಾಧಿಕಾರಿ ಡಾ.ನಿಶಾಲ್, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ. ಕ್ಷಮ , ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಡೈಸಿ, ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ನೀತಾ ಪ್ರದೀಪ್, ಶಿಕ್ಷಕಿ ವಿಜಯ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ. ಬೇಬಿ ಇದ್ದರು. ನಾಗಲತ ಸ್ವಾಗತಿಸಿದರು. ಶಿಲ್ಪ ವಂದಿಸಿದರು.