ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ನೂತನ ಅಧ್ಯಕ್ಷರಾಗಿ ಎಚ್.ಎಸ್.ಪ್ರಸಾದ್ ಭರ್ಜರಿ ಗೆಲುವು ಸಾಧಿಸಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಎಚ್.ಎಸ್.ಪ್ರಸಾದ್ ಹಾಗೂ ಎಂ.ಶಾಂತರಾಜ್ ನಡುವೆ ಭಾರಿ ಪೈಪೋಟಿ ಕಂಡು ಬಂದಿತ್ತಾದರೂ ಎಚ್.ಎಸ್.ಪ್ರಸಾದ್ ೧೯ ಮತ ಪಡೆದು ಎದುರಾಳಿ ಎಂ.ಶಾಂತರಾಜ್ರನ್ನು ೭ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎಚ್.ಎಸ್.ಪ್ರಸಾದ್ ಅಧ್ಯಕ್ಷರಾಗುವ ಜೊತೆಗೆ ತಮ್ಮ ಬಣದಿಂದ ಸ್ಪರ್ಧಿಸಿದ್ದ ಖಜಾಂಚಿ ರಾಘವೇಂದ್ರ ೧೮ ಮತ ಪಡೆದು ಎದುರಾಳಿ ಸಿದ್ದರಾಜುರನ್ನು ೪ ಮತಗಳ ಅಂತರದಿಂದ ಸೋಲಿಸಿದ್ದಾರೆ. ಅಲ್ಲದೆ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಚ್.ಎಸ್.ಪ್ರಸಾದ್ ಬಣದ ರುದ್ರಸ್ವಾಮಿ ೨೦ ಮತ ಪಡೆದು ಎದುರಾಳಿ ಮಲ್ಲುರನ್ನು ೯ ಮತಗಳ ಅಂತರದಿಂದ ಸೋಲಿಸಿದ್ದಾರೆ.
೨ ಮತ ತಿರಸ್ಕೃತ:ದುರಂತ ಎಂದರೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನ ಹಾಗೂ ರಾಜ್ಯ ಪರಿಷತ್ ಸ್ಥಾನಕ್ಕೆ ಮತ ನೀಡಿದ ತಲಾ ಒಬ್ಬರು ಮತಗಳನ್ನು ತಿರಸ್ಕೃತಗೊಳಿಸಲಾಗಿದೆ. ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಎಚ್.ಎಸ್.ಪ್ರಸಾದ್ ಬಣದ ಎಲ್ಲರೂ ಗೆದ್ದು ಬೀಗಿದ್ದಾರೆ. ಚುನಾವಣಾಧಿಕಾರಿಯಾಗಿ ಅಂಕಪ್ಪ ಕರ್ತವ್ಯ ನಿರ್ವಹಿಸಿದ್ದಾರೆ.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎಚ್.ಎಸ್.ಪ್ರಸಾದ್, ಖಜಾಂಚಿಯಾಗಿ ರಾಘವೇಂದ್ರ, ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾದ ರುದ್ರಸ್ವಾಮಿ ಆಯ್ಕೆಯಾಗುತ್ತಿದ್ದಂತೆಯೇ ಎಚ್.ಎಸ್.ಪ್ರಸಾದ್ ಬಣದ ನೌಕರರು ಪಟಾಕಿ ಸಿಡಿಸಿ ಸಂಭ್ರಮಿಸಿದರು.