ಸಾರಾಂಶ
ವಿಶೇಷವಾಗಿ ಧಾರವಾಡ ನಗರದ ಸಾಹಿತಿಗಳು ಸ್ವಾತಂತ್ರ್ಯದ ಸಂದೇಶವನ್ನು ಕಾವ್ಯ ಗೀತೆಗಳಲ್ಲಿ ಹರಿಸಿದರು
ಧಾರವಾಡ: ಹುಬ್ಬಳ್ಳಿ-ಧಾರವಾಡ ಸ್ವಾತಂತ್ರ್ಯ ಹೋರಾಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಇಲ್ಲಿಯ ರೈತರು, ವಿದ್ಯಾರ್ಥಿಗಳು, ಕಾರ್ಮಿಕರು ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ್ದರು ಎಂದು ಹು-ಧಾ ಮಹಾನಗರ ಪಾಲಿಕೆ ಉಪ ಮೇಯರ್ ಸಂತೋಷ ಚವ್ಹಾಣ ಹೇಳಿದರು.
ಧಾರವಾಡ ಮಹಾನಗರ ಪಾಲಿಕೆ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಅವರು, ವಿಶೇಷವಾಗಿ ಧಾರವಾಡ ನಗರದ ಸಾಹಿತಿಗಳು ಸ್ವಾತಂತ್ರ್ಯದ ಸಂದೇಶವನ್ನು ಕಾವ್ಯ ಗೀತೆಗಳಲ್ಲಿ ಹರಿಸಿದರು. 1942ರ ಅಗಷ್ಟನಲ್ಲಿ ದೇಶಾದ್ಯಂತ ಪ್ರಾರಂಭಗೊಂಡ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಹುತ್ಮಾತರಾದವರಲ್ಲಿ ಹುಬ್ಬಳ್ಳಿಯ ನಾರಾಯಣ ಗೋವಿಂದಪ್ಪ ಡೋಣಿರವರನ್ನು ಸ್ಮರಿಸಲು ಹೆಮ್ಮೆಯಾಗುತ್ತದೆ ಎಂದರು.ಮಹಾನಗರ ಪಾಲಿಕೆಯ ಸರ್ವ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಮಹಾನಗರ ಪಾಲಿಕೆಯು ನನಗೇನು ಕೊಟ್ಟಿತು ಎಂಬುದನ್ನು ಯೋಚಿಸದೇ ಮಹಾನಗರ ಪಾಲಿಕೆಗೆ ನಾನೇನು ಕೊಟ್ಟೆ ಎಂಬುದನ್ನು ಚಿಂತಿಸಬೇಕಿದೆ. ಅವಳಿ ನಗರವನ್ನು ಸ್ವಚ್ಚ ಸುಂದರ ನಗರವಾಗಿಸಬೇಕಿದೆ. 2025 ರ ಸ್ವಚ್ಚ ಸರ್ವೇಕ್ಷಣದಲ್ಲಿ ರಾಜ್ಯಕ್ಕೆ ಹು-ಧಾ ಮಹಾನಗರ ಪಾಲಿಕೆ 2ನೇ ಸ್ಥಾನ ಬಂದಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಪ್ರಸ್ತುತ ದೇಶ ಮುನ್ನೆಡೆಯುತ್ತಿದ್ದರೂ ಅನೇಕ ಸವಾಲುಗಳಿವೆ. ಪರಿಸರ ಮಾಲಿನ್ಯ, ನಿರುದ್ಯೋಗ, ಮಹಿಳಾ ಸುರಕ್ಷತೆ, ಮೂಲಭೂತ ಸೌಕರ್ಯಗಳ ಕೊರತೆ ಇದ್ದರೂ ಪಾಲಿಕೆಯ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ವಿತರಣೆಯಲ್ಲಿ ಸುಧಾರಣೆ, ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಬಲಪಡಿಸುವ ಕಾರ್ಯ, ಲಕ್ಷ-ವೃಕ್ಷ ಯೋಜನೆ, ಉದ್ಯಾನವನಗಳ ಅಭಿವೃದ್ಧಿ, ಸಾರ್ವಜನಿಕ ಸ್ಮಶಾನಗಳ ಅಭಿವೃದ್ಧಿ, ರಸ್ತೆ, ಕಾಲುವೆ, ಒಳಚರಂಡಿ ವ್ಯವಸ್ಥೆಗಳ ಅಭಿವೃದ್ಧಿ, ಸಮಗ್ರ ನಗರದ ಅಭಿವೃದ್ಧಿಗಾಗಿ ಜಿ.ಐ.ಎಸ್ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಉಪ ಮಹಾಪೌರರು ಹೇಳಿದರು.ಪಾಲಿಕೆಯ ಉಪ ಆಯುಕ್ತ ಶಂಕರಾನಂದ ಬನಶಂಕರಿ, ಪಾಲಿಕೆ ಸದಸ್ಯರು, ಸಿಬ್ಬಂದಿ ಇದ್ದರು.