ಕನ್ನಡಪ್ರಭ ವಾರ್ತೆ ಮಡಿಕೇರಿ

ನಾಡಿನ ಸಮಸ್ತ ಜನತೆಯ ಪರವಾದ ದಾಖಲೆಯ ಬಜೆಟ್ ಅನ್ನು ಸಿದ್ದರಾಮಯ್ಯ ನೀಡಿದ್ದಾರೆ. ಕೊಡಗಿಗೆ ಸಂಬಂಧಿಸಿದ ಹಲವು ಯೋಜನೆಗಳು ಘೋಷಣೆಯಾಗಿವೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.

ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಆರೋಗ್ಯ, ಶಿಕ್ಷಣ, ಅರಣ್ಯ, ಇಂಧನ, ನೀರಾವರಿ, ಬೆಂಗಳೂರು ಅಭಿವೃದ್ಧಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ, ಕಾರ್ಮಿಕರು, ಮಹಿಳೆಯರು ನೌಕರರು ಸೇರಿದಂತೆ, ಎಲ್ಲರ ಅಭಿವೃದ್ಧಿಯ ಪರವಾದ ಬಜೆಟ್ ಇದಾಗಿದೆ ಎಂದಿದ್ದಾರೆ.

ಸಣ್ಣ ನೀರಾವರಿ ಇಲಾಖೆಯಡಿಯಲ್ಲಿ ಪೊನ್ನಂಪೇಟೆ, ವಿರಾಜಪೇಟೆ, ಕುಶಾಲನಗರ, ಸೋಮವಾರಪೇಟೆಯಲ್ಲಿ ಕೆರೆಗಳ ಅಭಿವೃದ್ಧಿ, ತಡೆಗೋಡೆ ನಿರ್ಮಾಣ ಮಾಡುವ ಯೋಜನೆ ಘೋಷಿಸಿದ್ದಾರೆ.

ಅರಣ್ಯದಂಚಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಮನೆ ನಿರ್ಮಾಣ ಮಾಡುವ ಬಗ್ಗೆ ಘೋಷಿಸಿದ್ದಾರೆ.


ವಿವಿಧ ಆದಿವಾಸಿ ಜನಾಂಗದ ಅಭಿವೃದ್ಧಿಗೆ ನಿಗಮ ಸ್ಥಾಪಿಸಲು ಘೋಷಣೆ ಮಾಡಿದ್ದಾರೆ ಎಂದು ಪೊನ್ನಣ್ಣ ತಿಳಿಸಿದರು.

ಈ‌ ಬಜೆಟ್ ನಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಾರೆ. ಇದನ್ನು ಚುನಾವಣೆ ಸಂದರ್ಭದಲ್ಲಿ ನಾನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದೆ. ಇದೀಗ ನಮ್ಮ ಸರ್ಕಾರ ಘೋಷಣೆ ಮಾಡಿದೆ ಎಂದು ತಿಳಿಸಿದರು.

ವಿರಾಜಪೇಟೆ ಹಾಗೂ ಸೋಮವಾರಪೇಟೆಯಲ್ಲಿ ಶ್ರಮಿಕ ವಸತಿ ಶಾಲೆ ಘೋಷಣೆ ಮಾಡಿದ್ದಾರೆ. ವಿರಾಜಪೇಟೆಯ ವಿ ಭಾಡಗದಲ್ಲಿ ಈಗಾಗಲೇ ಗುರುತಿಸಿರುವ ಕ್ರೀಡಾ ತರಬೇತಿ ಹಾಗೂ ವಸತಿ ನಿಲಯ ಸ್ಥಾಪನೆಗೆ ಯೋಜನೆ ಘೋಷಿಸಿದ್ದಾರೆ.

ಆನೆ- ಮಾನವ ಸಂಘರ್ಷವನ್ನು ತಡೆಗಟ್ಟಲು ಐದು ವರ್ಷದಲ್ಲಿ 1500 ಕೋಟಿ ಅನುದಾನವನ್ನು ರೈಲ್ವೇ ಬ್ಯಾರಿಕೇಡ್ ಕೆಲಸ ನಡೆಯಲಿದೆ. ವಿರಾಜಪೇಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ನಾವು ಕೆಲಸ ಮಾಡೋಣ ಎಂದು ಪೊನ್ನಣ್ಣ ಹೇಳಿದರು.