ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪಿಓಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವಂತಿಲ್ಲ ಎನ್ನುವುದು ಕಾಗದದ ಆದೇಶಕ್ಕೆ ಮಾತ್ರ ಸೀಮಿತವಾಗಿದೆ. ಕದ್ದುಮುಚ್ಚಿ ಪಿಓಪಿ ಗಣೇಶ ಮೂರ್ತಿಗಳು ಮಾರಾಟವಾಗಿದ್ದು, ಭರ್ಜರಿ ಲಾಭ ಎಣಿಸಿಕೊಂಡಿದ್ದಾರೆ. ಪಿಓಪಿ ಗಣೇಶಮೂರ್ತಿ ಮಾರಾಟ ಮಾಡುವವರನ್ನು ರೆಡ್ಹ್ಯಾಂಡ್ ಆಗಿ ಹಿಡಿದುಕೊಟ್ಟರೂ ಯಾವೊಬ್ಬ ಅಧಿಕಾರಿಗಳೂ ಅವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಮಾಡಲಿಲ್ಲ. ಅಧಿಕಾರಿಗಳೇ ಪಿಓಪಿ ಗಣೇಶಮೂರ್ತಿ ಮಾರಾಟಗಾರರ ಬೆಂಬಲಕ್ಕೆ ನಿಂತಿದ್ದಾರೆ. ಲಕ್ಷಾಂತರ ರು. ಬಂಡವಾಳ ಹಾಕಿರುವ ನಾವು ಮಣ್ಣಿನ ಗಣೇಶಮೂರ್ತಿಗಳನ್ನಿಟ್ಟುಕೊಂಡು ಮಾರಾಟವಾಗದೆ ನಷ್ಟಕ್ಕೊಳಗಾಗಿದ್ದೇವೆ. ಇದು ಈ ಬಾರಿ ಮಣ್ಣಿನ ಗಣೇಶಮೂರ್ತಿ ಮಾರಾಟ ಮಾಡುತ್ತಿರುವವರ ಅಳಲಾಗಿದೆ.ಹೊರಗಡೆಯಿಂದ ಪಿಓಪಿ ಗಣೇಶಮೂರ್ತಿಗಳ ಬಿಡಿಭಾಗಗಳನ್ನು ತಂದವರು ನಗರದ ಹೊರವಲಯದ ಕಿರಗಂದೂರು ಬಳಿ ಅವುಗಳನ್ನು ಜೋಡಿಸಿಟ್ಟುಕೊಂಡು ಇಪ್ಪತ್ತು ದಿನಗಳ ಹಿಂದೆಯೇ ಮಾರಾಟ ಶುರು ಮಾಡಿದ್ದರು. ಈ ವಿಷಯವನ್ನು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ಗಮನಕ್ಕೂ ತಂದಿದ್ದೆವು. ಸ್ಥಳದ ಮೇಲೆ ದಾಳಿಯನ್ನೂ ನಡೆಸಿದರು. ಆದರೆ, ಪಿಓಪಿ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡು, ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವನ್ನೇ ಮಾಡಲಿಲ್ಲ ಎಂದು ಹಲವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಮ ಕೈಗೊಳ್ಳುವ ಅಧಿಕಾರ ಯಾರಿಗಿದೆ?:ಪಿಓಪಿ ಗಣೇಶಮೂರ್ತಿಗಳನ್ನು ವಶಕ್ಕೆ ಪಡೆಯುವ ಅಧಿಕಾರ ನಮಗಿಲ್ಲ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಹೇಳುತ್ತಾರೆ. ಹಾಗಾದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇರುವುದಾದರೂ ಏಕೆ? ಮಾಲಿನ್ಯಕಾರಕವಾದಂತಹ ಪಿಓಪಿ ಗಣೇಶಮೂರ್ತಿಗಳನ್ನು ವಶಪಡಿಸಿಕೊಂಡು ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಯಾರಿಗಿದೆ ಎಂದು ಮಾರಾಟಗಾರರು ಪ್ರಶ್ನಿಸುತ್ತಿದ್ದಾರೆ.
ನಮಗೂ ಅವಕಾಶ ಕೊಡಲಿ:ನಾವು ನೆಲಬಾಡಿಗೆ ಕಟ್ಟಿಕೊಂಡು ಹೊರರಾಜ್ಯಗಳಲ್ಲಿ ಮಣ್ಣಿನ ಗಣೇಶಮೂರ್ತಿಗಳನ್ನು ತಂದು ಮಾರಾಟಕ್ಕಿಟ್ಟಿದ್ದೇವೆ. ಬೇರೆಯವರಿಗೆ ಪಿಓಪಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟು ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅಧಿಕಾರವಿಲ್ಲವೆಂದರೆ ನಮಗೂ ಅವಕಾಶ ಕೊಡಲಿ. ನಮಗೆ ಪಿಓಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲು ಶಕ್ತರಿಲ್ಲವೇ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಮೊಬೈಲ್ನಲ್ಲೇ ಬುಕ್ಕಿಂಗ್:ಮಣ್ಣಿನ ಗಣೇಶ ಮೂರ್ತಿಗಳು ಪಿಓಪಿ ಗಣೇಶಮೂರ್ತಿಗಳಷ್ಟು ಆಕರ್ಷಕವಾಗಿರುವುದಿಲ್ಲ. ಆ ಮೂರ್ತಿಗಳ ರಚನೆ ತುಂಬಾ ಸುಂದರ ಮತ್ತು ಮೋಹಕವಾಗಿ ಮೂಡಿಬಂದಿರುತ್ತದೆ. ಅದಕ್ಕೆ ಬಹಳಷ್ಟು ಜನರು ಆಕರ್ಷಿತರಾಗುತ್ತಾರೆ. ಅದನ್ನು ತೆಗೆದುಕೊಂಡು ಹೋಗುವುದು ಕೂಡ ಸುಲಭ. ಈಗ ಮೊಬೈಲ್ನಲ್ಲೇ ಗಣೇಶಮೂರ್ತಿಗಳನ್ನು ಬುಕ್ ಮಾಡಿಕೊಂಡು, ಗೂಗಲ್ ಮ್ಯಾಪ್ ಮೂಲಕ ಸ್ಥಳದ ಮಾಹಿತಿ ಪಡೆದು ಗಣೇಶಮೂರ್ತಿಗಳನ್ನು ಸುಲಭವಾಗಿ ಕೊಂಡೊಯ್ಯುತ್ತಿದ್ದಾರೆ. ಅಧಿಕಾರಿಗಳೂ ವರ್ಷಕ್ಕೊಮ್ಮೆ ಬರುವ ಗೌರಿ- ಗಣೇಶ ಹಬ್ಬದ ಸಮಯದಲ್ಲಿ ಪಿಓಪಿ ಗಣೇಶಮೂರ್ತಿಗಳನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.
ವೈವಿಧ್ಯಮಯ ವಿನ್ಯಾಸದ ಗಣೇಶಮೂರ್ತಿಗಳುನಗರದ ನೂರಡಿ ರಸ್ತೆ, ಪೇಟೆಬೀದಿ, ಒಳಾಂಗಣ ಕ್ರೀಡಾಂಗಣದ ಆವರಣ, ಬನ್ನೂರು ರಸ್ತೆ, ಹೊಸಹಳ್ಳಿ ಸರ್ಕಲ್ ಸೇರಿ ವಿವಿಧೆಡೆ ಅತ್ಯಾಕರ್ಷಕ ವೈವಿಧ್ಯಮಯ ವಿನ್ಯಾಸದ ಮಣ್ಣಿನ ಗಣೇಶಮೂರ್ತಿಗಳು ಮಾರಾಟಕ್ಕೆ ಸಿದ್ಧವಾಗಿವೆ. ಸಿಂಹದ ಮೇಲೆ ಗದೆ ಹಿಡಿದು ಕುಳಿತಿರುವ ಗಣೇಶ, ವಿಷಕಂಠನ ರೂಪದಲ್ಲಿರುವ ಗಣೇಶ, ನಂದಿ, ಆನೆ ಮೇಲೆ ಕುಳಿತಿರುವ ಗಣಪ, ಕಾಳಿಂಗ ಸರ್ಪ ಮರ್ದನ ರೂಪದ ವಿನಾಯಕ, ಅಯೋಧ್ಯೆ ಶ್ರೀರಾಮಮಂದಿರವನ್ನು ಒಳಗೊಂಡ ವಿಘ್ನೇಶ್ವರ ಹೀಗೆ ನೂರಾರು ರೂಪಗಳಲ್ಲಿ ಗಣೇಶ ಮೈತಳೆದು ನಿಂತು ಎಲ್ಲರನ್ನೂ ಆಕರ್ಷಿಸುತ್ತಿದ್ದಾನೆ. ಮಣ್ಣಿನ ಗೌರಿ- ಗಣಪಗಳಿಗೆ ವಿವಿಧ ಬಣ್ಣಗಳಿಂದ ಅಲಂಕರಿಸಿದರೂ ಪಿಓಪಿ ಗಣಪತಿಗಳಿಗೆ ಬರುವಷ್ಟು ತೇಜಸ್ಸು ಬರುವುದಿಲ್ಲ. ಮಣ್ಣಿನ ಗಣಪಗಳನ್ನು ೬ ಅಡಿಯವರೆಗೆ ಮಾತ್ರ ನಿರ್ಮಿಸಬಹುದು. ಹೆಚ್ಚು ಎತ್ತರ ಮಾಡಿದರೆ ತೂಕ ಹೆಚ್ಚಾಗುತ್ತದೆ, ಸಾಗಿಸುವುದು ಇನ್ನೂ ಕಷ್ಟ. ಸ್ವಲ್ಪ ವ್ಯತ್ಯಾಸವಾದರೂ ಮೂರ್ತಿಗಳಿಗೆ ಹಾನಿಯಾಗುತ್ತದೆ. ಇದೇ ಕಾರಣಕ್ಕೆ ಪಿಓಪಿ ಗಣೇಶಮೂರ್ತಿಗಳನ್ನು ಯುವಕರು ಬಯಸುವುದಕ್ಕೆ ಕಾರಣವಾಗಿದೆ.‘ನಾವು ೩೫ ಲಕ್ಷ ರು. ಬಂಡವಾಳ ಹಾಕಿ ಮಾರಾಟಕ್ಕೆ ಕುಳಿತಿದ್ದೇವೆ. ೩೦೦ ರು.ನಿಂದ ೩೫ ಸಾವಿರ ರು.ವರೆಗೆ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾರಾಟಕ್ಕಿಟ್ಟಿದ್ದೇವೆ. ವ್ಯಾಪಾರ ನಿರೀಕ್ಷೆಯಂತೆ ನಡೆಯುತ್ತಲೇ ಇಲ್ಲ. ಹಾಕಿದ ಬಂಡವಾಳ ಬರುವುದೋ ಇಲ್ಲವೋ ಎಂಬ ಆತಂಕ ಕಾಡುತ್ತಿದೆ. ನಮಗೆ ಗಣೇಶಮೂರ್ತಿಗಳ ಮಾರಾಟದಲ್ಲಿ ಲಾಭ ಬೇಡ. ಅಸಲು ಬಂದರೆ ಸಾಕು ಎನ್ನುವಂತಾಗಿದೆ. ಹಿಂದಿನ ವರ್ಷ ೮ ಲಾರಿಗಳಲ್ಲಿ ಗಣೇಶಮೂರ್ತಿಗಳನ್ನು ತಂದಿದ್ದೆವು. ಈ ವರ್ಷ ಮೂರು ಲಾರಿಗಳಲ್ಲಿ ಮೂರ್ತಿಗಳನ್ನು ತಂದಿದ್ದೇವೆ. ಮಾರಾಟ ಮಾತ್ರ ನಿರೀಕ್ಷೆಯಂತಿಲ್ಲ.’
- ಮಮತಾ, ಗಣೇಶ ಮಾರಾಟಗಾರರು‘ಪಿಓಪಿ ಗಣೇಶಮೂರ್ತಿ ಮಾರಾಟಗಾರರಿಗೆ ಅಧಿಕಾರಿಗಳೇ ನೆರವಾಗಿದ್ದಾರೆ. ಮಾರಾಟ ಮಾಡಬಾರದು ಎಂಬ ನಿಯಮ ರೂಪಿಸಿರುವವರೂ ಅವರೇ, ಕ್ರಮ ಕೈಗೊಳ್ಳಲಾಗುವುದಿಲ್ಲವೆಂದು ಹೇಳುವವರೂ ಅವರೇ ಆದಾಗ ನಾವೇನು ಮಾಡೋಣ. ನಮಗೂ ಪಿಓಪಿ ಗಣೇಶಮೂರ್ತಿಗಳ ಮಾರಾಟಕ್ಕೆ ಅವಕಾಶ ಕೊಡಲಿ. ಇಲ್ಲವೇ ಅವು ಜಿಲ್ಲೆಗೆ ಬಾರದಂತೆ ತಡೆಯಲಿ. ಈ ಬಾರಿ ಪಿಓಪಿ ಗಣೇಶಮೂರ್ತಿ ಮಾರಾಟಗಾರರಿಂದಲೇ ನಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರಿದೆ.’
ಬಾಲಾಜಿ, ಗಣೇಶಮೂರ್ತಿ ಮಾರಾಟಗಾರರು