ಕಕ್ಕಬೆಯಲ್ಲಿ ಸಿಎನ್‌ಸಿಯಿಂದ ಮಾನವ ಸರಪಳಿ ಜನಜಾಗೃತಿ

| Published : May 13 2025, 11:50 PM IST

ಸಾರಾಂಶ

ಕೊಡವ ನ್ಯಾಷನಲ್‌ ಕೌನ್ಸಿಲ್‌ ಸಂಘಟನೆ ಪಾಡಿನಾಡ್‌ನ ಕಕ್ಕಬೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಜನಜಾಗೃತಿ ಮೂಡಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರೀಯ ಜನಗಣತಿಯ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸಬೇಕು, ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಇಂದು ಪಾಡಿನಾಡ್ ನ ಕಕ್ಕಬೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಜನಜಾಗೃತಿ ಮೂಡಿಸಿತು.ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕಕ್ಕಬೆ ಜಂಕ್ಷನ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದ ಸದಸ್ಯರು ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆದರು.ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು 2025-26ರ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮಸಂಜಾತ ಕೊಡವರಿಗೆ ಪ್ರತ್ಯೇಕ “ಕೋಡ್ ಮತ್ತು ಕಾಲಮ್” ಅನ್ನು ಸೇರಿಸಲು ಕೇಂದ್ರ ಗೃಹ ಮಂತ್ರಾಲಯ ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯೋಗವನ್ನು ಒತ್ತಾಯಿಸುವುದಾಗಿ ತಿಳಿಸಿದರು.ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗಾಗಿ ಕಳೆದ 35 ವರ್ಷಗಳಿಂದ ನಿರಂತರ ಮತ್ತು ಶಾಂತಿಯುತವಾಗಿ ಸಿಎನ್‌ಸಿ ಸಂಘಟನೆ ಹೋರಾಟ ನಡೆಸುತ್ತಾ ಬಂದಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಈ ಬೇಡಿಕೆ ಪರ ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದು, ಅದರ ವಿಚಾರಣೆ ಮುಂದುವರೆಯುತ್ತಿದೆ ಎಂದರು. ಕೊಡವ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಟ್ಯಾಗ್ ನೀಡಬೇಕು, ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಆದಿಮಸಂಜಾತ ಸಮಾವೇಶದ ಅಡಿಯಲ್ಲಿ ಮಾನ್ಯತೆಯನ್ನು ಕಲ್ಪಿಸಬೇಕು, ಹೊರಗಿನ ಆಡಳಿತಗಾರರು ವಶಪಡಿಸಿಕೊಂಡ, ಬಂಡವಾಳಶಾಹಿಗಳಿಗೆ ಅಡಮಾನವಿಟ್ಟ, ಭೋಗ್ಯಕ್ಕೆ ನೀಡಿದ ಮತ್ತು ಮಾರಾಟ ಮಾಡಿದ ಕೊಡವರ ಪೂರ್ವಾರ್ಜಿತ ಅನುವಂಶಿಕ ಭೂ ಹಕ್ಕುಗಳನ್ನು ಮರುಸ್ಥಾಪಿಸಬೇಕು, ಸಾಂಪ್ರದಾಯಿಕ ತಾಯ್ನಾಡಿನಲ್ಲಿ ಕೊಡವರ ಐತಿಹಾಸಿಕ ನಿರಂತರತೆಯ ಶಾಸನಬದ್ಧ ಅನುಮೋದನೆಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.ಮುಂದಿನ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ಮೇ 26ರಂದು ಬೆಳಗ್ಗೆ 10.30 ಗಂಟೆಗೆ ತಾಳೇರಿ ನಾಡಿನ ಟಿ.ಶೆಟ್ಟಿಗೇರಿಯಲ್ಲಿ ನಡೆಯಲಿದೆ ಎಂದರು.ಸವಿತಾ, ಪಟ್ರಪಂಡ ಲೀಲಾ, ಮಚಂಡ ವನಿತಾ, ನಂಬಡಮಂಡ ಶೈಲಾ, ನಾಟೋಳಂಡ ಪುಷ್ಪಾ, ಅಯ್ಯನೆರವಂಡ ಗಂಗೆ, ಬಾಚಮಂಡ ರಾಜ ಪೂವಣ್ಣ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ, ಕಲಿಯಂಡ ಪ್ರಕಾಶ್, ಪಾಂಡಂಡ ನರೇಶ್, ಅಪ್ಪಾರಂಡ ಶ್ರೀನಿವಾಸ್, ಬೊಳಿಯಾಡಿರ ಸಂತು ಮತ್ತಿತರರು ಪಾಲ್ಗೊಂಡಿದ್ದರು.