ಶಿರಹಟ್ಟಿ: ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಾದ್ಯಂತ ಗಾಳಿ, ಗುಡುಗು, ಮಿಂಚು ಮಿಶ್ರಿತ ಅಕಾಲಿಕ ಆಲಿಕಲ್ಲು ಮಳೆಗೆ ತಾಲೂಕಿನ ಮಾಗಡಿ ಗ್ರಾಮದಲ್ಲಿ ೧೨೦ ಎಕರೆ ಕಲ್ಲಂಗಡಿ ಬೆಳೆ ಹಾಗೂ ೩೦ ಎಕರೆ ಪಪ್ಪಾಯಿ ಬೆಳೆಗೆ ಹಾನಿಯಾಗಿದ್ದು, ರೈತರಿಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಮಾತನಾಡಿ, ೨೦೨೫- ೨೬ರ ಬೇಸಿಗೆ ಹಂತದಲ್ಲಿ ಬೆಳೆದ ತೋಟಗಾರಿಕೆ ಬೆಳೆಯಾದ ಕಲ್ಲಂಗಡಿ ಬೆಳೆಯನ್ನು ಬೆಳೆದಿದ್ದು, ಇತ್ತೀಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಬೆಳೆ ಸಂಪೂರ್ಣ ಹಾಳಾಗಿದ್ದು, ಅಧಿಕಾರಿಗಳು ಕೂಡಲೇ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಹಾರ ಕೊಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ಈಗಾಗಲೇ ಕೆಲವೊಂದು ಬೆಳವಣಿಗೆ ಹಂತ, ಕೆಲವೊಂದು ಕಟಾವಿಗೆ ಬಂದಿದ್ದ ಬೆಳೆ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಲ್ಲಂಗಡಿ ಮತ್ತು ಪಪ್ಪಾಯಿ ಬೆಳೆ ಹಾಳಾಗಿ ಹೋಗಿದೆ. ಕಲ್ಲಂಗಡಿ ಹಣ್ಣು ಸಂಪೂರ್ಣ ಕೊಳೆತು ಹೋಗಿದ್ದು, ಮಾರುಕಟ್ಟೆಯಲ್ಲಿ ಬೆಳೆಗೆ ಬೆಲೆ ಸಿಗದಂತಾಗಿದೆ. ಲಕ್ಷಾಂತರ ರು. ಹಣ ಖರ್ಚು ಮಾಡಿ ತೋಟಗಾರಿಕೆ ಇಲಾಖೆ ಸಲಹೆಯಂತೆ ಹಂತ- ಹಂತವಾಗಿ ಔಷಧಿ ಸಿಂಪರಣೆ ಬೆಳೆ ರಕ್ಷಣೆ ಕ್ರಮ ಎಲ್ಲವನ್ನು ಮಾಡಿದ್ದು, ಉತ್ತಮ ಫಸಲು ಬರುವಷ್ಟರಲ್ಲಿ ಅಕಾಲಿಕ ಆಲಿಕಲ್ಲು ಮಳೆ ರೈತರಿಗೆ ನಷ್ಟವನ್ನುಂಟು ಮಾಡಿದೆ.ಒಂದು ಎಕರೆ ಪ್ರದೇಶದ ಬೆಳೆ ಖರ್ಚುವೆಚ್ಚ ೧.೨೦ ಲಕ್ಷ ರು. ಆಗಿದ್ದು, ಖರ್ಚು ಮಾಡಿದ ಹಣವೂ ಬರದಂತಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಾಲೂಕಿನಲ್ಲಿ ಇದ್ದು ಇಲ್ಲದಂತಾಗಿದೆ. ಒಮ್ಮೆಯೂ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸಿಲ್ಲ. ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಗಾಳಿ, ಮಳೆಗೆ ಬೆಳೆ ಹಾಳಾಗಿದ್ದು, ಸಧ್ಯ ಸಾಲ ನೀಡಿದವರ ಕಿರುಕುಳ ಹೆಚ್ಚಾಗಿದೆ.ಸಾಲ ಮಾಡಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೆಳೆದಿದ್ದ ಬಂಗಾರದಂತಹ ಬೆಳೆ ನೆಲಸಮವಾಗಿವೆ. ಮಾಗಡಿ ಗ್ರಾಮ ಹಾಗೂ ಸುತ್ತಮುತ್ತಲ ರೈತರು ಜಮೀನನಲ್ಲಿ ಲಕ್ಷಾಂತರ ಖರ್ಚು ಮಾಡಿ ಕಲ್ಲಂಗಡಿ, ಪಪ್ಪಾಯಿ ಗಿಡಗಳನ್ನು ನೆಟ್ಟಿದ್ದರು. ಕಷ್ಟಪಟ್ಟು ವ್ಯವಸಾಯ ಮಾಡಿದ್ದರಿಂದ ಉತ್ತಮ ಫಸಲು ಕೂಡ ಬಂದಿತ್ತು. ಆದರೆ ಮಳೆಯು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ್ದು, ರೈತ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ ಎಂದು ಅಳಲು ತೋಡಿಕೊಂಡರು.ಈ ವೇಳೆ ರೈತರಾದ ಬಸವರಾಜ ಚನ್ನಪ್ಪ ಬಡ್ನಿ, ದೇವಪ್ಪ ವನಹಳ್ಳಿ, ವಿನೋದರೆಡ್ಡಿ ವೆಂಕರೆಡ್ಡಿ, ಮಲ್ಲಪ್ಪ ಗಾಣಗೇರ, ಫಕ್ಕೀರಪ್ಪ ವೆಂಕಪ್ಪ ಈಳಗೇರ, ಫಕ್ಕೀರೇಶ ಕೋಳಿವಾಡ, ಭೀಮಪ್ಪ ಭರಮಗೌಡ್ರ, ಶರಣ ಅಂಗಡಿ, ಫಕೀರಸಾಬ ರಾಜೇಸಾಬ ನದಾಫ್, ಬಸವರಾಜ ಹನುಮಪ್ಪ ಮಲಿಗೋಡ, ಮಂಜುನಾಥ ಬಂಡಿ, ಪರಶುರಾಮ ಯಲ್ಲಪ್ಪ ಡೋಣಿ, ಮಂಜುನಾಥ ಭಜಂತ್ರಿ, ಶೇಖಪ್ಪ ಕದಾಂಪೂರ, ಶಿವಪ್ಪ ಡೋಣಿ, ಸಿ.ಬಿ. ಅಂಗಡಿ, ನಾಗರಾಜಗೌಡ ಪಾಟೀಲ ಸೇರಿ ಅನೇಕ ರೈತರು ಮನವಿ ನೀಡುವಲ್ಲಿ ಇದ್ದರು.