ಸಾರಾಂಶ
ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಮನನೊಂದು ಪತ್ನಿಯೂ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಹೊಸ ವರ್ಷದ ದಿನ ಹೊಸನಗರ ತಾಲೂಕಿನ ಸುತ್ತಾ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ: ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಮನನೊಂದು ಪತ್ನಿಯೂ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಹೊಸ ವರ್ಷದ ದಿನ ಹೊಸನಗರ ತಾಲೂಕಿನ ಸುತ್ತಾ ಗ್ರಾಮದಲ್ಲಿ ನಡೆದಿದೆ. ಮೇಲಿನಬೆಸಿಗೆ ಗ್ರಾಮ ಪಂಚಾಯತಿಯ ಸುತ್ತಾ ಗ್ರಾಮದ ಶಿಳ್ಳೆಕ್ಯಾತರ ಕ್ಯಾಂಪಿನ ಮಂಜುನಾಥ (25) ಡಿ. 31ರಂದು ಸಂಜೆ ಬೈಕಿಲ್ಲಿ ಶಿಕಾರಿಪುರಕ್ಕೆ ಹೋಗಿದ್ದಾಗ ಶಿಕಾರಿಪುರದ ಬಳಿ ಬೈಕ್ ಅಪಘಾತವಾಗಿದೆ.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮಂಜುನಾಥ ಮೃತಪಟ್ಟಿದ್ದು ಸುದ್ದಿ ತಿಳಿದ ಆತನ ಪತ್ನಿ ಅಮೃತ (21) ಮನೆಯ ಶೆಡ್ಡಿನ ಜಂತಿಗೆ ತನ್ನ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಮೂಲತಃ ಮೈಸೂರು ವಾಸಿಯಾಗಿದ್ದ ಅಮೃತರನ್ನು ಕಳೆದ 3 ವರ್ಷದ ಹಿಂದೆ ಮಂಜುನಾಥ ಪ್ರೀತಿಸಿ ಕೊಲ್ಲೂರಿನಲ್ಲಿ ವಿವಾಹವಾಗಿದ್ದರು.