ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ನಾನು ಪ್ರಚಾರಪ್ರೀಯ ಅಲ್ಲ. ಮೋದಿ ಪ್ರಚಾರಕ್ಕಾಗಿ ಮುಗಿಬೀಳ್ತಾರೆ. ರೈಲಿನ ಹಸಿರು ಧ್ವಜ ತೋರಿಸಲೂ ಪ್ರಧಾನಿ ಮುಂದೆ ನಿಲ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಲೇವಡಿ ಮಾಡಿದರು.ಅವರು ಮಂಗಳವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭಧಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾಂದೇಡ್ ಬೆಂಗಳೂರು ರೈಲಿನ ಸಮಯ ಬದಲಾವಣೆ ಬದಲಿಗೆ ಹೊಸ ರೈಲನ್ನು ಆರಂಭಿಸಲು ನಿರ್ಧರಿಸಿ ಜಾರಿಗೊಳಿಸಿದೆ. ಬೀದರ್ ಕಲಬುರಗಿ ಮಾರ್ಗ ಪೂರ್ಣಗೊಳಿಸಿದೆವು, ಹೈದ್ರಾಬಾದ್ನಿಂದ ಹುಬ್ಬಳ್ಳಿ ರೈಲು ಆರಂಭಿಸಿದೆವು. ಸೋಲಾಪೂರದಿಂದ ಬೆಂಗಳೂರಿಗೆ ರೈಲು ನೀಡಿದೆ ಹೀಗೆಯೇ ಅನೇಕವನ್ನು ಜಾರಿಗೊಳಿಸಿದ್ದರೂ ನಾನು ಪ್ರಚಾರಗಿಟ್ಟಿಸಿಕೊಳ್ಳುವ ತವಕಕ್ಕೆ ಬೀಳಲಿಲ್ಲ ಎಂದರು.
ಸೋನಿಯಾ ಕಲಂ 371ಜೆ ಭರವಸೆ ನೀಡಿದ ನಂತರವೇ ಲೋಕಸಭೆಗೆ ಸ್ಪರ್ಧಿಸಿದೆ:ಕಲಂ 371ಜೆ ಆಗಬಾರದೆಂಬ ನಿಲುವು ಎಲ್ಕೆ ಆಡ್ವಾಣಿ ಅವರದ್ದಾಗಿತ್ತು. ಇದೇ ಸಂದರ್ಭದಲ್ಲಿ ಎದುರಾದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಸೋನಿಯಾ ಗಾಂಧಿ ಅವರು ನನಗೆ ಸೂಚಿಸಿದಾಗ ನಾನು ಕಲಂ 371ಜೆ ತಿದ್ದುಪಡಿ ಮಾಡಿಕೊಡುವದಾಗಿ ಭರವಸೆ ನೀಡಿದರೆ, ಮಾತ್ರ ಚುನಾವಣೆಗೆ ಸ್ಪರ್ಧಿಸುವದಾಗಿ ಹೇಳಿ ನಂತರ ಸೋನಿಯಾ ಅವರ ಸಹಕಾರದಿಂದ ಸರ್ವರ ಬೆಂಬಲದಿಂದ ಲೋಕಸಭೆಯಲ್ಲಿ ತಿದ್ದುಪಡಿಗೆ ಅಂಗೀಕಾರ ಸಿಕ್ಕುವಂತಾಯಿತು ಎಂದು ವಿವರಿಸಿದರು.
ಡಾ. ಅಂಬೇಡ್ಕರ್ ಜಯಂತಿಗೆ ಪೋಸ್ಟರ್ ಅಂಟಿಸುತ್ತ ಸಾಗಿ ಬಂದು ಇಲ್ಲಿಯವರೆಗೆ ರಾಜಕೀಯದಲ್ಲಿ ಉಳಿದಿದ್ದೇನೆ. ನೀವೂ ಗಟ್ಟಿಯಾಗಿರಿ, ನಾವು ಕೊನೆಯ ಹಂತದಲ್ಲಿದ್ದೇವೆ. ಜನರನ್ನು ನಮ್ಮ ಶರಣರ ತತ್ವ, ಡಾ. ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ನಡೆಯುವ ನಮ್ಮ ಪಕ್ಷಕ್ಕೆ ಬೆಂಬಲಿಸುವಂತೆ ಮನವೊಲಿಸಿ ಎಂದು ಕರೆ ನೀಡಿದರು.ಹಾರ ತುರಾಯಿ ಫೋಟೋ ಬಿಡಿ, ನಮ್ಮಂಥವರ ಫೋಟೋ ನಿಮ್ಮ ಹೃದಯದಲ್ಲಿರಲಿ:ಗುರಮಿಟಕಲ್ ಕಲಬುರಗಿಗೆ ಹೆಚ್ಚು ಪ್ರೀತಿ ಇದ್ದರೂ ಜನ್ಮ ಸ್ಥಳ ಬೀದರ್ ಮರೆಯುವ ಹಾಗಿಲ್ಲ ಎಂದ ಅವರು, ವೇದಿಕೆ ಮೇಲೆ ಜಗಳ ಬಿಡಿ. ಹಾರ ಹಾಕುವದಕ್ಕೂ ಜಗಳವ. ಈ ಫೋಟೋ ತೆಗೆದುಕೊಂಡು ಏನು ಮಾಡ್ತೀರಿ ನಿಮ್ಮ ಹೃದಯದಲ್ಲಿ ನಮ್ಮಂಥವರ ಫೋಟೋ ಇದ್ರೆ ಸಾಕು. ನಿಮ್ಮ ಹೃದಯದಲ್ಲಿ ಜನರ ಫೋಟೋ, ಕೆಲಸ ಮಾಡಿದವರನ್ನು ನೆನಸಿಕೊಳ್ಳುವಂಥ ಫೋಟೋ ಇರಲಿ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಕಾರ್ಯಕರ್ತರು, ಮುಖಂಡರಿಗೆ ಕಿವಿ ಮಾತು ಹೇಳಿದರು.