ನಾನು ಈ ತಾಲೂಕಿಗೆ ಶಾಸಕನಾದ ಮೇಲೆ ಸತತವಾಗಿ ಹೇಮಾವತಿ ನೀರಿಗೆ ಹೋರಾಟ ಮಾಡಿ ತಾಲೂಕಿಗೆ ನೀರು ಹರಿಸಿದ್ದೇನೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ನಾನು ಈ ತಾಲೂಕಿಗೆ ಶಾಸಕನಾದ ಮೇಲೆ ಸತತವಾಗಿ ಹೇಮಾವತಿ ನೀರಿಗೆ ಹೋರಾಟ ಮಾಡಿ ತಾಲೂಕಿಗೆ ನೀರು ಹರಿಸಿದ್ದೇನೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.ತಾಲೂಕಿನ ನಾನಾ ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಸುಮಾರು ರು. 4.25 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಮಾತನಾಡಿದ ಅವರು, ನೀರಾವರಿ ಬಗ್ಗೆ ಪೂರ್ಣ ಮಾಹಿತಿ ಇದೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಹೇಮಾವತಿ ನೀರನ್ನು ತುಮಕೂರಿಗೂ ಬಿಟ್ಟಾಗ ಗುಬ್ಬಿಕೆರೆಗೂ ಐದು ದಿನಗಳ ನೀರು ಬಿಟ್ಟಿದ್ದೆ. ಈ ವಿಚಾರ ಹೇಮಾವತಿ ಹೋರಾಟಗಾರರಿಗೆ ಗೊತ್ತಿಲ್ಲ. ಹೇಮಾವತಿ ನೀರು ನಮ್ಮ ಜಿಲ್ಲೆಗೆ ಜೀವನಾಡಿಯಾಗಿದೆ. ಆದ್ದರಿಂದ ಲಿಂಕ್ ಕೆನಾಲ್ ಕಾಮಗಾರಿಗೆ ಸಂಪೂರ್ಣ ನನ್ನ ವಿರೋಧವಿದೆ. ಆಡಳಿತ ಪಕ್ಷದಲ್ಲಿ ಇರುವುದರಿಂದ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗುವುದಿಲ್ಲ. ಕಾಮಗಾರಿ ವಿಚಾರ ಸಿಎಂ ಗಮನಕ್ಕೆ ತಂದಿದ್ದೇನೆ.ಮಾಜಿ ಸಿಎಂ ಸಿದ್ದರಾಮಯ್ಯ ಕಾಲದಲ್ಲೂ ಅನುದಾನ ಕೊಟ್ಟಿದರು. ಈ ಅವಧಿಯಲ್ಲಿ ಕೆಲಸ ಮಾಡಿದಂಗೆ ನಾನು ಯಾವ ಅವಧಿಯಲ್ಲೂ ಕೆಲಸ ಮಾಡಿಲ್ಲ ಸಿದ್ದರಾಮಣ್ಣ ಅವರಿಂದ 300 ಕೋಟಿ ಅನುದಾನ ಸಿಕ್ಕಿದೆ. ಇದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿರುವೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಡೆಗಣಿಸಿದರೆ ಸರ್ಕಾರವೇ ಇರುವುದಿಲ್ಲ. ಮೂರು ವರ್ಷ ರಾಜ್ಯದ ಸಿಎಂ ಆಗಿ ಜನಪರ ಯೋಜನೆಗಳನ್ನು ಮಾಡಿದ್ದಾರೆ. ಅಹಿಂದ ನಾಯಕರಾಗಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಸಿದ್ದರಾಮಯ್ಯ ನಮ್ಮ ಜತೆಯಲ್ಲಿ ಇರುತ್ತಾರೆ. ಯಾರು ಕೂಡ ಅವರನ್ನ ಕಡೆಗಣಿಸುವುದಿಲ್ಲ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರಾದ ಯತೀಶ್, ವರಲಕ್ಷ್ಮಿ ರಮೇಶ್, ಮುಖಂಡರಾದ ಲಿಂಗರಾಜು, ಶಿವಾಜಿ ರಾವ್, ಕೃಷ್ಣಜಿ ರಾವ್, ಪ್ರವೀಣ್, ಚಿಕ್ಕರಾಮಯ್ಯ, ಸಂಪತ್ ಕುಮಾರ್, ನರಸಿಂಹಮೂರ್ತಿ, ಶಿವಲಿಂಗಯ್ಯ, ಗುರುಲಿಂಗಯ್ಳ, ಚಿಕ್ಕಮ್ಮ, ಪಿಡಿಒ ಅಶೋಕ್ , ಶ್ಯಾಮಲ,ಟಿಹೆಚ್ಒ ಡಾ.ಸವಿತ, ಇಂಜಿನಿಯರ್ ಎಇಇ ನಾಗೇಂದ್ರಪ್ಪ, ಇತರರು ಇದ್ದರು.