ನಾನು ಬಿಡಲ್ಲ, ಹೋರಾಡಿ ಭಾಗ್ಯಲಕ್ಷ್ಮಿ ಬಾಂಡ್‌ ಹಣ ಕೊಡಿಸ್ತೇನೆ: ಬಿ.ಎಸ್‌.ಯಡಿಯೂರಪ್ಪ

| Published : Nov 10 2024, 01:45 AM IST / Updated: Nov 10 2024, 07:20 AM IST

 Yediyurappa
ನಾನು ಬಿಡಲ್ಲ, ಹೋರಾಡಿ ಭಾಗ್ಯಲಕ್ಷ್ಮಿ ಬಾಂಡ್‌ ಹಣ ಕೊಡಿಸ್ತೇನೆ: ಬಿ.ಎಸ್‌.ಯಡಿಯೂರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

  ನಾನು ‘ಭಾಗ್ಯಲಕ್ಷ್ಮೀ’ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ಈಗ ಈ ಬಾಂಡ್‌ಗಳು ಮೆಚ್ಯುರಿಟಿಗೆ ಬಂದಿದ್ದರೂ ಅದನ್ನು ಕೊಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಆದರೆ, ನಾನು ಬಿಡುವುದಿಲ್ಲ. ಹೋರಾಟ ಮಾಡಿಯಾದರೂ ಆ ಹಣವನ್ನು ಕೊಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ 

 ಬಳ್ಳಾರಿ : ದೇಶದಲ್ಲಿಯೇ ಮೊದಲ ಬಾರಿಗೆ ನಾನು ‘ಭಾಗ್ಯಲಕ್ಷ್ಮೀ’ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ಈಗ ಈ ಬಾಂಡ್‌ಗಳು ಮೆಚ್ಯುರಿಟಿಗೆ ಬಂದಿದ್ದರೂ ಅದನ್ನು ಕೊಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಆದರೆ, ನಾನು ಬಿಡುವುದಿಲ್ಲ. ಹೋರಾಟ ಮಾಡಿಯಾದರೂ ಆ ಹಣವನ್ನು ಕೊಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಸಂಡೂರು ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಅವರು ಭರ್ಜರಿ ಪ್ರಚಾರ ನಡೆಸಿ, ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವ ದೃಷ್ಟಿಯಿಂದ ನಾನು ಈ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ಕಳೆದ ಏಪ್ರೀಲ್‌ ತಿಂಗಳಿನಿಂದಲೇ ‘ಭಾಗ್ಯಲಕ್ಷ್ಮೀ’ ಬಾಂಡ್‌ಗಳು ಮೆಚ್ಯುರಿಟಿಗೆ ಬಂದಿವೆ. ಆದರೆ, ಇದನ್ನು ಕೊಡಲು ಸರ್ಕಾರದ ಬಳಿ ಹಣವೇ ಇಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಜನೋಪಯೋಗಿ ಕೆಲಸಗಳು ಜಾರಿಯಾಗುತ್ತಿಲ್ಲ. ಆದರೆ, ನಾನು ಬಿಡುವುದಿಲ್ಲ. ಹೋರಾಟ ಮಾಡಿಯಾದರೂ ಆ ಹಣವನ್ನು ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಿದ್ದು ಕೂಡ ನಾನು. ಆದರೆ, ಈ ಸರ್ಕಾರಕ್ಕೆ ಜನಪರ ಕಾಳಜಿಯೇ ಇಲ್ಲ. ಜನರ ಹಿತ ಮರೆತು ತುಘಲಕ್ ದರ್ಬಾರ್ ನಡೆಸುವ ಸರಕಾರಕ್ಕೆ ಈ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಏನಿದು ಯೋಜನೆ?:

ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವ ದೃಷ್ಟಿಯಿಂದ 2006ರಲ್ಲಿ ಅಂದಿನ ಡಿಸಿಎಂ ಯಡಿಯೂರಪ್ಪ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದರು. ಹೆಣ್ಣುಮಕ್ಕಳಿಗೆ 18 ವರ್ಷವಾದಾಗ ನೀಡುವ ಹಣ ಇದಾಗಿದ್ದು, ಕಳೆದ ಏಪ್ರಿಲ್‌ನಿಂದಲೇ ಬಾಂಡ್‌ಗಳು ಮೆಚ್ಯುರಿಟಿಯಾಗಲು ಆರಂಭಿಸಿವೆಯಾದರೂ, ತಾಂತ್ರಿಕ ಅಡಚಣೆಯಿಂದಾಗಿ ಈವರೆಗೂ ಯಾವುದೇ ಫಲಾನುಭವಿಯ ಖಾತೆಗೂ ಹಣ ಜಮೆಯಾಗಿಲ್ಲ. ಈ ಬಗ್ಗೆ ನ.4ರಂದು ‘ಕನ್ನಡಪ್ರಭ’ ಮುಖಪುಟದಲ್ಲಿ ವಿಶೇಷ ವರದಿ ಮಾಡಿತ್ತು.