ಹೂವಿನಹಡಗಲಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದು ನನ್ನ ದುರದೃಷ್ಟ. ಈ ಕುರಿತು ನಾನು ಯಾರನ್ನು ಟೀಕಿಸಲು ಹೋಗಲ್ಲ. ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವೆ ಎಂದು ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.

ತಾಲೂಕಿನ ಕಾಂತೇಬೆನ್ನೂರು ಗ್ರಾಮದಲ್ಲಿ ಹಿರಿಯ ವಕೀಲ ಎಸ್‌.ಎಸ್‌.ಗುತ್ತಲ ಅವರ ಬೆಂಬಲಿಗರು ಬಿಜೆಪಿ ತೊರೆದು, ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮ ನಿಲುವು ಅಭಿವೃದ್ಧಿ ಪರವಾಗಿರಬೇಕು. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಪಕ್ಷಕ್ಕೆ ಯಶಸ್ಸು ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ತಾವು 72 ಸಾವಿರ ಮತಗಳನ್ನು ನೀಡಿದ್ದೀರಿ. ಹೀನಾಯ ಸೋಲಲ್ಲ. ಗೌರವಯುತವಾದ ಸೋಲು ಎಂದುಕೊಂಡಿದ್ದೇನೆಂದು ಹೇಳಿದರು.

ಜನ ಚುನಾವಣೆಗಳು ಯಾವಾಗ ಬರುತ್ತವೆಂದು ತುದಿಗಾಲಲ್ಲಿ ನಿಂತಿದ್ದಾರೆ. ಕಾಂತೇಬೆನ್ನೂರು ಗ್ರಾಮದ ಹಿರಿಯ ವಕೀಲ ಎಸ್‌.ಎಸ್‌.ಗುತ್ತಲ ಯಾವುದೇ ಆಸೆ ಆಮಿಷೆಗಳಿಗೆ ಬಲಿಯಾಗುವ ವ್ಯಕ್ತಿ ಅಲ್ಲ, ಅವರ ಆತ್ಮಗೌರವಕ್ಕೆ ಧಕ್ಕೆ ಬಂದರೆ ಆ ಜಾಗದಲ್ಲಿ ಅವರು ಇರಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದಾರೆಂದು ಹೇಳಿದರು.

ಬಿಜೆಪಿ ಬಡವರ ಪರವಾದ ಪಕ್ಷ ಅಲ್ಲ. ಇದಕ್ಕಾಗಿಯೇ ನರೇಗಾ ಯೋಜನೆಯನ್ನು ಬದಲಾವಣೆ ಮಾಡಿ ಬಡವರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬಂಗಾರ, ಪೆಟ್ರೋಲ್‌, ಡೀಸೆಲ್‌ ಮಿತವಾಗಿ ಬಳಸಿ, ವಿದೇಶ ಪ್ರವಾಸ ಮುಂದೂಡಿ... ಹೀಗೆಲ್ಲ ಹೇಳಿಕೆ ನೀಡಿ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಭಾರತ ಬಲಿಷ್ಠವಾಗಿದೆ. ವಿಶ್ವಸಂಸ್ಥೆಯಲ್ಲಿ ಖಾಯಂ ಸ್ಥಾನ ಪಡೆಯುವಂತಹ ಈ ಸಂದರ್ಭದಲ್ಲಿ ಇಂತಹ ಹೇಳಿಕೆ ಸರಿಯಲ್ಲ. ಡಾಲರ್‌ ಮುಗಿಲು ಮುಟ್ಟಿದೆ. ರುಪಾಯಿ ಪಾತಾಳಕ್ಕೆ ಹೋಗಿದೆ. ಇದಕ್ಕೆ ಬಿಜೆಪಿ ಸರ್ಕಾರವೇ ಕಾರಣ ಎಂದು ಟೀಕಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಬಿ.ಹನುಮಂತಪ್ಪ, ಅಟವಾಳಗಿ ಕೊಟ್ರೇಶ, ಪ್ರಚಾರ ಸಮಿತಿ ಅಧ್ಯಕ್ಷ ಎಸ್‌.ಹಾಲೇಶ, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ಪಾಟೀಲ್‌ ಬಸವನಗೌಡ, ಜ್ಯೋತಿ ಮಲ್ಲಣ್ಣ, ದೂದಾನಾಯ್ಕ, ಗುರುಪಾದಗೌಡ, ಎಸ್ಟಿ ಘಟಕದ ಅಧ್ಯಕ್ಷ ಅಂಗಡಿ ಗೀರೇಶ, ಎಸ್ಸಿ ಘಟಕದ ತಾಲೂಕ ಅಧ್ಯಕ್ಷ ಎಂ.ಗುಡದಯ್ಯ, ಜಿ.ವಸಂತ, ಶಾಂತನಗೌಡ, ಮಂಜಪ್ಪ, ಗುಂಡಿ ಚರಣ, ಹುಂಡಿ ಗೌಸ್‌ ಮೋಹಿದ್ದೀನ್‌, ಎಚ್‌.ಮಂಜುನಾಥ, ಜೆ.ಬಸವರಾಜ, ಬಸವರಾಜ, ಎಸ್‌.ಸುಧಾಕರ, ರಾಜೇಂದ್ರಪ್ಪ, ಮಲ್ಲಿಕಾರ್ಜುನ, ಕೊಳಚಿ ಬುಳ್ಳಪ್ಪ, ಕೆ.ಜಿ.ಹನುಮಂತಪ್ಪ ಇದ್ದರು.