ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ವಿಕಸಿತ ಕೃಷಿ ಸಂಕಲ್ಪಅಭಿಯಾನದ 10ನೇ ದಿನವಾದ ಭಾನುವಾರ ಮೈಸೂರು ತಾಲೂಕು ಜಯಪುರ, ದಾರಿಪುರ ಹಾಗೂ ಹುಣಸೂರು ತಾಲೂಕಿನ ಮಾಚಬಯನಹಳ್ಳಿ ಗ್ರಾಮಗಳಲ್ಲಿ ಸುತ್ತೂರು ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಸಂಬಂಧಿತ ಇಲಾಖೆ ಸಹಯೋಗದಲ್ಲಿ ಪಶು ಸಂಗೋಪನೆ ಕುರಿತು ಮಾಹಿತಿ ನೀಡಲಾಯಿತು.ಡಾ. ರಕ್ಷಿತ್ ರಾಜ್, ಕೇಂದ್ರ ಸರ್ಕಾರದ ಕೃಷಿ ಮತ್ತು ಪಶು ಸಂಗೋಪನೆ ಯೋಜನೆಗಳು ಹಾಗೂ ಮೇವು ಬೆಳೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಬೆಂಗಳೂರಿನ ರಾಷ್ಟ್ರೀಯ ಪಶು ಆಹಾರ ಮತ್ತು ಶರೀರ ಕ್ರಿಯಾಶಾಸ್ತ್ರ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಕಾಜಲ್ ಶಂಕರ್ ರಾಯ್ ಹಸುಗಳಲ್ಲಿ ಬಂಜೆತನ ಸಮಸ್ಯೆಗೆ ಖನಿಜ ಮಿಶ್ರಣ ಮತ್ತು ಹಾರ್ಮೋನ್ ಗಳನ್ನು ಬಳಸಬೇಕು ಎಂದು ತಿಳಿಸಿದರು.
ಹಾಲಿನಲ್ಲಿ ಕೊಬ್ಬು ಮತ್ತು ಡಿಗ್ರಿ ಸಮಸ್ಯೆ ಕಂಡು ಬಂದಲ್ಲಿ ಬೈಪಾಸ್ ಫ್ಯಾಟ್ ಮತ್ತು ಕೆಎಂಎಫ್ ಸಮೃದ್ಧಿಯಂತಹ ಉತ್ಪನ್ನಗಳನ್ನು ಬಳಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅವರು ಮನವರಿಕೆ ಮಾಡಿಕೊಟ್ಟರು.ರಾಷ್ಟ್ರೀಯ ಡೇರಿ ಅಧ್ಯಯನ ಸಂಸ್ಥೆಯ ವಿಜ್ಞಾನಿ ಡಾ. ಶಿವಸ್ವಾಮಿ ಮಾತನಾಡಿ, ರೈತರು ಕೃಷಿಯ ಜೊತೆಗೆ ಹೈನುಗಾರಿಕೆ ಮಾಡುವುದರಿಂದ ಹೆಚ್ಚಿನ ಲಾಭಗಳಿಸಬಹುದು. ಹಾಲು ಒಂದು ಸಂಪೂರ್ಣ ಆಹಾರ. ಇದರಿಂದ ಅನೇಕ ಉಪ ಉತ್ಪನ್ನಗಳನ್ನು ತಯಾರಿಸಿ ದಿನನಿತ್ಯ ಬಳಸಿದರೆ ಆರೋಗ್ಯವನ್ನು ಉತ್ತಮವಾಗಿ ಪಡೆಯಬಹುದು. ರೈತರು ದೇಸಿ ತಳಿಯಾದ ಹಳ್ಳಿಕಾರ್ ತಳಿಯನ್ನು ಹೆಚ್ಚು ಸಾಕಬೇಕು ಎಂದು ತಿಳಿಸಿದರು.
ಬೆಂಗಳೂರಿನ ಭಾರತೀಯ ಪಶು ಚಿಕಿತ್ಸೆ ಸಂಶೋಧನೆ ಸಂಸ್ಥೆಯ ಡಾ. ಬಸವರಾಜ್ ಸಜ್ಜಣ್ಣ ಮುಂಗಾರಿನಲ್ಲಿ ಪಶುಗಳಲ್ಲಿ ಕಂಡುಬರುವ ರೋಗಗಳು ಅದರ ಲಕ್ಷಣಗಳು, ಹಸುಗಳಲ್ಲಿ ಕಂಡು ಬರುವ ಕೆಚ್ಚಲು ಭಾವುರೋಗ, ಹುಣ್ಣೆ ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು.ಪಶು ಚಿಕಿತ್ಸೆ ಸಂಶೋಧನಾ ಕೇಂದ್ರದ ಡಾ. ಸಬಾರಿನಾಥ್, ಸಂಶೋಧನಾ ಕೇಂದ್ರದ ಕೆಲಸ ವೈಖರಿಯ ಕುರಿತು ಮಾಹಿತಿ ನೀಡಿದರು.
ಡಾ.ಜಿ.ಎಂ. ವಿನಯ್ ಅವರು, ಮಣ್ಣು ಪರೀಕ್ಷೆಯ ವಿಧಾನ ಹಾಗೂ ಅದರ ಉಪಯೋಗ, ಸಾವಯವ, ಹಸಿರೆಲೆ ಗೊಬ್ಬರದ ಬಳಕೆ, ಬೇವಿನ ಹಿಂಡಿ ಬಳಕೆ ಮಾಡುವುದರಿಂದ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದರು.ಮಣ್ಣು ಪರೀಕ್ಷೆಯ ಆಧಾರದ ಮೇಲೆ ಬೆಳೆಗಳ ಆಯ್ಕೆ, ತಳಿಗಳ ಆಯ್ಕೆ ಹಾಗೂ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ನೀಡಿ ಹಾಗೂ ಲಘು ಪೋಷಕಾಂಶಗಳಾದ ತರಕಾರಿ ಸಮೃದ್ಧಿ, ಬಾಳೆ ಸಮೃದ್ಧಿ ಹಾಗೂ ಇತರ ಲಘು ಪೋಷಕಾಂಶಗಳ ಬಳಕೆ ಕುರಿತು ಮಾಹಿತಿ ನೀಡಿದರು.
ಡಾ.ವೈ.ಪಿ. ಪ್ರಸಾದ್ , ಬಾಳೆಯಲ್ಲಿ ಬರುವ ಪನಾಮಾ ರೋಗ ಹಾಗೂ ಎಲೆ ಚುಕ್ಕೆ ರೋಗದ ಲಕ್ಷಣ ಹಾಗೂ ಅವುಗಳ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಬಳಿಕ ಮೆಣಸಿನ ಕಾಯಿಯಲ್ಲಿ ಮುಖ್ಯವಾಗಿ ಬರುವ ಎಲೆ ಮೂಟುರು ರೋಗ, ಟೊಮೋಟೋದಲ್ಲಿ ಬರುವ ಅಂಗಮಾರಿ ರೋಗದ ಲಕ್ಷಣ ಹಾಗೂ ಅದರ ರೋಗದ ಸಮಗ್ರ ನಿರ್ವಹಣೆ ಕುರಿತು ವಿವರಿಸಿದರು.ಡಾ. ದೀಪಕ್, ರೈತರು ಬೆಳೆ ಉತ್ಪಾದನೆ ಜೊತೆಗೆ ಮೌಲ್ಯವರ್ಧನೆ ಕಡೆಗೆ ಗಮನ ಹರಿಸಿದರೆ ಹೆಚ್ಚಿನ ಲಾಭ ಗಳಿಸಬಹುದು. ಮಹಿಳೆಯರು ಸ್ವ ಸಹಾಯ ಸಂಘಗಳನ್ನು ನಿರ್ಮಿಸಿಕೊಂಡು ಆಹಾರ ಪದಾರ್ಥಗಳ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಆರ್ಥಿಕವಾಗಿ ಸದೃಢರಾಗಬಹುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ 670ಕ್ಕೂ ಹೆಚ್ಚಿನ ರೈತರು, ರೈತ ಮಹಿಳೆಯರು ಪಾಲ್ಗೊಂಡಿದ್ದರು.