ಹೆಣ್ಣೊಂದು ಕಲಿತರೆ ಸಮಾಜದಲ್ಲಿ ಬದಲಾವಣೆ ಆಗಲು ಸಾಧ್ಯ: ಗಿರೀಶ್‌

| Published : Jul 28 2025, 12:30 AM IST

ಸಾರಾಂಶ

ಹೆಣ್ಣೊಂದು ಕಲಿತರೆ ಇಡೀ ಸಮಾಜ ಬದಲಾವಣೆ ಮಾಡುವ ಶಕ್ತಿ ಅವರಲ್ಲಿ ಬರುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಸೇರಿದಂತೆ ಬಹುತೇಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಮಹಿಳಾ ಸಂಘಟನೆಗಳಿಗೆ ಇದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗಿರೀಶ್‌ ಕುಲಕರ್ಣಿ ಹೇಳಿದರು.

ಕೆಂಭಾವಿ: ಹೆಣ್ಣೊಂದು ಕಲಿತರೆ ಇಡೀ ಸಮಾಜ ಬದಲಾವಣೆ ಮಾಡುವ ಶಕ್ತಿ ಅವರಲ್ಲಿ ಬರುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಸೇರಿದಂತೆ ಬಹುತೇಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಮಹಿಳಾ ಸಂಘಟನೆಗಳಿಗೆ ಇದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗಿರೀಶ್‌ ಕುಲಕರ್ಣಿ ಹೇಳಿದರು.

ಪಟ್ಟಣದಲ್ಲಿ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಹಮ್ಮಿಕೊಂಡಿದ್ದ ಸಾಮಾಜಿಕ-ಆರ್ಥಿಕ, ಜ್ಞಾನದಿಂದ ಉತ್ತಮ ಜೀವನ ನಿರ್ಮಾಣ ಹಾಗೂ ಹಣಕಾಸು ಸಾಕ್ಷರತೆ ಕುರಿತು ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕುಗಳಿಂದ ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ತೆಗೆದುಕೊಳ್ಳುವ ಮಹಿಳೆಯರು ಸರಿಯಾದ ಸಮಯಕ್ಕೆ ಮರುಪಾವತಿಸುವಂತಾಗಬೇಕು. ಹಣಕಾಸು ಸಂಸ್ಥೆಗಳಿಂದ ಉಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಮಾಜದಲ್ಲಿ ಸಬಲರಾಗಬೇಕು. ಇದೇ ಸಮಯದಲ್ಲಿ ಆರೋಗ್ಯದ ಕಡೆಗೂ ಹೆಚ್ಚಿನ ಗಮನವಿರಬೇಕು ಎಂದು ತಿಳಿಸಿದರು.

ಪಿಎಸ್‌ಐ ಹಣಮಂತರಾಯ ಮ್ಯಾಗೇರಿ ಮಾತನಾಡಿ, ಸಾಲವನ್ನು ತೆಗೆದುಕೊಳ್ಳುವವರು ಉತ್ತಮ ಉದ್ದೇಶಕ್ಕಾಗಿ ಅದನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಬೇಕು. ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕು. ಬ್ಯಾಂಕ್ ಓಟಿಪಿಯನ್ನು ಅನ್ಯ ವ್ಯಕ್ತಿಗಳಿಗೆ ಹೇಳಬಾರದು ಎಂದು ಕಿವಿಮಾತು ಹೇಳಿದರು.

ಪ್ರಾದೇಶಿಕ ವ್ಯವಸ್ಥಾಪಕ ಶರಣಪ್ಪ ಚಿಂಚೋಳಿ ಅಧ್ಯಕ್ಷತೆ ವಹಿಸಿದ್ದರು. ಉಪ ತಹಸೀಲ್ದಾರ ಪ್ರವೀಣಕುಮಾರ ಸಜ್ಜನ, ಕಲಬುರಗಿಯ ಬಿಎಸ್‌ಐ ಅಧಿಕಾರಿ ಚಂದ್ರಶೇಖರ, ಪ್ರಕಾಶ, ಪಿಎಸ್‌ಐ ರಮೇಶ, ಎಎಸ್‌ಐ ರವೀಂದ್ರ, ಸುರೇಖಾ ಕುಲಕರ್ಣಿ ಸೇರಿದಂತೆ ಹಲವರಿದ್ದರು.

ಬ್ಯಾಂಕ್ ವ್ಯವಸ್ಥಾಪಕ ಜಗದೀಶ ಆಲಮೇಲ ನಿರೂಪಿಸಿದರು. ವಲಯ ವ್ಯವಸ್ಥಾಪಕ ಪ್ರಹ್ಲಾದ ಸ್ವಾಗತಿಸಿದರು.